ಮೃತ ಯೋಧರ ಹಿರಿಮೆ ತೆರೆದಿಟ್ಟ 'ಅಮರ್ ಜವಾನ್' ಕಾರ್ಯಕ್ರಮ
ಮಂಗಳೂರು, ಆಗಸ್ಟ್ 21 : ಟೀಮ್ ಬ್ಲ್ಯಾಕ್ ಅಂಡ್ ವೈಟ್ ಮಂಗಳೂರು ವತಿಯಿಂದ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ, ಲಯನ್ಸ್ ಕ್ಲಬ್, ಬಲ್ಮಠ ರಾಷ್ಟ್ರೀಯ ಯೋಜನೆ ಮಂಗಳೂರು, ವಿವಿ ಸಹಯೋಗದಲ್ಲಿ "ಅಮರ್ ಜವಾನ್" ಎಂಬ ಕಾರ್ಯಕ್ರಮ ನಗರದ ಪುರಭವನದಲ್ಲಿ ನಡೆಯಿತು.
ರಾಷ್ಟ್ರ ಕಾಯುವ ಯೋಧರ ಮಹತ್ವ ಹಿರಿಮೆಯನ್ನು ಈ ಕಾರ್ಯಕ್ರಮ ತೆರೆದಿಟ್ಟಿತ್ತು. ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1ರ ತನಕ ನಡೆದ ಈ ಕಾರ್ಯಕ್ರಮ ರಾಷ್ಟ್ರಪ್ರೇಮ ರಾಷ್ಟ್ರಜಾಗೃತಿಯ ದಿಕ್ಸೂಚಿಯಾಗುವಲ್ಲಿ ಯಶಸ್ವಿಯಾಯಿತು.
ಸೇನೆಯಲ್ಲಿ ದೇಶಕ್ಕಾಗಿ ಜೀವತೆತ್ತ ಜಿಲ್ಲೆಯ ಯೋಧರನ್ನು ನೆನಪಿಸುವುದರ ಜತೆಗೆ ಅವರ ಕುಟುಂಬವನ್ನು ಗೌರವಿಸುವ ಕಾರ್ಯಕ್ರಮ ಇದಾಗಿತ್ತು. ಈ ಸಂದರ್ಭ 2002ನೇ ಇಸ್ವಿಯಲ್ಲಿ ನಡೆದ ಆಪರೇಷನ್ ಪರಾಕ್ರಮನಲ್ಲಿ ಹುತಾತ್ಮರಾದ ಯೋಧ ಪುತ್ತೂರಿನ ಪರಮೇಶ್ವರ ಗೌಡ ಅವರ ವಿಡಿಯೋ ದಾಖಲೆಗಳನ್ನು ಎಲ್ಸಿಡಿ ಸ್ಕ್ರೀನ್ ನಲ್ಲಿ ಪ್ರದರ್ಶಿಸಿ ನಿರೂಪಣೆ ಮಾಡಲಾಯಿತು.
ಪರಮೇಶ್ವರ ಗೌಡ ಅವರ ಬಳಿಕ ಕುಟುಂಬವನ್ನು ವೇದಿಕೆಗೆ ಆಹ್ವಾನಿಸುತ್ತಿದ್ದಂತೆ ಹರ್ಷಿತ, ಅಖೀಲ ತಮ್ಮ ತಾಯಿ ಪುಷ್ಪಾವತಿ ಜೊತೆ ಹೆಜ್ಜೆ ಹಾಕಿದರು. ಈ ಕ್ಷಣದಲ್ಲಿ ಆ ಇಬ್ಬರು ಹೆಣ್ಣು ಮಕ್ಕಳು ಬಿಕ್ಕಿ ಬಿಕ್ಕಿ ಕಣ್ಣೀರಿಡುತ್ತಿದ್ದ ದೃಶ್ಯ ಕಲ್ಲು ಹೃದಯವನ್ನು ಕರಗಿಸುವಂತಿತ್ತು.
ಇಡೀ ಸಭೆಯೇ ಭಾವುಕ
ವೇದಿಕೆಯಲ್ಲಿದ್ದ ಆ ಏಳು ನಿಮಿಷವೂ ಅಪ್ಪನ ನೆನಪು ಮರು ಕಲಿಸುತ್ತಾ ದುಃಖ ಉಮ್ಮಳಿಸಿ ಬರುತ್ತಿತ್ತು. ಆ ಮನ ಕುಲುಕುವ ಸನ್ನಿವೇಶ ಕಂಡು ಇಡೀ ಸಭೆ ಭಾವುಕವಾಯಿತು.
