ಮಂಗಳೂರು: ಗೋಶಾಲೆಯಿಂದ ದನಗಳ್ಳತನ, ಇಬ್ಬರ ಬಂಧನ
ಮಂಗಳೂರು, ಏಪ್ರಿಲ್ 05: ಬಂಟ್ವಾಳದ ಕೈರಂಗಳದ ಗೋ ಶಾಲೆ ಯಿಂದ ತಲ್ವಾರ್ ಝಳಪಿಸಿ ದನಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ರೌಡಿ ನಿಗ್ರಹದಳದ ಪೊಲೀಸರ ತಂಡ ಇಬ್ಬರು ಪ್ರಮುಖ ಆರೋಪಿಗಳ ಬಂಧಸಿದೆ.
ಮಾರಕಾಸ್ತ್ರಗಳಿಂದ ಬೆದರಿಸಿ ಗೋಶಾಲೆಯಿಂದಲೇ ದನಗಳನ್ನು ಕಳವುಮಾಡಿ ಕೊಂಡು ಹೋಗಿದ್ದ ಪ್ರಕರಣ ದಿನೇ ದಿನೇ ಗಂಭೀರ ತಿರುವು ಪಡೆಯುತ್ತಿತ್ತು. ಗೋಶಾಲೆಯಿಂದಲೇ ದನಗಳ ಅಪಹರಣ ಹಾಗೂ ದನಗಳನ್ನು ಕಳವು ಮಾಡಿದ ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ಸಹ ಆರಂಭಗೊಂಡಿತ್ತು.
ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮಂಗಳೂರು ದಕ್ಷಿಣ ರೌಡಿ ನಿಗ್ರಹ ಪೊಲೀಸ್ ದಳದ ಕಾರ್ಯಾಚರಣೆ ನಡೆಸಿ ವರ್ಕಾಡಿ ಗ್ರಾಮದ ಮೋನಚ್ಚ ಯಾನೆ ಅಹ್ಮದ್ ಕುಂಞ, ಮೊಂಟೆಪದವು ನಿವಾಸಿ ಬಶೀರ್ ಎಂಬವರನ್ನು ಬಂಧಿಸಿದ್ದಾರೆ.
ಬಂಧಿತರು ಮಾರ್ಚ್29 ರಂದು ಬಂಟ್ವಾಳದ ಕೈರಂಗಳದ ಅಮೃತಧಾರಾ ಗೋಶಾಲೆಯಿಂದ ಮಾರಕಾಸ್ತ್ರಗಳಿಂದ ಬೆದರಿಸಿ ದನಗಳನ್ನು ಅಪಹರಣ ಮಾಡಿದ್ದರು ಎಂದು ಹೇಳಲಾಗಿದೆ. ಈ ದನಗಳ್ಳತನ ಘಟನೆಗೆ ಸಂಬಂಧಿಸಿದಂತೆ ಕೋಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಗೋವುಗಳ ಅಪಹರಣ ಖಂಡಿಸಿ ಗೋಶಾಲೆಯ ಪ್ರಮುಖ್ ಡಾ. ರಾಜಾರಾಮ್ ಭಟ್ ಅಮರಾಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.