ಕುಕ್ಕೆ ಸುಬ್ರಮಣ್ಯದಲ್ಲಿ ಇನ್ನು ಮುಂದೆ ಸಂಜೆಯೂ ಆಶ್ಲೇಷ ಬಲಿ
ಮಂಗಳೂರು, ಜುಲೈ 01 : ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ಜುಲೈ 5ರಿಂದ ಸಂಜೆ ವೇಳೆಯೂ ಆಶ್ಲೇಷ ಬಲಿ ಸೇವೆಯನ್ನು ನಡೆಸಲು ನಿರ್ಧರಿಸಲಾಗಿದೆ. ಪ್ರತಿದಿನ ಸುಮಾರು 500 ಆಶ್ಲೇಷ ಬಲಿ ಸೇವೆ ದೇವಾಲಯದಲ್ಲಿ ನಡೆಯುತ್ತದೆ.
ಸುಬ್ರಮಣ್ಯ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಈ ಕುರಿತು ಮಾಹಿತಿ ನೀಡಿದ್ದಾರೆ. 'ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡುಬಂದಂತೆ ಆಶ್ಲೇಷ ಬಲಿ ಸೇವೆಯ ಸಮಯ ನಿರ್ಧರಿಸಲಾಗಿದೆ' ಎಂದು ಹೇಳಿದರು.
95 ಕೋಟಿ ಸಂಗ್ರಹಿಸಿರುವ ಕುಕ್ಕೆ ಸುಬ್ರಹ್ಮಣ್ಯ ರಾಜ್ಯದ ಶ್ರೀಮಂತ ದೇಗುಲ
'ದೇವಾಲಯದಲ್ಲಿ ಆಶ್ಲೇಷ ಬಲಿ ನಡೆಸುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರತಿ ದಿನ ದೇವಾಲಯದಲ್ಲಿ 400 ರಿಂದ 500 ಆಶ್ಲೇಷ ಬಲಿ ಸೇವೆ ನಡೆಯುತ್ತದೆ. ವಿಶೇಷ ದಿನಗಳಲ್ಲಿ ಸುಮಾರು 1400 ಸೇವೇ ನಡೆಯುತ್ತದೆ' ಎಂದು ಮಾಹಿತಿ ನೀಡಿದರು.
ಅಷ್ಟಮಂಗಳ ಪ್ರಶ್ನೆಯಲ್ಲಿ ಸೂಚಿಸಿದಂತೆ ಸಂಜೆಯೂ ಆಶ್ಲೇಷ ಬಲಿ ನಡೆಯಲಿದೆ. ಜುಲೈ 4ರಂದು ಬೆಳಗ್ಗೆ 7 ಗಂಟೆಗೆ ಪ್ರಧಾನ ಅರ್ಚಕರು ದ್ರವ್ಯ ಕಲಶಾಭಿಷೇಕ ಮಾಡುವರು. ಅನಂತರ ಅನುಜ್ಞಾ ಪ್ರಾರ್ಥನೆ ಮಾಡಿ ಸಂಜೆ ಆಶ್ಲೇಷ ಬಲಿ ಸೇವೆಯನ್ನು ಆರಂಭಿಸಲಾಗುತ್ತದೆ.
ದೇವಾಲಯದಲ್ಲಿ ಬೆಳಗ್ಗೆ ಆಶ್ಲೇಷ ಬಲಿ ನಡೆಯುವ ಸ್ಥಳದಲ್ಲಿಯೇ ಸಂಜೆಯೂ ಆಶ್ಲೇಷ ಬಲಿಯನ್ನು ನಡೆಸಲಾಗತ್ತದೆ. ಜುಲೈ 5ರ ಸಂಜೆಯಿಂದ ಈ ಸೇವೆ ದೇವಾಲಯದಲ್ಲಿ ಆರಂಭವಾಗಲಿದೆ.