ಸೂಸೈಡ್ ಪಾಯಿಂಟ್ ಆಗುತ್ತಿದೆಯೇ ಬೆಳ್ತಂಗಡಿಯ ಗುರುವಾಯನ ಕೆರೆ?
ಮಂಗಳೂರು, ಆಗಸ್ಟ್ 6: ಬೆಳ್ತಂಗಡಿಯ ಗುರುವಾಯನ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಸೋಮವಾರ ಮತ್ತೆ ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿ ಈ ಘಟನೆ ನಡೆದಿದೆ.
ಗುರುವಾಯನಕೆರೆಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಗುರುವಾಯನ ಕೆರೆ ಬಳಿಯ ಶಕ್ತಿನಗರದ ನಿವಾಸಿ ಸುಧೀಶ್ ಜೈನ್(33) ಎಂದು ಗುರುತಿಸಲಾಗಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಸುಧೀಶ್ ಜೈನ್ ಭಾನುವಾರ ಸಂಜೆಯಿಂದ ನಾಪತ್ತೆಯಾಗಿದ್ದರು.
ಚಾರ್ಮಾಡಿಯಲ್ಲಿ ಬಾವಿಗೆ ಬಿದ್ದ ರಿಕ್ಷಾ: ಮಗು ದುರ್ಮರಣ
ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಜುಲೈ 26ರಂದು ಗುರುವಾಯನ ಕೆರೆಯಲ್ಲಿ ಬೆಂಗಳೂರು ಮೂಲದ ವಿದ್ಯಾರ್ಥಿಯೊಬ್ಬನ ಮೃತದೇಹ ಪತ್ತೆಯಾಗಿತ್ತು. ಜುಲೈ 25 ರಂದು ಸಂಜೆ ಕೆರೆಯ ದಡದಲ್ಲಿ ವಿದ್ಯಾರ್ಥಿ ಬ್ಯಾಗ್ ಪತ್ತೆಯಾಗಿತ್ತು. ಜುಲೈ 26ರ ಬೆಳಗ್ಗೆ ಕೆರೆಯಲ್ಲಿ ವಿದ್ಯಾರ್ಥಿಯ ಮೃತದೇಹ ಕಾಣಿಸಿಕೊಂಡಿತ್ತು.
ಮೃತಪಟ್ಟ ಬೆಂಗಳೂರಿನ ಐಟಿಐ ವಿದ್ಯಾಮಂದಿರ ವಿದ್ಯಾರ್ಥಿಯನ್ನು ಯಶವಂತ್ ಸಾಯಿ ಎಂದು ಗುರುತಿಸಲಾಗಿತ್ತು. ಮೆಜೆಸ್ಟಿಕ್ನಿಂದ ನೇರ ಮಂಗಳೂರಿಗೆ ಟಿಕೆಟ್ ಪಡೆದಿದ್ದ ಯಶವಂತ್ ಬೆಳ್ತಂಗಡಿಯಲ್ಲೇ ಇಳಿದಿದ್ದಾನೆ. ಆ ನಂತರ ಬೇರೊಂದು ಬಸ್ನಲ್ಲಿ ಕಾರ್ಕಳಕ್ಕೆ ಟಿಕೆಟ್ ಪಡೆದು, ದಾರಿ ಮಧ್ಯೆ ಗುರುವಾಯನ ಕೆರೆ ಬಳಿ ಇಳಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ಕಳೆದ 10 ದಿನಗಳಲ್ಲಿ ಗುರುವಾಯನ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಂಥ ಇದು ಎರಡನೇ ಘಟನೆಯಾಗಿದೆ. ಒಂದು ಕಾಲದಲ್ಲಿ ಊರಿನ 50 ಎಕರೆ ಪ್ರದೇಶದ ಗದ್ದೆಯಲ್ಲಿ ಮೂರು ಬೆಳೆ ಮಾಡಲು ಉಪಯೋಗವಾಗುತ್ತಿದ್ದ ಕೆರೆ ಇದಾಗಿತ್ತು.
7 ಎಕರೆ ವಿಸ್ತಾರ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಕೆರೆ ಮಳೆಗಾಲದಲ್ಲಿ ನೀರು ತುಂಬಿ ಸಮುದ್ರದಂತೆ ಕಂಡುಬರುತ್ತದೆ. ಕೃಷಿಗೆ ನೀರೊದಗಿಸುತ್ತಿರುವ ಈ ಸುಂದರ ಕೆರೆ ಈಗ ಸೂಸೈಡ್ ಪಾಯಿಂಟ್ ಆಗಿ ಪರಿವರ್ತನೆ ಆಗುತ್ತಿರುವ ಬಗ್ಗೆ ಸ್ಥಳೀಯರು ಕಳವಳ ವ್ಯಕ್ತ ಪಡಿಸಿದ್ದಾರೆ.