ಕಾಸರಗೋಡು ಬೀಫ್ ಫೆಸ್ಟ್: ವಾಟ್ಸಪ್ ಗ್ರೂಪ್ ತಂಡಗಳ ಮಧ್ಯೆ ಹೊಡೆದಾಟ
ಮಂಗಳೂರು / ಕಾಸರಗೋಡು, ಜೂನ್ 13: ಬೀಫ್ ಫೆಸ್ಟ್ ವಿಷಯದಲ್ಲಿ ಒಂದೇ ವಾಟ್ಸಪ್ ಗ್ರೂಪ್ಪಿನ ಎರಡು ತಂಡಗಳ ಮಧ್ಯೆ ಹುಟ್ಟಿಕೊಂಡ ವಿವಾದ ಇದೀಗ ಹೊಡೆದಾಟದಲ್ಲಿ ಅಂತ್ಯ ಕಂಡಿದೆ. ಪರಸ್ಪರ ಹೊಡೆದಾಡಿದವರು ಬಿಜೆಪಿ ಹಾಗೂ ಸಿಪಿಎಂ ಪಕ್ಷದವರಾಗಿದ್ದು, ಇದು ರಾಜಕೀಯ ಘರ್ಷಣೆಯಾಗಿ ಬದಲಾಗಿದೆ.
ಕಾಸರಗೋಡಿನ ಪೆರ್ಲದಲ್ಲಿ ಈ ಘಟನೆ ನಡೆದಿದ್ದು, ಘರ್ಷಣೆಯಲ್ಲಿ ಗಾಯಗೊಂಡ ಬಾಡೂರು ನಿವಾಸಿಗಳೂ ಸಿಪಿಎಂ ಕಾರ್ಯಕರ್ತರಾದ ಜಯಂತ್ ಕುಮಾರ್ (28), ವಾಮನ (21), ಪವನ್ ಕುಮಾರ್ (21) ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಿಜೆಪಿ ಕಾರ್ಯಕರ್ತರಾದ ಪೆರ್ಲ ಬಳಿಯ ನಿವಾಸಿಗಳಾದ ಲೋಕೇಶ್ (28), ಗಣೇಶ್ (22), ಪ್ರಶಾಂತ್ (30), ಸಚಿನ್ (29) ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಘರ್ಷಣೆಯಲ್ಲಿ ಬಿಜೆಪಿಯ ಮೂವರು ಕಾರ್ಯಕರ್ತರು ಗಾಯಗೊಂಡಿದ್ದು, ಇವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವಾಹನದ ಮೇಲೆ ಉಕ್ಕಿನಡ್ಕದಲ್ಲಿ ತಂಡವೊಂದು ಕಲ್ಲೆಸೆದಿದ್ದು, ಇದರಿಂದ ಲೋಕೇಶ ಎಂಬವರು ಗಾಯಗೊಂಡಿದ್ದಾರೆ.
ಘರ್ಷಣೆಯಲ್ಲಿ ಗಾಯಗೊಂಡ ಏಳು ಮಂದಿ ಒಂದೇ ವಾಟ್ಸಪ್ ಗ್ರೂಪ್ ಸದಸ್ಯರಾಗಿದ್ದಾರೆ. ಕೇಂದ್ರ ಸರಕಾರ ಗೋಹತ್ಯೆ ನಿಷೇಧಿಸಿದ ಬಳಿಕ ವಿವಿಧೆಡೆ ಕಾಣಿಸತೊಡಗಿದ ಬೀಫ್ ಫೆಸ್ಟ್ ವಿಷಯದಲ್ಲಿ ಇವರ ವಾಟ್ಸಪ್ ಗ್ರೂಪ್ಪಿನಲ್ಲಿ ಚರ್ಚೆ ನಡೆದಿದೆ. ಕೆಲವರು ಬೀಫ್ ಫೆಸ್ಟ್ ಬೆಂಬಲಿಸಿದರೆ, ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದರು. ಇದು ಘರ್ಷಣೆಗೆ ಕಾರಣವೆನ್ನಲಾಗಿದೆ.