ಬಂಧಿತ ಶಾರ್ಪ್ ಶೂಟರ್ಸ್ ಗಳಿಂದ ಶ್ರೀರಾಮ ಸೇನೆ ಮುಖ್ಯಸ್ಥನ ಹತ್ಯೆಗೆ ಸಂಚು?
ಬೆಳಗಾವಿಯಲ್ಲಿ ಬಂಧಿತರಾದ ಶಾರ್ಪ್ ಶೂಟರ್ ಗಳು ಮಂಗಳೂರಿನ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಸಾದ್ ಅತ್ತಾವರ ಕೊಲೆಗೆ ಸಂಚು ರೂಪಿಸಿದ್ದರು ಎಂಬ ಸ್ಪೋಟಕ ಮಾಹಿತಿಯೊಂದು ವಿಚಾರಣೆ ವೇಳೆ ಬಹಿರಂಗವಾಗಿದೆ.
ಮಂಗಳೂರು, ಫೆಬ್ರವರಿ. 10 : ಬೆಳಗಾವಿಯಲ್ಲಿ ಬಂಧಿತರಾದ ಶಾರ್ಪ್ ಶೂಟರ್ ಗಳು ಮಂಗಳೂರಿನ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಸಾದ್ ಅತ್ತಾವರ ಕೊಲೆಗೆ ಸಂಚು ರೂಪಿಸಿದ್ದರು ಎಂಬ ಸ್ಪೋಟಕ ಮಾಹಿತಿಯೊಂದು ಬಹಿರಂಗವಾಗಿದೆ.
ಈ ವಿಷಯವನ್ನು ಇತ್ತೀಚೆಗಷ್ಟೇ ಬೆಳಗಾವಿಯಲ್ಲಿ ಬಂಧಿತರಾದ ಶಾರ್ಪ್ ಶೂಟರ್ ಗಳು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆಂದು ತಿಳಿದುಬಂದಿದೆ. [ಬೆಳಗಾವಿಯಲ್ಲಿ ಅಂತರ ರಾಜ್ಯ ಶಾರ್ಪ್ ಶೂಟರ್ ಗಳ ಬಂಧನ]
ಭೂಗತ ಪಾತಕಿ ರವಿ ಪೂಜಾರಿ ನಂಟು ಆರೋಪ ವಿಚಾರಣೆಗಾಗಿ ಫೆಬ್ರವರಿ 15ರಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಸಾದ್ ಅತ್ತಾವರ್ ಮಂಗಳೂರು ನ್ಯಾಯಾಲಯಕ್ಕೆ ಹಾಜರಾಗುವ ವೇಳೆ ಹತ್ಯೆ ಮಾಡಲು ಈ ತಂಡ ಸಂಚು ರೂಪಿಸಿತ್ತು ಎಂಬ ಮಾಹಿತಿ ಲಭ್ಯವಾಗಿದೆ. [ಬೆಳಗಾವಿಯಲ್ಲಿ ಶಾರ್ಪ್ ಶೂಟರ್ಸ್, ಮಂಗಳೂರಿನ ಲಿಂಕ್ ಗಣೇಶ್ ಶೆಟ್ಟಿ ವಿಚಾರಣೆ]
ರವಿ ಪೂಜಾರಿ ಸಹಚರನೆಂದು ಹೇಳಲಾಗಿರುವ ದಿನೇಶ್ ಶೆಟ್ಟಿ ಸೂಚನೆ ಮೇರೆಗೆ ಈ ಕೊಲೆ ಸಂಚು ನಡೆಸಲಾಗಿತ್ತು ಎಂದು ಹೇಳಲಾಗುತ್ತಿದೆ.
ಭೂಗತ ಪಾತಕಿ ರವಿ ಪೂಜಾರಿ ಸಹಚರ ದಿನೇಶ್ ಶೆಟ್ಟಿ 2010ರಲ್ಲಿ ಮಂಗಳೂರಿನಲ್ಲಿ ನಡೆದ ವಕೀಲ ನೌಶಾದ್ ಖಾಸೀಮ್ ಜೀ ಹತ್ಯೆ ಆರೋಪಿಯಾಗಿದ್ದು, ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾನೆ.
ಇತ್ತೀಚಿಗಷ್ಟೆ ಬೆಳಗಾವಿಯಲ್ಲಿ ಬಂಧಿತರಾಗಿರುವ ಆರು ಶಾರ್ಪ್ ಶೂಟರ್ ಗಳು ವಿಐಪಿಗಳ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಅನುಮಾನ ವ್ಯಕ್ತವಾಗಿತ್ತು.
ತದ ನಂತರ ಈ ಆರು ಮಂದಿಗೆ ಸಹಾಯ ಮಾಡಿದ ಹಿನ್ನಲೆಯಲ್ಲಿ ಮತ್ತೋರ್ವ ಶಾರ್ಪ್ ಶೂಟರ್ ಮಂಗಳೂರಿನ ಬೈಕಂಪಾಡಿ ನಿವಾಸಿ ಗಣೇಶ್ ಶೆಟ್ಟಿ ಎಂಬಾತನನ್ನು ಮಂಗಳೂರಿನಲ್ಲಿ ಬಂಧಿಸಲಾಗಿತ್ತು.
ಇದೀಗ ಈ ಆರೋಪಿಗಳು ಫೆ. 15ರಂದು ಮಂಗಳೂರು ಕೋರ್ಟ್ ಆವರಣದಲ್ಲಿ ಪ್ರಸಾದ್ ಅತ್ತಾವರ ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ಮಾಹಿತಿಯನ್ನು ತನಿಖೆ ವೇಳೆ ಬಹಿರಂಗಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ವನ್ ಇಂಡಿಯಾ ಕನ್ನಡ ಜತೆ ಮಾತನಾಡಿದ ಪ್ರಸಾದ್ ಅತ್ತಾವರ್, 'ಈ ವಿಷಯವಾಗಿ ಬೆಳಗಾವಿ ಪೊಲೀಸರು ದೂರವಾಣಿ ಮೂಲಕ ಸಂಪರ್ಕಿಸಿದ ಮೇಲೆಯೇ ನನಗೆ ಈ ವಿಚಾರ ತಿಳಿದದ್ದು.
ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಈ ವಿಚಾರದ ಬಗ್ಗೆ ಮಾತನಾಡಲು ಪೊಲೀಸ್ ಅಧಿಕಾರಿಯವರು ನನ್ನನ್ನು ಅವರ ಕಚೇರಿಗೆ ಕರೆದಿದ್ದಾರೆ' ಎಂದು ತಿಳಿಸಿದ್ದಾರೆ.