ಮಂಗಳೂರಿನ ಆಟೋಗಳಿಗೆ ಬಂತು ಪೇಟಿಎಮ್
ಮಂಗಳೂರು, ಡಿಸೆಂಬರ್ 7: ಆಟೋ ಬಾಡಿಗೆಗಾಗಿ ಕುಡ್ಲ ಸಹಕಾರಿ ಸಂಘದ ವತಿಯಿಂದ 'ಚಲೋ ಕುಡ್ಲ' ಹೆಸರಿನ ಪೇಟಿಎಮ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಬಾಡಿಗೆಯನ್ನು ಪೇಟಿಎಮ್ ಮೂಲಕ ಪಾವತಿಸಿ ಪ್ರಯಾಣ ಮಾಡುವ ಈ ಜನಸ್ನೇಹಿ ಯೋಜನೆಗೆ ಮಂಗಳೂರಿನ ಆಟೋ ಚಾಲಕರು ಸಿದ್ದರಾಗಿದ್ದಾರೆ.
ಕುಡ್ಲ ಸೌಹಾರ್ದ ಸಹಕಾರಿ ಅಧ್ಯಕ್ಷ ಪ್ರಕಾಶ ವಿ.ಎನ್. ಮಾತನಾಡಿ, ಆಟೋಗಳಿಗೆ ಜಿಪಿಎಸ್ ಅಳವಡಿಸುವ ಮೂಲಕ ನಗದು ರಹಿತ ವಹಿವಾಟಿಗೆ ಚಾಲನೆ ನೀಡಲಾಗಿದೆ. ಸದ್ಯ ಪ್ರಾಯೋಗಿಕವಾಗಿ 10 ಆಟೋಗಳಿಗೆ ಜಿಪಿಎಸ್ ಮೂಲಕ ಪೇಟಿಎಮ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮುಂದೆ ಸುಮಾರು 200-300 ಆಟೋಗಳು ಈ ವ್ಯವಸ್ಥೆಗೆ ಒಳಪಡಲಿವೆ. ಮುಂದಿನ ದಿನಗಳಲ್ಲಿ ಕುದ್ರೋಳಿ 'ಇ-ಸರ್ಚ್' ಮೂಲಕ ಪೇಟಿಯಂನಲ್ಲಿ ಪ್ರಯಾಣಿಕರು ಬಾಡಿಗೆಯನ್ನು ಸಂದಾಯ ಮಾಡಬಹುದಾಗಿದೆ ಎಂದು ತಿಳಿಸಿದರು.
ಪೇಟಿಎಮ್ ವ್ಯವಸ್ಥೆ ಹೊಂದಿರುವ ಆಟೊಗಳ ಮುಂಭಾಗದಲ್ಲಿ ಸ್ಟಿಕ್ಕರ್ ಗಳನ್ನು ಅಳವಡಿಸಲಾಗಿದ್ದು, ಹಿಂಭಾಗದಲ್ಲಿ ಜಿಪಿಎಸ್ ಅಳವಡಿಕೆಯ ಜೊತೆ ಜಾಹೀರಾತು ಫಲಕ ಇರಲಿದೆ. ಇದರ ಒಂದು ಭಾಗದಲ್ಲಿ ಬಾರ್ಕೋಡ್ನ್ನು ಅಳವಡಿಸಲಾಗುವುದು. ಹಿಂಭಾಗದಲ್ಲಿರುವ ಬಾರ್ಕೋಡ್ನ್ನು ಸ್ಕಾನ್ ಮಾಡುವ ಮುಖಾಂತರ ಅದೇ ಆಟೊ ಚಾಲಕರ ಅಕೌಂಟ್ ಗೆ ಹಣ ಜಮೆ ಮಾಡುವ ವ್ಯವಸ್ಥೆ ಇದಾಗಿದ್ದು, ಈ ಕುರಿತು ಚಾಲಕರ ಮೊಬೈಲ್ ಫೋನ್ಗೆ ಸಂದೇಶ ಕಳುಹಿಸಲಾಗುವುದು ಎಂದು ಪ್ರಕಾಶ್ ತಿಳಿಸಿದರು.[ಪೇಟಿಎಂ ವಾಲೆಟ್ ಉಪಯೋಗಿಸುವುದು, ಹಣ ವರ್ಗಾವಣೆ ಹೇಗೆ?]
ಪೇಟಿಎಂ ಕಾಲ್ ಸೆಂಟರ್ :
ಪ್ರಯಾಣಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕಾಲ್ ಸೆಂಟರನ್ನು ಕೂಡ ಸ್ಥಾಪಿಸಲಾಗುವುದು, ಆಟೊ ಪ್ರಯಾಣಿಕರಿಗೆ ತಕ್ಷಣ ಅವರಿದ್ದ ಸ್ಥಳದಲ್ಲೇ ಆಟೊ ಲಭ್ಯತೆಯ ಅವಕಾಶವನ್ನು ಕೂಡ ಕಲ್ಪಿಸಲಾಗುತ್ತದೆ.
ಕೆನರಾ ಚೇಂಬರ್ ಆಫ್ ಕಾಮರ್ಸ್ ಸಹಯೋಗದಲ್ಲಿ ಪ್ರವಾಸೋದ್ಯಮ ಇಲಾಖೆಯ ಜೊತೆ ಸೇರಿ ಚಾಲಕರನ್ನು ಗೈಡ್ಗಳಾಗಿ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ಆಟೊ ಚಾಲಕರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿ ಎಂದು ಕುಡ್ಲ ಸೌಹಾರ್ದ ಸಹಕಾರಿ ಅಧ್ಯಕ್ಷ ಪ್ರಕಾಶ ತಿಳಿಸಿದರು.