ಅಮಿತ್ ಶಾರನ್ನು ರಾಜ್ಯದಲ್ಲಿ ಬಹಿಷ್ಕರಿಸಬೇಕು: ಐವನ್ ಡಿಸೋಜಾ
ಮಂಗಳೂರು, ಜನವರಿ 12: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ಆದ್ದರಿಂದ ಅಮಿತ್ ಶಾ ರಾಜ್ಯ ಭೇಟಿಯನ್ನು ಬಹಿಷ್ಕರಿಸಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮತನಾಡಿದ ಅವರು, "ಅಮಿತ್ ಶಾ ಕಾನೂನು ಸುವ್ಯವಸ್ಥೆ ಹಾಳು ಗೆಡವುವ ತಮ್ಮ ಚಾಳಿಯನ್ನು ಮುಂದುವರಿಸಿದರೆ, ಅವರ ಭೇಟಿಯ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ," ಎಂದು ಎಚ್ಚರಿಸಿದರು.
ಕರ್ನಾಟಕದಲ್ಲಿ ಜಯಭೇರಿ ಬಾರಿಸಲು ಅಮಿತ್ ಶಾ 23 ಸೂತ್ರ
"ಎರಡು ಬಾರಿ ಗಡಿಪಾರಾಗಿ , ಜೈಲಿಗೆ ಹೋಗಿ ಬಂದ ಅಮಿತ್ ಶಾ ಅವರ ಹೇಳಿಕೆಯಿಂದ ಸಮಾಜದ ಸಾಮರಸ್ಯಕ್ಕೆ ಧಕ್ಕೆ ಉಂಟಾಗುವ ಅಪಾಯವಿದೆ," ಎಂದು ಆತಂಕ ವ್ಯಕ್ತಪಡಿಸಿದ ಅವರು, "ರಾಜ್ಯಕ್ಕೆ ಭೇಟಿ ನೀಡುವ ಅಮಿತ್ ಶಾ ಇಲ್ಲಿನ ಬಿಜೆಪಿ ನಾಯಕರೊಂದಿಗೆ ಸಾಮಾಜಿಕ ಸಾಮರಸ್ಯ ಕದಡುವಂತೆ ಹೇಳುತ್ತಿದ್ದಾರೆ. ಇದನ್ನು ಪಾಲಿಸದಿದ್ದರೆ ಚೆನ್ನಾಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ," ಎಂದು ಅವರು ಆರೋಪಿಸಿದರು.
ರಾಜ್ಯ ಸರ್ಕಾರ ಹಿಂದೂ ವಿರೋಧಿ ಎಂದು ಬಿಂಬಿಸುವ ಮೂಲಕ ಅಮಿತ್ ಶಾ ರಾಜಕೀಯ ಲಾಭಕ್ಕೆ ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ ಅವರು ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ರಾಜ್ಯ ಸರ್ಕಾರ ಆಡಳಿತ ನೀಡಿದರೂ ಕೇಂದ್ರ ಅನುದಾನ ನೀಡಲು ಹಿಂದೇಟು ಹಾಕುತ್ತಿದೆ ಎಂದು ದೂರಿದರು.
ಯಡಿಯೂರಪ್ಪ ಜೊತೆಗೆ ಬಿಜೆಪಿ ನಾಯಕರು ಬರುತ್ತಿಲ್ಲ. ಮಹಾದಾಯಿ ಸಮಸ್ಯೆಯನ್ನು ಸರಿಪಡಿಸುವ ಬದಲು ಈಗ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಉಲ್ಟಾ ಹೊಡೆದಿದ್ದಾರೆ. ಇದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಬಿಜೆಪಿ ಜನತೆಯ ವಿಶ್ವಾಸವನ್ನು ಕಳೆದುಕೊಂಡಿದೆ ಎಂದು ಅವರು ಹೇಳಿದರು.