ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ "ಏಂಜಲ್ ಬಾಕ್ಸ್"
ಮಂಗಳೂರು, ಆಗಸ್ಟ್ 17: ರಾಜ್ಯ ಸೇರಿ ದೇಶದ ವಿವಿಧ ಭಾಗಗಳಲ್ಲಿ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಯಾವುದರ ಬಗ್ಗೆಯೂ ಅರಿವಿಲ್ಲದ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಜಾಸ್ತಿಯಾಗುತ್ತಿದೆ.
ಅಪ್ರಾಪ್ತ ಮಕ್ಕಳಿಗೆ ಇದರ ಬಗ್ಗೆ ಅರಿವು ಇರುವುದಿಲ್ಲ ಜೊತೆಗೆ ಇದನ್ನು ತಮ್ಮ ಪೋಷಕರು ಅಥವಾ ಸಂಬಂಧಿಕರ ಬಳಿ ಹೇಳುವ ಧೈರ್ಯವೂ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಇಂಚರ ಫೌಂಡೇಶನ್ ಎಂಬ ಎನ್ಜಿಓ ಸಂಸ್ಥೆಯೊಂದು 'ಏಂಜಲ್ ಪ್ರಾಜೆಕ್ಟ್' ಅನ್ನುವ ಹೆಸರಲ್ಲಿ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯವನ್ನು ಮೂಡಿಸುತ್ತಿದೆ.
ಏನಿದು ಏಂಜಲ್ ಪ್ರಾಜೆಕ್ಟ್
ಅಪ್ರಾಪ್ತ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವ ಉದ್ದೇಶದಿಂದ 2014ರಲ್ಲಿ ಮಂಗಳೂರು ಮೂಲದ ಇಂಚರ ಫೌಂಡೇಶನ್ ಎಂಬ ಎನ್ಜಿಓ ಸಂಸ್ಥೆ ಪ್ರಾರಂಭವಾಗುತ್ತದೆ. ಇದರ ಉದ್ದೇಶ ಅಪ್ರಾಪ್ತ ಮಕ್ಕಳು, ಶಾಲಾ ಶಿಕ್ಷಕರು ಹಾಗೂ ಪೋಷಕರಿಗೆ ಲೈಂಗಿಕತೆ ಬಗ್ಗೆ ಅರಿವು ಮೂಡಿಸುವುದಾಗಿದೆ.
ಸದ್ಯ ಮಂಗಳೂರು, ಹುಬ್ಬಳ್ಳಿ, ಧಾರವಾಡ ಹಾಗೂ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಜಿಲ್ಲಾಡಳಿತದಿಂದ ಅನುಮತಿಯೂ ದೊರೆತಿದೆ. ಇದರ ಪ್ರಮುಖ ಉದ್ದೇಶ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವುದಾಗಿದೆ ಎನ್ನುತ್ತಾರೆ ಸಂಸ್ಥೆ ನಿರ್ದೇಶಕರಾದ ಪ್ರೀತಮ್ ರೊಡ್ರಿಗಸ್.
ಶಾಲೆಗಳಲ್ಲಿ ಅರಿವು ಕಾರ್ಯಕ್ರಮ
ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ, ಪೋಷಕರಿಗೆ ಹಾಗೂ ಶಿಕ್ಷಕರಿಗೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಿದ್ದೇವೆ. ಮಕ್ಕಳಿಗೆ ಆಟ, ವಿಡಿಯೋ ಹೀಗೆ ವಿವಿಧ ತರಹದಲ್ಲಿ ತರಬೇತಿ ನೀಡಲಾಗುತ್ತಿದೆ. ಮುಂದಿನ ಮಾರ್ಚ್ ತಿಂಗಳಲ್ಲಿ 20 ಸಾವಿರ ಜನರಿಗೆ ಇದರ ಬಗ್ಗೆ ಅರಿವು ಮೂಡಿಸುವ ಗುರಿ ಹೊಂದಿದ್ದೇವೆ. ಪ್ರಸ್ತುತ ದ.ಕ ಜಿಲ್ಲೆಯಲ್ಲಿ ಸುಮಾರು 30 ಶಾಲೆಗಳಲ್ಲಿ ಈ ಕಾರ್ಯಕ್ರಮಗಳು ನಡೆದಿವೆ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಪ್ರೀತಮ್.
