ಆಳ್ವಾಸ್ ಕಾಲೇಜ್ ನ ಶ್ರೀಗೌರಿ ಜೋಶಿಗೆ ಯುವ ