ಬಂಟ್ವಾಳದಲ್ಲಿ ಜೆಡಿಯು ಅಭ್ಯರ್ಥಿ ಬಾಲಕೃಷ್ಣ ಪೂಜಾರಿ ನಾಮಪತ್ರ ಸಲ್ಲಿಕೆ
ಮಂಗಳೂರು ಏಪ್ರಿಲ್ 17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ದಿನ ಒಂದು ನಾಮಪತ್ರ ಸಲ್ಲಿಕೆಯಾಗಿದೆ. ಜೆಡಿಯು ಪಕ್ಷದಿಂದ ಬಾಲಕೃಷ್ಣ ಪೂಜಾರಿ ಇಂದು ಬಂಟ್ವಾಳದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಬಂಟ್ವಾಳ ಚುನಾವಣಾ ಕಚೇರಿಗೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ಬಾಲಕೃಷ್ಣ ಪೂಜಾರಿ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಮೂಲತಃ ಬೊಳಿಯಾರು ನಿವಾಸಿಯಾಗಿರುವ ಬಾಲಕೃಷ್ಣ ಪೂಜಾರಿ ಕಳೆದ 10 ವರ್ಷಗಳಿಂದ ಜೆಡಿಯುನಲ್ಲಿ ಸಕ್ರಿಯರಾಗಿ ವಿವಿಧ ಹೋರಾಟ ನಡೆಸಿದ್ದಾರೆ. ಬಂಟ್ವಾಳದ ನರಿಕೊಂಬು ಎಂಬಲ್ಲಿ ಕೃಷಿ ಚಟುವಟಿಕೆ ಮಾಡಿಕೊಂಡಿರುವ ಬಾಲಕೃಷ್ಣ ಪೂಜಾರಿ 10 ನೇ ತರಗತಿ ವರೆಗೆ ಶಿಕ್ಷಣ ಪಡೆದಿದ್ದಾರೆ.
ನಾಮ ಪತ್ರ ಸಲ್ಲಿಕೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಬಂಟ್ವಾಳ ಕ್ಷೇತ್ರದಲ್ಲಿ ವಿವಿಧ ಮೂಲಭೂತ ಸೌಲಭ್ಯಗಳಿಂದ ಜನತೆ ವಂಚಿತರಾಗಿದ್ದಾರೆ. ಕೃಷಿ ಮತ್ತು ಹಿಂದುಳಿದ ವರ್ಗ, ಅವಿದ್ಯಾವಂತರ ಒಳಿತಿಗೆ ಶ್ರಮಿಸುತ್ತೇನೆ," ಎಂದು ತಿಳಿಸಿದ್ದಾರೆ.
ಜೆಡಿಯು ಈ ಬಾರಿಯ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.