ಉಳ್ಳಾಲ: ವಾಹನ ನಿಲುಗಡೆ ನೆಪದಲ್ಲಿ ಘರ್ಷಣೆ, ಚಾಲಕನಿಗೆ ಚೂರಿ ಇರಿತ
ಮಂಗಳೂರು, ಜುಲೈ 11: ಟೆಂಪೊವೊಂದರ ಚಾಲಕನ ಮೇಲೆ ತಂಡವೊಂದು ಹಲ್ಲೆ ನಡೆಸಿ ಹಣ ದರೋಡೆಗೈದ ಘಟನೆ ಉಪ್ಪಿನಂಗಡಿಯ ಕಡವಿನಬಾಗಿಲು ಎಂಬಲ್ಲಿ ನಡೆದಿದೆ.
ಹಲ್ಲೆಗೊಳಗಾದವರನ್ನು ಉಪ್ಪಿನಂಗಡಿಯ ಮಠ ನಿವಾಸಿ ಅಬ್ದುರ್ರಹ್ಮಾನ್ ಎಂದು ತಿಳಿದು ಬಂದಿದೆ.
ಮಾರುತಿ ಓಮ್ನಿಯಲ್ಲಿ ಬಂದಿದ್ದ ದುಷ್ಕರ್ಮಿಗಳ ತಂಡ ಟೆಂಪೊದ ಗಾಜನ್ನು ಪುಡಿಗೈದಿದೆ. ಬಳಿಕ ಅಬ್ದುರ್ರಹ್ಮಾನ್ ಅವರನ್ನು ಟೆಂಪೊದಿಂದ ಹೊರಗೆಳೆದು ಚೂರಿ ಇರಿದು ಹಲ್ಲೆ ನಡೆಸಿದೆ. ಬಳಿಕ ಚಾಲಕರ ಬಳಿ ಇದ್ದ 9 ಸಾವಿರ ರೂಪಾಯಿಗಳನ್ನು ಕಿತ್ತುಕೊಂಡು ಪರಾರಿಯಾಗಿದೆ.
ಹಲ್ಲೆಯಿಂದ ಗಂಭೀರ ಗಾಯಗೊಂಡು ಬಿದ್ದಿದ್ದ ಅಬ್ದುರ್ರಹ್ಮಾನ್ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟೆಂಪೋ ಚಾಲಕನಿಗೆ ಚೂರಿ ಇರಿತ
ವಾಹನ ರಿವರ್ಸ್ ತೆಗೆಯುವ ವಿಚಾರದಲ್ಲಿ ಟೆಂಪೋ ಚಾಲಕ ಆಸ್ಟಿನ್ (27) ಎಂಬವರಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದಿರುವ ಪ್ರತ್ಯೇಕ ಘಟನೆ ಉಳ್ಳಾಲದ ಮಾಸ್ತಿಕಟ್ಟೆಯಾ ಆಝಾದ್ ನಗರದಲ್ಲಿ ನಡೆದಿದೆ.
ಕಾರಿನಲ್ಲಿ ಬಂದ ತಂಡ ಚೂರಿಯಿಂದ ಇರಿದಿದೆ ಎನ್ನಲಾಗಿದೆ. ಗಾಯಗೊಂಡಿರುವ ಆಸ್ಟಿನ್ ಉಳ್ಳಾಲ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.