10 ಸಾವಿರ ಜನರಿಗೆ ಜಾಗೃತಿ
ಮಂಗಳೂರಿನಲ್ಲಿ 7ಸಾವಿರ ಮಕ್ಕಳು ಹಾಗೂ 3000 ಪೋಷಕರಿಗೆ ಇದರ ಬಗ್ಗೆ ಅರಿವು ಮೂಡಿಸಲಾಗಿದೆ. ಹುಬ್ಬಳ್ಳಿಯಲ್ಲಿ 1700 ಮಕ್ಕಳು ಹಾಗೂ 3 ಸಾವಿರ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಕೇವಲ ನಗರವಲ್ಲದೇ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಲ್ಲಿಯೂ ಈ ಬಗ್ಗೆ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಹೇಗೆ ಕಾರ್ಯ ನಿರ್ವಹಿಸುತ್ತದೆ
ಈ ಫೌಂಡೇಶನ್ ಮೂಲಕ ಶಾಲೆಗಳಲ್ಲಿ 'ಏಂಜಲ್ ಬಾಕ್ಸ್' ಎಂಬ ದೂರು ಪೆಟ್ಟಿಗೆ ಇಡಲಾಗುತ್ತದೆ. ಇದರಲ್ಲಿ ಯಾರಲ್ಲೂ ಹೇಳಲಾಗದ ಸಮಸ್ಯೆಗಳನ್ನು ಮಕ್ಕಳು ಲಿಖಿತವಾಗಿ ಬರೆದು ದೂರುಗಳನ್ನು ಹಾಕಬಹುದು. ವಾರದಲ್ಲಿ ಎರಡು ಬಾರಿ ಸಂಸ್ಥೆಯ ಸ್ವಯಂ ಸೇವಕರು ಈ ದೂರು ಪೆಟ್ಟಿಗೆ ಪರಿಶೀಲಿಸುತ್ತಾರೆ.
ಸಹಾಯವಾಣಿಯೂ ಆರಂಭ
ಹುಬ್ಬಳ್ಳಿಯಲ್ಲಿ ಸದ್ಯ ಇದು ಕಾರ್ಯನಿರ್ವಹಿಸುತ್ತಿದೆ. ಕೆಲವೊಂದಿಷ್ಟು ದೂರುಗಳು ಸಹ ಬಂದಿದ್ದು, ಅವುಗಳನ್ನು ಪರಿಹರಿಸಲಾಗಿದೆ. ಹುಬ್ಬಳ್ಳಿಯಲ್ಲಿ ಏಂಜಲ್ ಬಾಕ್ಸ್ ಜತೆಗೆ ಸಹಾಯವಾಣಿ ಸಹ ಆರಂಭವಾಗಿದೆ. ಮುಂದಿನ ತಿಂಗಳು ಮಂಗಳೂರಿನಲ್ಲೂ ಈ ಸಹಾಯವಾಣಿ ಆರಂಭವಾಗಲಿದೆ.
ಹುಬ್ಬಳ್ಳಿಯಲ್ಲಿ ದೇಶ್ಪಾಂಡೆ ಎಂಬ ಸಂಸ್ಥೆಯೂ ಇದಕ್ಕೆ ಸಹಾಯ ನೀಡಿದೆ. ಈ ಮೂಲಕ ಎರಡೂ ಸಂಸ್ಥೆಗಳು ಜತೆಯಾಗಿ ಕಾರ್ಯನಿರ್ವಹಿಸುತ್ತಿದೆ