ಮೃತ ಯೋಧರ ಕುಟುಂಬಕ್ಕೆ ಗೌರವ
ಅಲ್ಲದೆ ಆಪರೇಷನ್ ಮೇಘದೂತ್ ನಲ್ಲಿ ಮೃತರಾದ ಸುಳ್ಯದ ವಿಶ್ವಾಂಬರ, ಫಜಲ್, ಗಿರೀಶ್ ಕುಮಾರ್ , ಗುರುವಾಯನಕೆರೆಯ ಏಕನಾಥ್ ಶೆಟ್ಟಿ ಕೌಟುಂಬಿಕರನ್ನು ಗೌರವಿಸಲಾಯಿತು.
ಸಾಹಸ ಕತೆ ವಿಡಿಯೋ ಮೂಲಕ ಪ್ರದರ್ಶನ
ಈ ವೀರ ಯೋಧರ ಸಾಹಸ ಕತೆಯನ್ನು ವಿಡಿಯೋ ಮೂಲಕ ಪ್ರದರ್ಶಿಸಿ ಸನ್ಮಾನಿಸುವ ಇಡೀ ಪುರಭವನ ನಮ್ಮ ಯೋಧರ ಬಗ್ಗೆ ಹೆಮ್ಮೆ ಪಟ್ಟುಕೊಂಡಿತು. ಕುಟುಂಬಿಕರು ಕ್ಷಣ ಕ್ಷಣಕ್ಕೂ ಭಾವುಕರಾದರು. ಅಷ್ಟೇ ವೇಗದಲ್ಲಿ ಹೆಮ್ಮೆಪಟ್ಟು ಕೊಳ್ಳುತ್ತಿದ್ದರು.ಸೇವೆಗಾಗಿ ಜೀವ ತೆತ್ತ ಧೀರ ತಂದೆಯನ್ನು ಕಳೆದುಕೊಂಡು ಹದಿನೈದು ವರ್ಷ ಕಳೆದರೂ ಆ ಮಕ್ಕಳಲ್ಲಿ ಇನ್ನು ಕಣ್ಣೀರು ಬತ್ತಿಲ್ಲ, ಅಮ್ಮನ ಜತೆ ಕಣ್ಣೀರು ಹಾಕುತ್ತಲೇ ಹೆಜ್ಜೆ ಹಾಕಿದರು.
ಭಾವುಕರಾದ ಮೇಯರ್ ಕವಿತಾ ಸನಿಲ್
ಸನ್ಮಾನ ಸ್ವೀಕರಿಸಲು ಬಂದ ಮಹಾತ್ಮ ಯೋಧರ ಮಕ್ಕಳ ಮಾತುಗಳನ್ನು ಕೇಳಿದ ಮೇಯರ್ ಕವಿತಾ ಸನಿಲ್ ಭಾವುಕರಾಗಿ ಮಾತನಾಡಿ, ತನ್ನ ಮೇಯರ್ ಅಧಿಕಾರ ಅವಧಿಯಲ್ಲಿ ನಾನು ಕಂಡ ಅತ್ಯುತ್ತಮ ಕಾರ್ಯಕ್ರಮವಿದು. ರಾಷ್ಟ್ರಪ್ರೇಮ ರಾಷ್ಟ್ರ ಜಾಗೃತಿಯನ್ನು ಮೂಡಿಸುವ ಇಂತಹ ಕಾರ್ಯಕ್ರಮ ಹೆಚ್ಚು ಹೆಚ್ಚು ನಡೆಯಬೇಕು ಈ ರೀತಿಯ ವಿಭಿನ್ನ ಕಾರ್ಯಕ್ರಮ ನಡೆಸಿದ ಬ್ಲ್ಯಾಕ್ ಎಂಡ್ ವೈಟ್ ತಂಡಕ್ಕೆ ಸದಾ ಪ್ರೋತ್ಸಾಹ ನೀಡಲು ನಾನು ಸಿದ್ಧ ಎಂದರು.
ಹನುಮಂತಪ್ಪನ ಪತ್ನಿಯ ಮನದಾಳದ ಮಾತು
ದೇಶಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟು ಪ್ರಾಣ ತ್ಯಾಗ ಮಾಡಿದ ಮಹಾತ್ಮ ಯೋಧರು ಯಾವತ್ತೂ ಚಿರಂಜೀವಿಗಳು ಅಂತ ಯೋಧರ ಪತ್ನಿ ತಾಳಿ ಕುಂಕುಮ ಬಳೆ ಯಾವತ್ತೂ ತೆಗೆಯದೆ ಸುಮಂಗಲಿಯಾಗಿಯೇ ಇರಬೇಕು. ಇದು ಹುತಾತ್ಮ ಯೋಧ ಹನುಮಂತಪ್ಪ ಅವರ ಪತ್ನಿ ಮಹಾದೇವಿ ಅವರ ಮನದಾಳದ ಮಾತು