ಗೋಗಳ್ಳತನ ವಿರುದ್ದ ಅಮರಣಾಂತ ಉಪವಾಸ, ರಾಜಾರಾಂ ಭಟ್ ಆಸ್ಪತ್ರೆಗೆ
ಮಂಗಳೂರು, ಏಪ್ರಿಲ್ 8: ಬಂಟ್ವಾಳದ ಕೈರಂಗಳದಲ್ಲಿರುವ ಅಮೃತಧಾರಾ ಗೋಶಾಲೆಯಲ್ಲಿ ಕಳೆದ 8 ದಿನಗಳಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಗೋಶಾಲೆಯ ಅಧ್ಯಕ್ಷ ಟಿ.ಜಿ.ರಾಜಾರಾಂ ಭಟ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶನಿವಾರ ತಡ ರಾತ್ರಿ ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಒತ್ತಾಯ ಪೂರ್ವಕವಾಗಿ ಟಿ.ಜಿ. ರಾಜಾರಾಂ ಭಟ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಗೋಮಾಂಸ ತಿನ್ನುವವರಿಗೆ ಹಂದಿ ಸಾಕಲು ಕೊಡಿ: ಹಿಂಜಾವೇ
ಇತ್ತೀಚೆಗೆ ಬಂಟ್ವಾಳದ ಅಮೃತಧಾರಾ ಗೋಶಾಲೆಯಲ್ಲಿ ನಡೆದ ದನಗಳ್ಳತನ ಖಂಡಿಸಿ ಹಾಗೂ ಗೋಗಳ್ಳರನ್ನು ಬಂಧಿಸುವಂತೆ ಒತ್ತಾಯತಿಸಿ ಟಿ.ಜಿ.ರಾಜಾರಾಂ ಭಟ್ ಕಳೆದ 8 ದಿನಗಳ ಹಿಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಉಪವಾಸ ಸತ್ಯಾಗ್ರಹದ ಹಿನ್ನೆಲೆಯಲ್ಲಿ ರಾಜಾರಾಂ ಭಟ್ ಅವರ ಆರೋಗ್ಯ ತೀವ್ರವಾಗ ಹದಗೆಟ್ಟಿತ್ತು.
ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದ್ದ ಹಿನ್ನೆಲೆಯಲ್ಲಿ ಸತ್ಯಾಗ್ರಹ ಅಂತ್ಯಗೊಳಿಸುವಂತೆ ರಾಜಾರಾಂ ಭಟ್ ಅವರ ಮೇಲೆ ಒತ್ತಡ ಹೇರಲಾಗಿತ್ತು. ಆದರೆ ನಿರಶನ ಅಂತ್ಯಗೊಳಿಸಲು ರಾಜಾರಾಂ ಭಟ್ ನಿರಾಕರಿಸಿದ್ದರು.
ಈ ನಡುವೆ ನಿನ್ನೆ ತಡರಾತ್ರಿ ಸತ್ಯಾಗ್ರಹ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿದ ಹಿರಿಯ ಪೊಲೀಸ್ ಅಧಿಕಾರಗಳ ನೇತೃತ್ವದ ತಂಡ ರಾಜಾರಾಂ ಭಟ್ ಅವರನ್ನು ಏಕಾಏಕಿ ಒತ್ತಾಯ ಪೂರ್ವಕವಾಗಿ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.
ಈಗಾಗಲೇ ಪೊಲೀಸರು ಇಬ್ಬರು ದನಗಳ್ಳರನ್ನು ಬಂಧಿಸಿದ್ದಾರೆ. ಆದರೆ ನೈಜ ಗೋಕಳ್ಳರ ಬಂಧನ ಆಗುವವರೆಗೂ ಉಪವಾಸ ನಿರಶನ ಮುಂದುವರೆಸುವುದಾಗಿ ರಾಜಾರಾಂ ಭಟ್ ಪಟ್ಟು ಹಿಡಿದು ನಿರಶನ ಮುಂದುವರಿಸಿದ್ದರು.
ಭಟ್ ಬೆಂಬಲಿಗರಿಂದ ಗೋಶಾಲೆಯಲ್ಲಿ ನಿರಶನ ಮುಂದುವರೆದಿದ್ದು ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಈ ವಿಚಾರ ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುವ ಎಲ್ಲಾ ಲಕ್ಷಣಗಳು ಗೋಚಾರಿಸುತ್ತಿದೆ.