ಬಿಗ್ ಬಾಸ್ ಪ್ರಥಮ್ - ಕಲ್ಲಡ್ಕ ಪ್ರಭಾಕರ್ ಭಟ್ ಭೇಟಿಯ ಮರ್ಮವೇನು?
ಮಂಗಳೂರು, ಜನವರಿ 23: ಆರೆಸ್ಸೆಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ನಡೆಸುತ್ತಿರುವ ಬಂಟ್ವಾಳದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಬಿಗ್ ಬಾಸ್ ವಿಜೇತ ಪ್ರಥಮ್ ಶುಕ್ರವಾರ (ಜ. 19) ಭೇಟಿ ನೀಡಿದ್ದಾರೆ.
ಈ ವೇಳೆ ಸುಮಾರು ಎರಡು ಗಂಟೆಗಳ ಕಾಲ ಶಾಲೆಯ ಮಕ್ಕಳೊಂದಿಗೆ ಬೆರೆತ ಪ್ರಥಮ್ ನಂತರ ಪ್ರಭಾಕರ್ ಭಟ್ ಜತೆ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದು ಕುತೂಹಲ ಕೆರಳಿಸಿದೆ.
ಇದು ಎಲೆಕ್ಷನ್ ಜ್ವರ, ಸಂದರ್ಶನದಲ್ಲಿ ಬಯಲಾಯ್ತು ಪ್ರಥಮ್ ಬಿಜೆಪಿ ಒಲವು
ಶಾಲೆಯ ಮಕ್ಕಳ ಮಧ್ಯಾಹ್ನದ ಬಿಸಿಯೂಟದ ಅನುದಾನವನ್ನು ರಾಜ್ಯ ಸರಕಾರ ಕಡಿತಗೊಳಿಸಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಥಮ್ ವಿರೋಧಿಸಿ ಮಾತಿನ ಚಾಟಿ ಏಟು ಬೀಸಿದ್ದರು. ಈ ಹಿನ್ನೆಲೆಯಲ್ಲಿ ಕಲ್ಲಡ್ಕ ಶಾಲೆಗೆ ಭೇಟಿ ನೀಡಿದ ಪ್ರಥಮ್ ಮಕ್ಕಳ ಹೋರಾಟಕ್ಕೆ ನೈತಿಕ ಬೆಂಬಲ ಸೂಚಿಸಿದರು.
ನಂತರ ಶಾಲೆಯ ಗೋಶಾಲೆಗೆ ಭೇಟಿ ನೀಡಿ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಥಮ್ ಗೋವುಗಳೊಂದಿಗೂ ಕೆಲಕಾಲ ಕಳೆದರು.
ಈಗಾಗಲೇ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುವ ಪ್ರಥಮ್ ಆರೆಸ್ಸೆಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಭೇಟಿಯಾಗಿದ್ದಾರೆ. ಇದು ರಾಜಕೀಯ ಭೇಟಿಯೋ? ಸೌಹಾರ್ದ ಭೇಟಿಯೋ ಎಂಬುದು ತಿಳಿದು ಬಂದಿಲ್ಲ.