ಶೋಭಾ ಕರಂದ್ಲಾಜೆಯವರಿಂದ ಕಲ್ಲಡ್ಕ ಶಾಲೆಗೆ ಅಕ್ಕಿ ಭಿಕ್ಷೆ ಅಭಿಯಾನ
ಮಂಗಳೂರು, ಆಗಸ್ಟ್ 17: ಕಲ್ಲಡ್ಕದ ಶಾಲೆಗಳಿಗೆ ಅನುದಾನ ಕಡಿತಗೊಳಿಸಿರುವುದನ್ನು ವಿರೋಧಿಸಿ ಹಾಗೂ ಕಲ್ಲಡ್ಕದ ಶಾಲಾ ಮಕ್ಕಳಿಗಾಗಿ ಬಿಜೆಪಿ ಮಹಿಳಾ ಮೋರ್ಚಾ 'ಅಕ್ಕಿ ಭಿಕ್ಷೆ ಅಭಿಯಾನ' ಆರಂಭಿಸಿದೆ.
ಈ ಅಕ್ಕಿ ಭಿಕ್ಷೆ ಅಭಿಯಾನಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಮಂಗಳೂರಿನಲ್ಲಿ ಮನೆ ಮನೆಗೆ ತೆರಳಿ ಭಿಕ್ಷೆ ಬೇಡುವ ಮೂಲಕ ಚಾಲನೆ ನೀಡಿದರು. ನಗರದ ಮಣ್ಣಗುಡ್ಡ ಎಂಬಲ್ಲಿ ಮನೆಗಳಿಗೆ ತೆರಳಿದ ಶೋಭಾ ಕರಂದ್ಲಾಜೆ ಭಿಕ್ಷೆ ಬೇಡಿ ಅಕ್ಕಿ ಸಂಗ್ರಹಿಸಿದರು .
ಈ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು .ರಾಜ್ಯ ಸರ್ಕಾರದ ದ್ವೇಷ ರಾಜಕಾರಣದ ಫಲವಾಗಿ ಕಲ್ಲಡ್ಕದ ಶಾಲೆಗಳಿಗೆ ಅನುದಾನ ರದ್ದುಗೊಳಿಸಲಾಗಿದೆ. ಡಾ .ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಟಾರ್ಗೆಟ್ ಮಾಡುವ ಉದ್ದೇಶವನಿಟ್ಟು ರಾಜ್ಯ ಸರ್ಕಾರ ಶಾಲಾ ಮಕ್ಕಳ ಹೊಟ್ಟೆಯ ಮೇಲೆ ರಾಜಕೀಯ ದ್ವೇಷ ಸಾಧಿಸಿದೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು .
ಶಾಲೆಗಳಿಗೆ ಅನುದಾನ ಕಾಂಗ್ರೆಸ್ ಸರಕಾರದ ತೀರ್ಮಾನ
2004ರಲ್ಲಿ ಕಾಂಗ್ರೆಸ್ ಸರ್ಕಾರ ಇರುವಾಗಲೇ ದೇವಾಲಯಗಳಿಂದ ಶಾಲೆಗಳಿಗೆ ಅನುದಾನ ನೀಡುವ ನಿರ್ಧಾರ ಕೈಗೊಂಡು ಆದೇಶ ಹೊರಡಿಸಲಾಗಿತ್ತು. ಆ ಸಂದರ್ಭದಲ್ಲಿ ಜೇವರ್ಗಿ, ಹೂವಿನಹಡಗಲಿ , ಹೊಳೆನರಸೀಪುರ ಸೇರಿದಂತೆ ಕನಕಪುರದ ನಾಲ್ಕು ಶಾಲೆಗಳಿಗೆ ಅನುದಾನ ನೀಡುವ ಪ್ರಕ್ರಿಯೆ ಆರಂಭಿಸಲಾಗಿತ್ತು ಎಂದವರು ಹೇಳಿದರು.
2007ರಲ್ಲಿ ಯೋಜನೆ ವಿಸ್ತರಣೆ
2007ರಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಶ್ರೀಕ್ಷೇತ್ರ ಕೊಲ್ಲೂರು ದೇವಾಲಯದಿಂದ ಕಲ್ಲಡ್ಕ ಹಾಗೂ ಪುಣಚ ಶಾಲೆಗಳಿಗೆ ಅನುದಾನ ನೀಡುವ ನಿಟ್ಟಿನಲ್ಲಿ ಯೋಜನೆ ವಿಸ್ತರಿಸಲಾಯಿತು ಎಂದು ತಿಳಿಸಿದರು.
