ಮಂಗಳೂರು ನೈತಿಕ ಪೊಲೀಸ್ ಗಿರಿ ಪ್ರಕರಣ, 3 ಆರೋಪಿಗಳ ಬಂಧನ
ಮಂಗಳೂರು, ಮಾರ್ಚ್ 26: ಮಂಗಳೂರು ಹೊರವಲಯದ ತಣ್ಣೀರು ಬಾವಿ ಬೀಚ್ ಬಳಿ ನಡೆದಿದೆ ಎನ್ನಲಾದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಣಂಬೂರು ಠಾಣೆಯ ಪೊಲೀಸರು 3 ಮಂದಿ ಅರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಬೈಕಂಪಾಡಿ ಮೀನಕಳಿಯ ನಿವಾಸಿ ಸುಕೇಶ್ ಪುತ್ರನ್, ತಣ್ಣೀರುಬಾವಿ ನಿವಾಸಿಗಳಾದ ವರುಣ್, ದೀಕ್ಷಿತ್ ಎಂದು ಗುರುತಿಸಲಾಗಿದೆ.
ಮಾರ್ಚ್ 24ರ ಸಂಜೆ ಮಂಗಳೂರು ಹೊರವಲಯದ ತಣ್ಣೀರುಬಾವಿ ಬೀಚ್ ನಲ್ಲಿ ಹುಟ್ಟುಹಬ್ಬದ ಪಾರ್ಟಿ ಮಾಡುತ್ತಿದ್ದ ವಿದ್ಯಾರ್ಥಿಗಳ ತಂಡದ ಮೇಲೆ ಯುವಕರ ಗಂಪೊಂದು ನೈತಿಕ ಪೊಲೀಸ್ ಗಿರಿ ನಡೆಸಿದೆ ಎಂದು ಅರೋಪಿಸಲಾಗಿದೆ.
ಮಂಗಳೂರು : ಮತ್ತೆ ನೈತಿಕ ಪೊಲೀಸ್ ಗಿರಿ, ವಿದ್ಯಾರ್ಥಿಗಳ ಮೇಲೆ ಹಲ್ಲೆ
ತಣ್ಣೀರುಬಾವಿಯ ಫಾತಿಮಾ ಚರ್ಚ್ ಬಳಿಯ ಬೀಚ್ ನಲ್ಲಿ ನಗರದ ಕುಲಾಸೊ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರ ಜೊತೆ ಸಾಬಿತ್, ಸಮೀರ್ ಮತ್ತು ನಿತೇಶ್ ಎಂಬ ಮೂವರು ಮಂದಿ ವಿದ್ಯಾರ್ಥಿಗಳು ಬರ್ತ್ ಡೇ ಸಂಭ್ರಮ ಆಚರಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ಯುವಕರ ತಂಡ ಹಲ್ಲೆ ನಡೆಸಿದೆ ಎಂದು ಹೇಳಲಾಗಿತ್ತು.
ಇಬ್ಬರು ವಿದ್ಯಾರ್ಥಿನಿಯರ ಜೊತೆಗಿದ್ದ ಸಾಬಿತ್, ಸಮೀರ್ ಮತ್ತು ನಿತೇಶ್ ಮೇಲೆ ಹಲ್ಲೆ ನಡೆಸಲಾಗಿದೆ. ಹುಟ್ಟುಹಬ್ಬದ ಸಂಭ್ರಮಾಚಾರಣೆ ನಿರತರಾಗಿದ್ದ ವಿದ್ಯಾರ್ಥಿಗಳು ತಮ್ಮೊಂದಿಗಿದ್ದ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು ಎಂದು ಆರೋಪಿಸಿ ಈ ಹಲ್ಲೆ ನಡೆಸಲಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಬಳಿಕ ವಿದ್ಯಾರ್ಥಿನಿಯರು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರೆಂಬುದನ್ನು ತಿಳಿದ ಬಳಿಕ ಯುವಕರ ತಂಡ ಸ್ಥಳದಿಂದ ಪರಾರಿಯಾಗಿತ್ತು. ಹಲ್ಲೆಗೊಳಗಾದ ಯುವಕರಿಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಘಟನೆ ಕುರಿತು ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಘಟನೆಯ ಕುರಿತು ತನಿಖೆ ನಡೆಸಿದ ಪೊಲೀಸರು ಮೂರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ನಡುವೆ ತಣ್ಣೀರುಬಾವಿಯ ಫಾತಿಮಾ ಬೀಚ್ ಬಳಿಯ ಗ್ರಾಮಸ್ಥರು ಮಂಗಳೂರು ಪೊಲೀಸ್ ಕಮಿಷನರನ್ನು ಭೇಟಿಯಾಗಿದ್ದು, ಪಾರ್ಟಿಯ ನೆಪದಲ್ಲಿ ವಿದ್ಯಾರ್ಥಿಗಳು ಸ್ಥಳೀಯರಿಗೆ ಅಸಹ್ಯವಾಗುವಂತೆ ವರ್ತಿಸಿದ್ದರು ಎಂದು ಆರೋಪಿಸಿದ್ದಾರೆ. ಇದನ್ನು ಪ್ರಶ್ನಿಸಿ, ಅಲ್ಲಿಂದ ತೆರಳುವಂತೆ ಸ್ಥಳೀಯರು ಸೂಚಿಸಿದ್ದನ್ನೇ ತಿರುಚಿ, ರಾತ್ರಿ ಯಾರದ್ದೋ ಒತ್ತಡಕ್ಕೆ ಮಣಿದು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಗ್ರಾಮಾಸ್ಥರು ಕಿಡಿಕಾರಿದ್ದಾರೆ.