6 ತಿಂಗಳ ಹಿಂದಿನ ಪ್ರಕರಣ ಭೇದಿಸುವಲ್ಲಿ ಬೆಳ್ತಂಗಡಿ ಪೊಲೀಸರು ಯಶಸ್ವಿ
ಮಂಗಳೂರು, ಡಿಸೆಂಬರ್ 13 : ಕಳೆದ ಜೂನ್ 10ರಂದು ನಡೆದ ಉಜಿರೆ ದಮಾಸ್ ಗೋಲ್ಡ್ ಜ್ಯುವೆಲ್ಲರಿ ಕಳವು ಯತ್ನ ಪ್ರಕರಣವನ್ನು ಭೇದಿಸುವಲ್ಲಿ ಬೆಳ್ತಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜೂನ್ 10 ರಂದು ಉಜಿರೆ ದಮಾಸ್ ಗೋಲ್ಡ್ ಜ್ಯುವೆಲ್ಲರಿ ಳವು ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ ಮಧುಗಿರಿಯ ಮಂಜುನಾಥ ಯಾನೆ ಕೋಳಿ ಮಂಜ ಹಾಗೂ ಮಹಾಂತೇಶ್ ಎಂಬುವರನ್ನು ಸೋಮವಾರ ಮಧುಗಿರಿಯಲ್ಲಿ ಬಂಧಿಸಿದ್ದಾರೆ.
ಸುಮಾರು ಆರು ತಿಂಗಳಿನ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನಿರ್ದೇಶನದಂತೆ ಬಂಟ್ವಾಳ ಉಪ ವಿಭಾಗದ ಪೊಲೀಸ್ ಉಪಧೀಕ್ಷಕ ಮತ್ತು ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಬೆಳ್ತಂಗಡಿ ಪೊಲೀಸ್ ಉಪ ನಿರೀಕ್ಷಕ ರವಿ ಬಿ ಎಸ್ ನೇತೃತ್ವದ ತಂಡ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಮಂಜುನಾಥ ಯಾನೆ ಕೋಳಿ ಮಂಜ ಹಾಗೂ ಮಹಾಂತೇಶ್ ಇವರಿಬ್ಬರನ್ನ ಮಧುಗಿರಿಯಲ್ಲಿ ಬಂಧಿಸಲಾಗಿದೆ. ಅಲ್ಲದೇ ಕೃತ್ಯಕ್ಕೆ ಉಪಯೋಗಿಸಿದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಬೆಳ್ತಂಗಡಿ ಪೊಲೀಸ್ ಠಾಣಾ ಪಿಎಸ್ಐ ರವಿ ಬಿಎಸ್ ಸೇರಿ ಎಎಸ್ಐ ಕರುಣಾಕರ, ಮಂಗಳೂರು ಬೆರಳುಮುದ್ರೆ ಘಟಕದ ತಜ್ಞ ಸತೀಶ್ , ಕನಕರಾಜ್, ಧರ್ಮಪಾಲ, ಶಿವರಾಮ ರೈ, ನಾಗರಾಜ್, ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ಎಎನ್ಎಫ್ ಸಿಬ್ಬಂದಿ ಯತೀಂದ್ರ, ಹರೀಶ್, ಸತೀಶ್ ಮತ್ತು ಹರೀಶ್ ಸಹ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು