ಪ್ರಮುಖ ಸುದ್ದಿ: ಆರೆಸ್ಸೆಸ್ ಬೈಠಕ್ ಗಾಗಿ ನ.14ಕ್ಕೆ ಮಂಗಳೂರಿಗೆ ಅಮಿತ್ ಶಾ
ಮಂಗಳೂರು, ನವೆಂಬರ್ 13: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಾನೂನು ರೂಪಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೆಚ್ಚುತ್ತಿದೆ. ಈ ನಡುವೆ ಏಕಾಏಕಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬುಧವಾರ ಮಂಗಳೂರಿಗೆ ಭೇಟಿ ನೀಡಲಿದ್ದಾರೆ.
ಆರೆಸ್ಸೆಸ್ ನ ದಕ್ಷಿಣದ ಶಕ್ತಿ ಕೇಂದ್ರ ಮಂಗಳೂರಿನ ಸಂಘನಿಕೇತನದಲ್ಲಿ ಪ್ರಚಾರಕರ ಬೈಠಕ್ ನಡೆಯಲಿದ್ದು, ಈ ಬೈಠಕ್ ನಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಆರೆಸ್ಸೆಸ್ ಮುಖಂಡರೊಂದಿಗೆ ಮಾತನಾಡಲಿದ್ದಾರೆ. ಬುಧವಾರ ಸಂಜೆ 5 ಗಂಟೆಗೆ ಮಂಗಳೂರಿಗೆ ಬರಲಿದ್ದು, ವಿಮಾನ ನಿಲ್ದಾಣದಿಂದ ನೇರವಾಗಿ ಆರೆಸ್ಸೆಸ್ ಬೈಠಕ್ ನಡೆಯುವ ಸ್ಥಳಕ್ಕೆ ತೆರಳಲಿದ್ದಾರೆ.
ರಾಮಮಂದಿರಕ್ಕಾಗಿ 1992 ರ ಮಾದರಿ ಹೋರಾಟ ಮಾಡಲು ಸಿದ್ಧ: RSS
ಮುಂದಿನ ಲೋಕಸಭಾ ಚುನಾವಣೆ ಹಾಗೂ ರಾಮ ಮಂದಿರ ವಿಚಾರದ ಬಗ್ಗೆ ಕೂಡ ಚರ್ಚೆ ನಡೆಯುವ ಸಾಧ್ಯತೆ ಇದೆ. ಈ ವಿಚಾರವಾಗಿಯೇ ಚರ್ಚೆ ನಡೆಸಲು ಅಮಿತ್ ಶಾ ಮಂಗಳೂರಿಗೆ ಆಗಮಿಸುತ್ತಿದ್ದಾರೆ ಎನ್ನಲಾಗಿದ್ದು, ಬುಧವಾರ ಸಂಜೆ 5 ಗಂಟೆಗೆ ಬಂದು, ಬೈಠಕ್ ನಲ್ಲಿ ಭಾಗವಹಿಸಿ, ಮಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಮರುದಿನ ಅಂದರೆ ನವೆಂಬರ್ 15ರ ಬೆಳಗ್ಗೆ 9.30ಕ್ಕೆ ಅಮಿತ್ ಶಾ ಹಿಂತಿರುಗಲಿದ್ದಾರೆ. ಏಕಕಾಲದಲ್ಲಿ ವಾರಾಣಸಿ ಹಾಗೂ ಮಂಗಳೂರಿನಲ್ಲಿ ಆರೆಸ್ಸೆಸ್ ಬೈಠಕ್ ನಡೆಯಲಿದ್ದು, ಮಂಗಳೂರಿನಲ್ಲಿ ಆರೆಸ್ಸೆಸ್ ಸಹ ಕಾರ್ಯವಾಹ ಭೈಯ್ಯಾಜಿ ಜೋಷಿ ಸೇರಿದಂತೆ ದೇಶದ ವಿವಿಧೆಡೆಯಿಂದ 400ಕ್ಕೂ ಅಧಿಕ ಪ್ರಚಾರಕರು ಭಾಗಿಯಾಗಲಿದ್ದಾರೆ.