ಬೆಂಗ್ರೆ ಶಿವರಾಜ್ ಕೊಲೆಯ ಪ್ರಮುಖ ಆರೋಪಿಗಳು ಪೊಲೀಸರ ಬಲೆಗೆ
ಮಂಗಳೂರು, ಫೆಬ್ರವರಿ 10 : ಮಂಗಳೂರು ಹೊರವಲಯದ ಪಣಂಬೂರಿನ ಬೆಂಗ್ರೆಯಲ್ಲಿ ನಡೆದ ಶಿವರಾಜ್ (39) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಿಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಶಿವರಾಜ್ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಬೆಂಗ್ರೆ ನಿವಾಸಿಗಳಾದ ಅನೀಶ್ ಅಮೀನ್ (26) ಮತ್ತು ವಿತರಾಜ್ (23) ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಶಿವರಾಜ್ ಕೊಲೆ ಮಾಡಿದ ಬಳಿಕ ಈ ಇಬ್ಬರು ತಲೆ ಮರೆಸಿಕೊಂಡಿದ್ದರು.
ಕೊಲೆಗೆ ಸಂಚು, ಮಂಗಳೂರು ಸಿಸಿಬಿ ಪೊಲೀಸರ ಬಲೆಗೆ ಬಿದ್ದ ಖದೀಮರು
ಜನವರಿ 22ರಂದು ಬೆಳಗ್ಗೆ 4.30ರ ಹೊತ್ತಿಗೆ ಮನೆಯ ಮಹಡಿ ಮೇಲೆ ಮಲಗಿದ್ದ ಶಿವರಾಜ್ ನನ್ನು ಆರೋಪಿಗಳು ಮಾರಕಾಸ್ತ್ರ ಗಳಿಂದ ಕಡಿದು ಹಾಕಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಶಿವರಾಜ್ ಅವರನ್ನು ಆಸ್ಪತ್ರೆ ಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶಿವರಾಜ್ ಮೃತಪಟ್ಟಿದ್ದರು.
ಈ ಘಟನೆಗೆ ಸಂಬಂಧಪಟ್ಟಂತೆ ಶಿವರಾಜ್ ಸಹೋದರ ಜಯರಾಜ್ ಪಣಂಬೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದರು ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಪೈಕಿ ಸುನೀಲ್ ಪೂಜಾರಿ, ಧೀರಜ್, ಮಲ್ಲೇಶ ಯಾನೆ ಮಾದೇಶ ಎಂಬವರನ್ನು ಈ ಹಿಂದೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿಗಳು ಕೃತ್ಯ ನಡೆಸಿದ ನಂತರ ನೇರವಾಗಿ ಬೆಂಗಳೂರಿಗೆ ಹೋಗಿ ಅಲ್ಲಿಂದ ಒಡಿಶಾ, ಅಸ್ಸಾಂ, ನಾಗಲ್ಯಾಂಡ್ ಮುಂತಾದ ಕಡೆ ತಲೆಮರೆಸಿಕೊಂಡಿದ್ದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರ ತಂಡ, ಅಂತಿಮವಾಗಿ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.