ಕಂಬಳಕ್ಕೆ ಪ್ರಾಣಿದಯಾ ಮಂಡಳಿಯಿಂದ ಮತ್ತೆ ಕಿರಿಕ್
ಮಂಗಳೂರು, ಜನವರಿ,16: ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಯ ವಿವಾದ ಹಸಿಯಾಗಿರುವಾಗಲೇ ಕರಾವಳಿ ಜಾನಪದ ಕ್ರೀಡೆಯನ್ನು ರದ್ದುಪಡಿಸಬೇಕೆಂದು ಪ್ರಾಣಿದಯಾ ಸಂಘ ಜಿಲ್ಲೆಯ ನಾನಾ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.
ಸರ್ಕಾರದ ಮುಖ್ಯಕಾರ್ಯದರ್ಶಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಟಾಧಿಕಾರಿ, ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಕಂಬಳ ಮುಂದುವರಿಸದಂತೆ ಮನವಿ ಮಾಡಿದ್ದಾರೆ.[ಇತಿಹಾಸದ ಪುಟ ಸೇರಲಿದೆಯೆ ಮಂಗಳೂರು ಕಂಬಳ?]
ಪತ್ರದಲ್ಲಿ ಏನಿದೆ?
ಜಲ್ಲಿಕಟ್ಟು ಮತ್ತು ಎತ್ತಿನಗಾಡಿ ಓಟಕ್ಕೆ ಕೇಂದ್ರ ಸರ್ಕಾರ ನೀಡಿದ ಅನುಮತಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ರದ್ದುಗೊಳಿಸಲು ನಿರಾಕರಿಸಿದೆ. ಆದರೆ ರಾಜ್ಯದಲ್ಲಿ ಕಂಬಳ ಆಚರಣೆಗೆ ಅನುಮತಿ ನೀಡಿರುವುದು 'ಕ್ರೂಯಲ್ಟಿ ಟು ಆನಿಮಲ್ಸ್ ಆಕ್ಟ್ 1960' ರ ಉಲ್ಲಂಘನೆ ಎಂದು ಜನವರಿ 14ರ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧಿಕಾರಿಗಳು,' 2014-15 ನೇ ಸಾಲಿನಲ್ಲಿ ಕಂಬಳ ನಿಷೇಧಿಸಿ ಹೊರಡಿಸಿದ ಆದೇಶ ಶಾಶ್ವತ ಎಂದು 2015ರ ಡಿ. 18 ರಂದು ರಾಜ್ಯ ಸರ್ಕಾರಕ್ಕೆ ಬರೆದಿದ್ದಾರೆ. ಕಳೆದ ವರ್ಷ ಪ್ರಾಣಿ ದಯಾಮಂಡಲಿ ಮೂರು ಕಂಬಳಗಳಿಗೆ ಭೇಟಿ ನೀಡಿ ಕಂಬಳದಲ್ಲಿ ಹಿಂಸೆ ನಡೆಯುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಜಲ್ಲಿಕಟ್ಟು ಮತ್ತು ಎತ್ತಿನಗಾಡಿ ಓಟದಂತೆಯೇ ಕಂಬಳದಲ್ಲೂ ಹಿಂಸೆ ಇದೆ ಎಂಬುದು ಸಾಬೀತಾಗಿದೆ ಎಂದು ಹೇಳಿದರು.[ಜಲ್ಲಿಕಟ್ಟು ನಿಷೇಧ ರದ್ದುಗೊಳಿಸಲು ಕೇಂದ್ರ ಸರ್ಕಾರ ಸಮ್ಮತಿ]
ರಾಜ್ಯ ಸರ್ಕಾರ ಆದೇಶ ನೀಡಿದ ಪ್ರಕಾರವೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳ ಶರತ್ತುಬದ್ಧವಾಗಿಯೇ ನಡೆಯುತ್ತಿದೆ. ಜಲ್ಲಿಕಟ್ಟು ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ಆದೇಶ ಕಂಬಳಕ್ಕೆ ಅನ್ವಯವಾಗದು. ಪ್ರಾಣಿ ಕಲ್ಯಾಣ ಮಂಡಳಿ ಬರೆದ ಪತ್ರ ನನ್ನ ಕೈ ಸೇರಿಲ್ಲ. ಪತ್ರದ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದು ದ. ಕ. ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ತಿಳಿಸಿದ್ದಾರೆ.
ಸರ್ಕಾರ ಡಿ.17 ರಂದು ನೀಡಿದ ಅನುಮತಿಯಂತೆ ಕಂಬಳ ನಡೆಯುತ್ತಿದೆ. ಪ್ರಾಣಿ ಹಿಂಸೆಯಾಗದಂತೆ ಸಂಘಟಕರು ಎಚ್ಚರಿಕೆ ವಹಿಸುತ್ತಿದ್ದು, ಪೂರ್ತಿ ಕಂಬಳದ ವಿಡಿಯೋ ಚಿತ್ರೀಕರಣ ನಡೆಯುತ್ತಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್ ತಿಳಿಸಿದ್ದಾರೆ.[ತಮಿಳುನಾಡಿನಲ್ಲಿ ಈ ವರ್ಷ ಜಲ್ಲಿಕಟ್ಟು ಆಚರಣೆ ಇಲ್ಲ]
ಸುಪ್ರೀಂ ಕೋರ್ಟ್ ಆದೇಶದಲ್ಲಿ ಎಲ್ಲೂ ಕಂಬಳ ಅಥವಾ ಕೋಣದ ಉಲ್ಲೇಖವಿಲ್ಲ. ಹಾಗಾಗಿ ನ್ಯಾಯಾಲಯದ ಆದೇಶ ಕಂಬಳಕ್ಕೆ ಅನ್ವಯವಾಗುವುದಿಲ್ಲ. ಅಧಿಕಾರಿಗಳು ಪ್ರಾಣಿ ಕಲ್ಯಾಣ ಮಂಡಳಿ ಸೂಚನೆಯನ್ನು ನೇರವಾಗಿ ಜಾರಿಗೊಳಿಸುವಂತಿಲ್ಲ ಎಂದು ಕಂಬಳ ತಜ್ಞ ಗುಣಪಾಲ ಕಡಂಬ ಹೇಳಿದ್ದಾರೆ.