ಮೂಢನಂಬಿಕೆ ವರ್ಸಸ್ ಪೊಲೀಸರು: ಏನಿದು 'ಜಸ್ಟೀಸ್ ಫಾರ್ ಅಶ್ರಫ್' ಅಭಿಯಾನ?
ಮಂಗಳೂರು, ಸೆಪ್ಟೆಂಬರ್ 7: ಮೂಢನಂಬಿಕೆ ವಿಚಾರವನ್ನು ಪ್ರಶ್ನಿಸಿ, ಫೇಸ್ ಬುಕ್ ನಲ್ಲಿ ಅಭಿಪ್ರಾಯ ಹಾಕಿದ್ದ ವ್ಯಕ್ತಿಯೊಬ್ಬರಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ ಆ ವ್ಯಕ್ತಿಗೆ ನ್ಯಾಯ ದೊರಕಿಸಬೇಕು ಎಂಬ ಅಭಿಯಾನ ಶುರುವಾಗಿದೆ.
ಮಹಿಳೆಯರು ಶಬರಿಮಲೆ ಪ್ರವೇಶಿಸಬಹುದು ಎಂದು ಕೋರ್ಟ್ ಆದೇಶ ನೀಡಿದ್ದರಿಂದಲೇ ಕೇರಳದಲ್ಲಿ ವಿಪರೀತ ಮಳೆಯಾಗಿ, ಪ್ರವಾಹ ಸ್ಥಿತಿ ಏರ್ಪಟ್ಟು ಅಪಾರ ಸಾವು-ನೋವು ಸಂಭವಿಸಿತು ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ವೊಂದನ್ನು ಹಾಕಲಾಗಿತ್ತು.
ಸರಳವಾಸ್ತು ಚಂದ್ರಶೇಖರ್ ಗುರೂಜಿಗೆ ಮಂಗಳೂರಿನ ವಾಸ್ತುತಜ್ಞ ಸವಾಲು
ಅದಕ್ಕೆ ಪ್ರತಿಯಾಗಿ ತಮ್ಮ ಅಭಿಪ್ರಾಯ ದಾಖಲಿಸಿದ್ದ ಬಂಟ್ವಾಳ ತಾಲೂಕಿನ ಸಾಲೆತ್ತೂರು ನಿವಾಸಿ ಅಶ್ರಫ್, ಹಾಗಿದ್ದರೆ ಪರಶುರಾಮನ ಸೃಷ್ಟಿಯಾದ ತುಳುನಾಡಿನಲ್ಲಿ ನೆರೆ ಬರಲು ಕಾರಣವೇನು ಎಂದು ಪ್ರಶ್ನಿಸಿದ್ದರು. ಈ ಕಾಮೆಂಟ್ ಗೆ ವಿರೋಧ ವ್ಯಕ್ತಪಡಿಸಿ, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 21ರಂದು ಎಫ್ ಐ ಆರ್ ದಾಖಲು ಮಾಡಲಾಗಿತ್ತು.
ಆ ಪ್ರಕರಣ ಕೋರ್ಟ್ ಮೆಟ್ಟಿಲೇರಿ, ಇಂಥ ಅಭಿಪ್ರಾಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೆ ಹಾಕಕೂಡದು ಎಂಬ ಸೂಚನೆಯೊಂದಿಗೆ ಅಶ್ರಫ್ ಗೆ ಜಾಮೀನು ನೀಡಲಾಗಿತ್ತು. ಆದರೆ ಬಿಡುಗಡೆ ನಂತರವೂ ಕೆಲವು ಪೋಸ್ಟ್ ಗಳನ್ನು ಅಶ್ರಫ್ ಹಾಕಿದ್ದರು. ಆ ಬಗ್ಗೆ ಆಕ್ಷೇಪವಿದೆ ಎನ್ನುತ್ತಾರೆ ಪೊಲೀಸರು.
ಆದರೆ, ಪೊಲೀಸರು ಬೇಕೆಂತಲೇ ಅಶ್ರಫ್ ಗೆ ಕಿರುಕುಳ ನೀಡುತ್ತಿದ್ದಾರೆ. ಬಂಧಿಸುವುದಾಗಿ ನೋಟಿಸ್ ಜಾರಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಡೀ ಪ್ರಕರಣದಲ್ಲಿ ಹಲವಾರು ಪ್ರಶ್ನೆಗಳು ಹಾಗೇ ಉಳಿದುಕೊಂಡಿವೆ. ಅದಕ್ಕೆ ಪೊಲೀಸರಿಂದಲೂ ಹಾಗೂ ಅಶ್ರಫ್ ನಿಂದಲೂ ಉತ್ತರ ಬರಬೇಕಿದೆ.
ರಾಷ್ಟ್ರ ನಾಯಕರ ಚಿತ್ರಗಳ ಮೇಲೆ ಮೂತ್ರ ವಿಸರ್ಜನೆ: ಭಾರಿ ಟೀಕೆ
ಈ ಮಧ್ಯೆ ಫೇಸ್ ಬುಕ್, ವಾಟ್ಸ್ ಆಪ್ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ 'ಜಸ್ಟೀಸ್ ಫಾರ್ ಅಶ್ರಫ್' ಎಂಬ ಅಭಿಯಾನ ಆರಂಭಿಸಿದ್ದಾರೆ. ಅಂದಹಾಗೆ ಅಶ್ರಫ್ ವಿರುದ್ಧ ಬರಹದ ಮೂಲಕ ಶಾಂತಿ ಕದಡಲು ಮತ್ತು ಗಲಭೆ ಸೃಷ್ಟಿಸಲು ಯತ್ನ, ಕೋಮು ಗಲಭೆ ಸೃಷ್ಟಿಸಲು ಯತ್ನ ಮತ್ತು ಕ್ರಿಮಿನಲ್ ಮಧ್ಯಪ್ರವೇಶ ಮಾಡಿದ ಆರೋಪದಡಿ ಪ್ರಕರಣ ದಾಖಲು ಮಾಡಲಾಗಿತ್ತು.