ಮಂಗಳೂರು: ದಸರಾ ರಜೆ ಕಡಿತಗೊಳಿಸಿರುವುದಕ್ಕೆ ಬಜರಂಗದಳ ವಿರೋಧ
ಮಂಗಳೂರು, ಆಗಸ್ಟ್.25: ದಸರಾ ಸಮಯದಲ್ಲಿ ಮಕ್ಕಳಿಗೆ ರಜೆ ನೀಡುವುದು ಹಿಂದಿನ ಕಾಲದಿಂದ ನಡೆದು ಬಂದ ಪದ್ಧತಿಯಾಗಿದ್ದು, ಮಳೆಗಾಲದ ಪ್ರಕೃತಿ ವಿಕೋಪಕ್ಕೆ ನೀಡಿದ ರಜೆಯನ್ನು ಈ ರಜೆಯಲ್ಲಿ ಕಡಿತಗೊಳಿಸಲು ಸರಕಾರ ಸುತ್ತೋಲೆ ಹೊರಡಿಸಿರುವುದಕ್ಕೆ ವಿಶ್ವಹಿಂದೂ ಪರಿಷದ್ ಬಜರಂಗದಳ ಖಂಡಿಸಿದೆ.
ಅಷ್ಟೇ ಅಲ್ಲ, ಅಕ್ಟೋಬರ್ 7 ರಿಂದ 21 ರವರೆಗೆ ನಿಗದಿಗೊಳಿಸಿರುವ ದಸರಾ ರಜೆಯನ್ನು ನೀಡಬೇಕು. ನವರಾತ್ರಿಗೆ ನೀಡುವ ರಜೆಯನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದೆಂದು ದಕ್ಷಿಣಕನ್ನಡ ಜಿಲ್ಲಾ ಶಿಕ್ಷಣಾಧಿಕಾರಿಯವರಿಗೆ ಮನವಿ ನೀಡಲಾಗಿದೆ.
ಶಾಲೆಗಳ ದಸರಾ ರಜೆ ಕಡಿತ : 14 ದಿನ ಮಾತ್ರ ರಜೆ!
ಮಕ್ಕಳ ಶಿಕ್ಷಣ ಸರಿದೂಗಿಸಲು ಶನಿವಾರ ಹೆಚ್ಚಿನ ತರಗತಿಗಳನ್ನು ನಡೆಸಿ. ಕ್ರಿಸ್ಮಸ್ ಹಬ್ಬದ ರಜೆಯನ್ನು ನೀಡುವ ವಿಚಾರದಲ್ಲಿ ಆಯಾಯ ಶಾಲಾ ಕಾಲೇಜುಗಳ ವಿವೇಚನೆಗೆ ಬಿಟ್ಟ ನಿರ್ಣಯ ಎಂದಿರುವ ಸರಕಾರ ನವರಾತ್ರಿ ಹಬ್ಬದ ರಜೆಯನ್ನು ಕಡಿತಗೊಳಿಸಲು ಸುತ್ತೋಲೆ ಹೊರಡಿಸಿರುವುದು ರಾಜ್ಯಸರಕಾರದ ಇಬ್ಬಗೆಯ ನೀತಿ ತೋರಿಸುತ್ತದೆ ಎಂದು ಬಜರಂಗದಳ ಆರೋಪಿಸಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್, ಮಂಗಳೂರು ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, ಜಿಲ್ಲಾಕಾರ್ಯಧ್ಯಕ್ಷ ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್, ಸಂಯೋಜಕ್ ಭುಜಂಗ ಕುಲಾಲ್, ಪ್ರವೀಣ್ ಕುತ್ತಾರ್ ಉಪಸ್ಥಿತರಿದ್ದರು.