ಸತತ 8ನೇ ಬಾರಿ ನಾಮಪತ್ರ ಸಲ್ಲಿಸಲಿರುವ ರಮಾನಾಥ ರೈ
ಮಂಗಳೂರು, ಏಪ್ರಿಲ್ 19: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಹಳ ಕುತೂಹಲ ಮೂಡಿಸಿರುವ ಕ್ಷೇತ್ರ ಬಂಟ್ವಾಳದಲ್ಲಿ ರಾಜ್ಯ ಅರಣ್ಯ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ರಮಾನಾಥ ರೈ ಸತತ 8ನೇ ಬಾರಿ ನಾಮಪತ್ರ ಸಲ್ಲಿಸಲಿದ್ದಾರೆ.
ಕ್ಷೇತ್ರ ಪರಿಚಯ: ಬಂಟ್ವಾಳದಲ್ಲಿ ರಮಾನಾಥ ರೈಗೆ ಸಿಗುವುದೇ 7ನೇ ಗೆಲುವು?
ಗುರುವಾರ ಬೆಳಗ್ಗೆ ಬಂಟ್ವಾಳದ ಕೆಎಸ್ಆರ್ ಟಿಸಿ ಬಳಿ ಇರುವ ಕಾಂಗ್ರೆಸ್ ಪ್ರಚಾರ ಸಮಿತಿ ಕಚೇರಿಯಿಂದ ಕಾಲ್ನಡಿಗೆ ಮೂಲಕ ತೆರಳಿ ಬಿ.ಸಿ ರೋಡ್ ನ ಮಿನಿ ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ರಮಾನಾಥ ರೈ ಅವರ ವಿಶೇಷತೆ ಅಂದರೆ ಒಂದೇ ಪಕ್ಷದಿಂದ ಮತ್ತು ಕ್ಷೇತ್ರದಿಂದ ಸತತವಾಗಿ ಗೆಲುವು ಪಡೆದಿರುವ ಏಕೈಕ ಅಭ್ಯರ್ಥಿ ಎಂಬ ದಾಖಲೆ. ರಾಜ್ಯದ ಮೂವರು ಮುಖ್ಯಮಂತ್ರಿಗಳೊಂದಿಗೆ ಸಚಿವ ಸಂಪುಟ ಸಹದ್ಯೋಗಿಯಾಗಿ ಕಾರ್ಯನಿರ್ವಹಿಸಿರುವ ಹೆಗ್ಗಳಿಕೆ.
1985, 1989, 1994, 1999, 2008 ಮತ್ತು 2013ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1992ರಲ್ಲಿ ರಾಜ್ಯ ಗೃಹ ಸಚಿವರಾಗಿ, 1994ರಲ್ಲಿ ಅಬಕಾರಿ ಸಚಿವರಾಗಿ, 1999ರಲ್ಲಿ ಬಂದರು - ಮೀನುಗಾರಿಕೆ ಸಚಿವರಾಗಿ, 2002ರಲ್ಲಿ ಸಾರಿಗೆ ಸಚಿವರಾಗಿ, 2013ರಲ್ಲಿ ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
ರಾಜ್ಯದಲ್ಲಿ ಬಹಳ ಜಿದ್ದಾಜಿದ್ದಿನಿಂದ ಕೂಡಿರುವ ಕ್ಷೇತ್ರ ಬಂಟ್ವಾಳ. ಈ ಬಾರಿ ಮತ್ತೆ ರಮಾನಾಥ ರೈ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈಗಾಗಲೇ 6 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರಮಾನಾಥ ರೈ ಮತ್ತೆ ಗೆಲುವನ್ನು ಪಡೆಯುವ ವಿಶ್ವಾಸದಲ್ಲಿದ್ದಾರೆ.
ಕೃಷಿ ಕುಟುಂಬದಲ್ಲಿ ಜನಿಸಿರುವ ರೈ ಸುಮಾರು 50 ವರ್ಷಗಳಿಂದ ಸಾರ್ವಜನಿಕ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಅಂದಹಾಗೆ ರೈ ಅವರನ್ನು ಮಣಿಸಲು ಬಿಜೆಪಿ ಎಲ್ಲ ಶಕ್ತಿ ಸಾಮರ್ಥ್ಯ ವ್ಯಯಿಸಲು ಸಜ್ಜಾಗಿದೆ. ಕಳೆದ ಬಾರಿ ಸ್ಪರ್ಧಿಸಿದ್ದ ರಾಜೇಶ್ ಶೆಟ್ಟಿ ಉಳಿಪಾಡಿ ಮತ್ತೆ ಅಖಾಡಕ್ಕಿಳಿಯಲು ಒಂದು ವರ್ಷದಿಂದಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಸಂಸದ ನಳಿನ್ ಕುಮಾರ್ ಬೆಂಬಲ ಇವರಿಗಿದೆ. ಮಾಜಿ ಶಾಸಕ ರುಕ್ಮಯ ಪೂಜಾರಿಗೂ ಸ್ಪರ್ಧಿಸುವ ಹುಮ್ಮಸ್ಸು ಇದೆ.
ಬೇಬಿಯಣ್ಣ ಎಂದೇ ಹೆಸರಾದ ರಮಾನಾಥ ರೈ 7 ಬಾರಿ ಸ್ಪರ್ಧಿಸಿ ಒಮ್ಮೆ ಮಾತ್ರ ಸೋತಿದ್ದಾರೆ. 1985ರಿಂದ ಗೆಲ್ಲುತ್ತ ಬಂದಿದ್ದ ರೈ, 2004ರಲ್ಲಿ ಬಿಜೆಪಿಯ ಬಿ.ನಾಗರಾಜ ಶೆಟ್ಟಿ ವಿರುದ್ಧ ಸೋತಿದ್ದರು. ಇದು ಬಿಟ್ಟರೆ ಮತ್ತೆಲ್ಲ ಗೆಲುವಿನ ಪರ್ವವೇ. 8ನೇ ಬಾರಿ ಹಣಾಹಣಿಗೆ ಸಿದ್ಧವಾಗಿರುವ ಇವರಿಗೆ ಪ್ರಸಕ್ತ ಬಾರಿ ಕಠಿಣ ಸವಾಲುಗಳಿರುವುದಂತು ಸುಳ್ಳಲ್ಲ.