ಅಹಿಂದ ಜಪ ಕೇವಲ ಭಾಷಣಕ್ಕೆ ಸೀಮಿತ
ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಹಾಗೂ ಪುಣಚ ಶ್ರೀದೇವಿ ಪ್ರೌಢಶಾಲೆಯಲ್ಲಿ ಮುಖ್ಯಮಂತ್ರಿಗಳು ಹೇಳುವ ಅಹಿಂದ ವರ್ಗದ ಮಕ್ಕಳೇ ಕಲಿಯುತ್ತಿದ್ದಾರೆ . ಈ ಎರಡು ಶಾಲೆಗಳಲ್ಲಿ ಶೇ 90% ರಷ್ಟು ಶಿಕ್ಷಣ ಪಡೆಯುತ್ತಿರುವುದು ಅಹಿಂದ ವರ್ಗಕ್ಕೆ ಸೇರಿದ ಮಕ್ಕಳು ಎಂದು ಹೇಳಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಹಿಂದ ಜಪ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ ಎಂದವರು ಕಿಡಿಕಾರಿದರು .
ಕಲ್ಲಡ್ಕ ಶಾಲೆಗೆ ಒಂದು ಮುಷ್ಠಿ ಅಕ್ಕಿ
ಅನುದಾನ ಕಡಿತಗೊಳಿಸುವ ಮೂಲಕ ಅಹಿಂದ ವರ್ಗದ ಮಕ್ಕಳ ಅನ್ನವನ್ನು ರಾಜ್ಯ ಸರ್ಕಾರ ಕಸಿದುಕೊಂಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು . ಕಲ್ಲಡ್ಕ ಶಾಲೆಯ ಅನುದಾನ ಕಡಿತಗೊಳಿಸಿರುವುದನ್ನು ವಿರೋಧಿಸಿ ಹಾಗೂ ಕಲ್ಲಡ್ಕ ಶಾಲೆಯ ಮಕ್ಕಳಿಗಾಗಿ ಭಿಕ್ಷಾ ಅಭಿಯಾನ ಇಂದಿನಿಂದ ಆರಂಭಿಸಿರುವುದಾಗಿ ಅವರು ತಿಳಿಸಿದರು . ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪ್ರತಿ ಮನೆಗೆ ತೆರಳಿ ಒಂದು ಮುಷ್ಟಿ ಅಕ್ಕಿ ಕೇಳಲಿದ್ದೇವೆ ಎಂದು ಹೇಳಿದ ಅವರು ಪ್ರತಿ ಮನೆಯಲ್ಲಿ ಅನ್ನಕ್ಕೆ ಅಕ್ಕಿ ಹಾಕುವಾಗ ಒಂದು ಮುಷ್ಟಿ ಅಕ್ಕಿ ಕಡಿಮೆ ಹಾಕಿ ಅದನ್ನು ತಾಯಂದಿರು ಕಲ್ಲಡ್ಕ ಶಾಲೆಯ ಮಕ್ಕಳಿಗಾಗಿ ತೆಗೆದಿಡಲಿದ್ದಾರೆ ಎಂದು ಅವರು ಹೇಳಿದರು.
ಪಿಎಫ್ಐ ಹಾಗೂ ಎಸ್.ಡಿ.ಪಿ.ಐ ಸಂಘಟನೆ ನಿಷೇಧಿಸಿ
ರಾಜ್ಯದಲ್ಲಿ ಈವರೆಗೆ ನಡೆದ ಹಿಂದೂ ಸಂಘಟನೆ ಹಾಗೂ ಆರ್.ಎಸ್.ಎಸ್ ಮುಖಂಡರ ಹತ್ಯೆ ಪ್ರಕರಣದಲ್ಲಿ ಪಿಎಫ್ಐ ಸಂಘಟನೆಯ ಕೈವಾಡವಿರುವುದು ಸಾಬೀತಾಗಿದೆ . ಈ ಹಿನ್ನೆಲೆಯಲ್ಲಿ ಪಿಎಫ್ಐ ಹಾಗೂ ಎಸ್.ಡಿ.ಪಿ.ಐ ಸಂಘಟನೆಗಳನ್ನು ರಾಜ್ಯ ಸರ್ಕಾರ ಈ ಕೂಡಲೇ ನಿಷೇಧಿಸಬೇಕು ಎಂದು ಅವರು ಒತ್ತಾಯಿಸಿದ್ದರು.
ರಾಜ್ಯದ 'ಲವ್ ಜಿಹಾದ್' ಎನ್ಐಎ ಗೆ ನೀಡಲು ಒತ್ತಾಯ
ಕೇರಳದಲ್ಲಿ ನಡೆಯುತ್ತಿರುವ ಹತ್ಯಾಕಾಂಡ ರಾಜ್ಯಕ್ಕೂ ಕಾಲಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಕೇರಳದ ಲವ್ ಜಿಹಾದ್ ಕುರಿತ ತನಿಖೆ ಯನ್ನು ಸುಪ್ರೀಂಕೋರ್ಟ್ ಎನ್ಐಎಗೆ ವಹಿಸಿದೆ . ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ನಡೆದಿರವ ಲವ್ ಜಿಹಾದ್ ಹಾಗೂ ಮತಾಂತರ ಪ್ರಕರಣದ ತನಿಖೆಯನ್ನೂ ಎನ್ಐಎಗೆ ವಹಿಸಬೇಕು ಎಂದವರು ಒತ್ತಾಯಿಸಿದರು .