ಕಾವ್ಯಾ ನಿಗೂಢ ಸಾವು ಒಂದು ವ್ಯವಸ್ಥಿತ ಕೊಲೆ: ಕೆ.ಎಸ್.ವಿಮಲಾ
ಮಂಗಳೂರು, ಸೆಪ್ಟೆಂಬರ್ 11: ಮೂಡಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ನಿಗೂಢ ಸಾವು ಒಂದು ವ್ಯವಸ್ಥಿತ ಕೊಲೆಯಾಗಿದ್ದು ಅದನ್ನು ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ. ಆಳ್ವಾಸ್ ಕಾಲೇಜಿನಲ್ಲಿ ಈ ವರೆಗೆ ನಡೆದ ಅಸಹಜ ಸಾವುಗಳನ್ನು ಮುಚ್ಚಿಹಾಕಲಾಗಿದೆ ಎಂದು ಮಹಿಳಾ ಹೋರಾಟಗಾರ್ತಿ ಕೆ.ಎಸ್. ವಿಮಲಾ ಅವರು ಅರೋಪಿಸಿದ್ದಾರೆ.
ಕಾವ್ಯಾ ಸಾವಿಗೆ ನ್ಯಾಯಕ್ಕೆ ಆಗ್ರಹಿಸಿ ಮಂಗಳೂರಿನಲ್ಲಿ ಉಪವಾಸ ಸತ್ಯಗ್ರಹ
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಕಾವ್ಯಾಳ ಅನುಮಾನಾಸ್ಪದ ಸಾವಿನ ಉನ್ನತ ತನಿಖೆಗೆ ಒತ್ತಾಯ, ಶೈಕ್ಷಣಿಕ ಹತ್ಯೆಗಳನ್ನು ತಡೆಗಟ್ಟಲು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಯಮ ಉಲ್ಲಂಘಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳು ಹಮ್ಮಿಕೊಂಡ ಸಾಮೂಹಿಕ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಅಲ್ಲಲ್ಲಿ ತಲೆ ಎತ್ತಿವೆ.ಇವುಗಳು ಸರ್ಕಾರದ ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ. ಸ್ಥಳೀಯ ಆಡಳಿತಗಳು ಇವುಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ಹತ್ತಾರು ವಿದ್ಯಾರ್ಥಿಗಳು ನಿಗೂಢವಾಗಿ ಸಾವನ್ನಪ್ಪುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾವ್ಯ ಸಾವಿನ ವಿಚಾರದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಡಾ.ಮೋಹನ್ ಆಳ್ವಾ ಅವರನ್ನು ಕಟಕಟೆಯಲ್ಲಿ ನಿಲ್ಲಿಸಿದರೆ ಎಲ್ಲಾ ಹೊರಬರಲಿದೆ. ತಮ್ಮ ಹತ್ಯಾಕೋರತನವನ್ನು ಮರೆಮಾಚಲು ಸಾಂಸ್ಕೃತಿಕ ರಾಯಭಾರಿ ಎಂಬ ಮುಖವಾಡ ತೊಡಲಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು. ನೆಲದ ಪ್ರತಿಯೊಂದು ಕಾನೂನನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಉಲ್ಲಂಘಿಸಲಾಗಿದೆ. ಆದರೆ ರಾಜ್ಯ ಸರಕಾರ ಕಾಲೇಜು ಆಡಳಿತ ಮಂಡಳಿಯೊಂದಿಗೆ ಶಾಮಿಲಾಗಿ ಕಣ್ಣುಮುಚ್ಚಿ ಕುಳಿತಿದೆ ಎಂದು ಅವರು ದೂರಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿರುವ ಎಲ್ಲಾ ಅಕ್ರಮಗಳಿಗೆ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ನೇರಾ ಕಾರಣ ಎಂದು ಆರೋಪಿಸಿದರು. ಕಾವ್ಯಾಳ ಪ್ರಕರಣದಿಂದ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಇತರ ಮಕ್ಕಳ ಪೋಷಕರು, ಪಾಲಕರು ಆತಂಕಿತರಾಗಿದ್ದಾರೆ. ಕಾವ್ಯಾ ನಿಗೂಢವಾಗಿ ಸಾವನ್ನಪ್ಪಿದ ವಸತಿಯುತ ಶಾಲೆ ಕೂಡ ಮಾನ್ಯತೆ ಇಲ್ಲದೆ ಹತ್ತು ವರ್ಷದಿಂದ ನಡೀತಿದೆ. ಅಲ್ಲಿ 24 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಾರೆ. ಕಾವ್ಯಾ ಹಾಸ್ಟೆಲಿನ 5 ನೇ ಮಹಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ಕಟ್ಟಡಕ್ಕೆ ಕನಿಷ್ಠ ಲಿಫ್ಟ್ ಇಲ್ಲದಿದ್ದರೂ ಜಿಲ್ಲಾಡಳಿತ ಪ್ರಶ್ನಿಸುವುದಿಲ್ಲ ಎಂದು ಅವರು ದೂರಿದರು.
ಕಾವ್ಯಾ ಸಾವನ್ನಪ್ಪಿ ಎರಡು ತಿಂಗಳಾದರೂ ಪ್ರಕರಣ ಯಾವ ಹಂತಕ್ಕೆ ಬಂದಿದೆ ಅನ್ನೋದು ಸಾರ್ವಜನಿಕರಿಗೆ ಬಿಡಿ, ಕಾವ್ಯಾ ಪೋಷಕರಿಗೂ ಮಾಹಿತಿ ಇಲ್ಲ. ಪ್ರಕರಣದಲ್ಲಿ ಯಾರ ವಿರುದ್ಧ ಎಫ್ಐಆರ್ ದಾಖಲಾಗಿದೆಯೆಂದು ಇನ್ನೂ ಕಾವ್ಯಾ ತಾಯಿಗೆ ತಿಳಿಸಿಲ್ಲ. ಹಾಗಾದ್ರೆ ಬಡ ಹೆಣ್ಣು ಮಗಳ ಸಾವಿಗೆ ಜಿಲ್ಲಾಡಳಿತದಿಂದ ಯಾವ ನ್ಯಾಯ ಸಿಗಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾವ್ಯಾಳ ಪೋಷಕರು, ವಿಚಾರವಾದಿ ಪ್ರೊ. ನರೇಂದ್ರ ನಾಯಕ್, ಕಾಲೇಜು ಸಂಘಟನೆಗಳ ಮುಖಂಡರು, ದಲಿತ, ಸಮಾಜ ಸೇವಾ ಸಂಘಟನೆಗಳ ಮುಖಂಡರು ಪ್ರತಿಭಟನಾ ಸಭೆಯಲ್ಲಿ ಉಪಸ್ಥಿತರಿದ್ದರು.