ಮಂಗಳೂರಲ್ಲಿ ಶಂಕಿತ ಲವ್ ಜಿಹಾದ್ ಪ್ರಕರಣ, ಎನ್ಐಎ ತನಿಖೆಗೆ ಆಗ್ರಹ
ಮಂಗಳೂರು, ಜನವರಿ 1: ಲವ್ ಜಿಹಾದ್ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಸದ್ದು ಮಾಡಿದೆ. ನಗರದ ಕಾನೂನು ಪದವಿ ವಿಧ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿರುವ ಪ್ರಸಂಗ ಬೆಳಕಿಗೆ ಬಂದಿದ್ದು ಇದೊಂದು ಲವ್ ಜಿಹಾದ್ ಪ್ರಕರಣ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸಿವೆ. ಮಾತ್ರವಲ್ಲ ಪ್ರಕರಣವನ್ನು ಎನ್ಐಎಗೆ ವಹಿಸುವಂತೆ ರಕ್ಷಣಾ ಸಚಿವರಿಗೆ ಮನವಿ ಸಲ್ಲಿಸಿವೆ.
ಮಂಗಳೂರಿನಲ್ಲಿ ಕಾನೂನು ಪದವಿ ಓದುತ್ತಿದ್ದ ವಿದ್ಯಾರ್ಥಿನಿ ರೇಷ್ಮಾ ಕಳೆದ 5 ತಿಂಗಳಿನಿಂದ ನಾಪತ್ತೆಯಾಗಿದ್ದಾಳೆ. ಈಕೆ ಕೇರಳದ ಕಾಸರಗೋಡಿನ ಹಿಂದೂ ಸಂಘಟನೆಯ ಮುಖಂಡರೊಬ್ಬರ ಪುತ್ರಿಯಾಗಿದ್ದಾಳೆ. ಮುಂಬೈ ನಿವಾಸಿಯಾಗಿರುವ ಇಕ್ಬಾಲ್ ಚೌಧರಿ ಎಂಬ ಯುವಕನೊಂದಿಗೆ ರೇಷ್ಮಾ ತೆರಳಿರುವ ಶಂಕೆಯನ್ನು ಹೆತ್ತವರು ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಇದು ಇನ್ನೊಂದು ಲವ್ ಜಿಹಾದ್ ಪ್ರಕರಣ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸಿವೆ.
ರೇಷ್ಮಾಗೆ 3 ವರ್ಷಗಳ ಹಿಂದೆ ಫೇಸ್ಬುಕ್ ನಲ್ಲಿ ಮುಂಬೈನ ಮನ್ ಖರ್ದ್ ಎಂಬಲ್ಲಿ ವಾಸಿಸುತ್ತಿರುವ ಇಕ್ಬಾಲ್ ಚೌಧರಿ ಎಂಬವನ ಪರಿಚಯವಾಗಿತ್ತು ಎನ್ನಲಾಗಿದೆ. ಈ ನಡುವೆ ಕಳೆದ 5 ತಿಂಗಳಿನಿಂದ ರೇಷ್ಮಾ ಕಾಣೆಯಾಗಿದ್ದು ಇಕ್ಬಾಲ್ ರೇಷ್ಮಾಳನ್ನು ಪುಸಲಾಯಿಸಿ ಮುಂಬೈಗೆ ಕರೆದೊಯ್ದಿದ್ದಾನೆ ಎಂದು ರೇಷ್ಮಾ ಹೆತ್ತವರು ಆರೋಪಿಸಿದ್ದಾರೆ.
ಈ ಸಂಬಂಧ ರೇಷ್ಮಾ ಮನೆಯವರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ನಡುವೆ ಇತ್ತೀಚೆಗೆ ಮಂಗಳೂರಿಗೆ ಬಂದಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಮನವಿಯನ್ನು ನೀಡಿದ್ದು ಈ ಮನವಿಯಲ್ಲಿ ರೇಷ್ಮಾ ನಾಪತ್ತೆ ಪ್ರಕರಣವನ್ನು ಉಲ್ಲೇಖಿಸಲಾಗಿತ್ತು. ಇದು ಇನ್ನೊಂದು ಲವ್ ಜಿಹಾದ್ ಪ್ರಕರಣವಾಗಿದ್ದು ಈ ಕೂಡಲೇ ಈ ಪ್ರಕರಣವನ್ನು ಎನ್ಐಎಗೆ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇತ್ತೀಚೆಗೆ ಮೂಡಬಿದ್ರೆಯ ದರೆಗುಡ್ಡೆ ನಿವಾಸಿ ಪ್ರಿಯಾಂಕಾಳ ಶಂಕಿತ ಲವ್ ಜಿಹಾದ್ ಪ್ರಕರಣದ ಬಳಿಕ ರೇಷ್ಮಾಳದ್ದು ಎರಡನೇ ಶಂಕಿತ ಲವ್ ಜಿಹಾದ್ ಪ್ರಕರಣವಾಗಿದೆ.