'ವಿಲನ್' ಯಶಸ್ವಿಗೆ ಕೋಣ ಬಲಿಕೊಟ್ಟ ಹುಚ್ಚು ಅಭಿಮಾನಿಗಳು: ಆಕ್ರೋಶ ಹೊರಹಾಕಿದ ಹಿಂದೂ ಸಂಘಟನೆಗಳು
ಮಂಗಳೂರು, ಅಕ್ಟೋಬರ್.21: ಶಿವರಾಜ್ ಕುಮಾರ್ ಹಾಗೂ ಸುದೀಪ್ ನಟಿಸಿರುವ 'ವಿಲನ್' ಚಿತ್ರದ ಯಶಸ್ವಿಗಾಗಿ ಕೋಣವನ್ನು ಬಲಿ ನೀಡಿದ ಹುಚ್ಚು ಅಭಿಮಾನಿಗಳ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕೋಣವನ್ನು ಬಲಿ ನೀಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಅಮಾನುಷ ಕೃತ್ಯ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವಿಡಿಯೋದಲ್ಲಿ ಸಾರ್ವಜನಿಕವಾಗಿಯೇ ಕೋಣವನ್ನು ಬಲಿ ನೀಡಲಾಗಿದ್ದು, ಅದರ ರಕ್ತವನ್ನು 'ವಿಲನ್' ಚಿತ್ರದ ಪೊಸ್ಟರ್ ಗೆ ಸಿಂಪಡಿಸಲಾಗುವ ದೃಶ್ಯವಿದೆ. ಈ ಕೃತ್ಯ ಎಲ್ಲಿ ನಡೆದಿದೆ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ.
'ದಿ ವಿಲನ್' ವಿಮರ್ಶೆ: ರಾಮನಾಗಿ ಪ್ರೀತಿಸು, ರಾವಣನಾಗಿ ಯೋಚಿಸು!
'ವಿಲನ್' ಚಿತ್ರದ ಪೋಸ್ಟರ್ ಎದುರು ಅಮಾನುಷವಾಗಿ ಕೋಣವನ್ನು ಹಿಡಿದು ಚಿತ್ರಹಿಂಸೆ ನೀಡಿ ಕಡಿದು ಅದರ ರುಂಡ ಹಾಗೂ ಮುಂಡ ಬೇರ್ಪಡಿಸಿ ಅದರ ರಕ್ತವನ್ನು 'ವಿಲನ್' ಚಿತ್ರದ ಕಟೌಟ್ ಗೆ ಸಿಂಪಡಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಶಿವರಾಜ್ ಕುಮಾರ್ ಹಾಗೂ ಸುದೀಪ್ ಅವರ ಹುಚ್ಚು ಅಭಿಮಾನಿಗಳ ವರ್ತನೆ ಇದೀಗ ಭಾರೀ ಆಕ್ರೋಶಕ್ಕೂ ಕಾರಣವಾಗಿದೆ.
ಕರಾವಳಿ ಜಿಲ್ಲೆಯ ಹಿಂದೂ ಸಂಘಟನೆಗಳು ಈ ಅನಾಗರಿಕ ಅಭಿಮಾನಿಗಳ ಕೃತ್ಯವನ್ನು ಖಂಡಿಸಿದೆ. ಈ ಹಿನ್ನೆಲೆಯಲ್ಲಿ 'ವಿಲನ್' ಚಿತ್ರವನ್ನು ಬ್ಯಾನ್ ಮಾಡಬೇಕೆಂಬ ಒತ್ತಡವೂ ಇದೀಗ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರಲಾರಂಭಿಸಿದ್ದು, ನಾಯಕ ನಟರ ವಿರುದ್ಧವೂ ಆಕ್ರೋಶ ಕೇಳಿ ಬರುತ್ತಿದೆ.
ಕರಾವಳಿಯ ಜನಪದ ಕ್ರೀಡೆ ಕಂಬಳದ ನಿಷೇಧಕ್ಕೆ ಶ್ರಮಿಸುತ್ತಿರುವ ಹಾಗೂ ಕೆಲ ಸಂಪ್ರದಾಯಗಳಿಗೆ ಪ್ರಾಣಿ ಹಿಂಸೆಯ ಕಾರಣ ನೀಡಿ ಕೋರ್ಟ್ ಮೆಟ್ಟಿಲೇರಿರುವ ಪ್ರಾಣಿ ದಯಾ ಸಂಘ ಈ ಕೃತ್ಯದ ಬಗ್ಗೆ ಯಾಕೆ ಧ್ವನಿ ಎತ್ತುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.