ಪ್ರಭಾಕರ ಭಟ್ ವಿರುದ್ಧ ಕೇಸ್ ಜಡಿದು ಬಂಧಿಸಿ, ರೈ ವಿಡಿಯೋ ವೈರಲ್
ಮಂಗಳೂರು, ಜೂನ್ 18 : ಕಲ್ಲಡ್ಕದಲ್ಲಿ ಇತ್ತೀಚೆಗೆ ನಡೆದ ಗಲಭೆಯ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ರಾವ್ ಬೋರಸೆಯವರನ್ನು ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಶನಿವಾರ ರಾತ್ರಿ ಜಿಲ್ಲಾ ಎಸ್ಪಿಯನ್ನು ಬಂಟ್ವಾಳ ಪ್ರವಾಸಿ ಮಂದಿರಕ್ಕೆ ಕರೆಸಿಕೊಂಡ ಸಚಿವ ರೈ ಎಸ್ಪಿಯನ್ನು ತರಾಟೆಗೆ ತೆಗೆದುಕೊಂಡು ಯಾರೇ ದೂರು ಕೊಟ್ಟರು ಕ್ರಮಕೈಗೊಳ್ಳಬೇಕು. ಮಾತ್ರವಲ್ಲ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಯಾರೇ ದೂರು ನೀಡಿದರೂ ಪ್ರಕರಕಣ ದಾಖಲಿಸಿಕೊಂಡು ಆತನನ್ನು ಬಂಧಿಸಬೇಕು. ಬಂಧನ ಬಳಿಕ ಆತನ ಪವರ್ ಏನೆಂಬುದು ಗೊತ್ತಾಗುತ್ತದೆ. ಇದೇನು ಮಂಡ್ಯ ಅಲ್ಲ ಇದು ಇಂಡಿಯಾ ಎಂದು ಎಸ್ಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಲ್ಲಡ್ಕದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ, ಗುಂಪುಗಳ ಮಧ್ಯೆ ಮಾರಾಮಾರಿ
ಕಲ್ಲಡ್ಕ ಪ್ರಭಾಕರ ಭಟ್ ಆರ್ಎಸ್ಎಸ್ ಮುಖಂಡರಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಕೋಮು ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಿದ್ದಾರೆ. ಇದರಿಂದ ಸಾಕಷ್ಟು ದೂರುಗಳು ದಾಖಲಾಗಿತ್ತು. ಆದರೆ, ಯಾವುದೇ ಪ್ರಕರಣದಲ್ಲೂ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಬಂಧನವಾಗಿಲ್ಲ.
ಇದೀಗ ಮೊನ್ನೆ ನಡೆದ ಗಲಭೆಯಲ್ಲೂ ಭಟ್ ಕೈವಾಡ ಇದೆ ಎಂದು ಸ್ಥಳೀಯರು ಆರೋಪಿಸಿದ್ದು, ದೂರು ದಾಖಲಿಸಲು ಹೋದವರ ದೂರನ್ನು ಪೊಲೀಸರು ಸ್ವೀಕರಿಸಿಲ್ಲ ಅನ್ನುವ ಆರೋಪ ಕೇಳಿಬಂದಿತ್ತು.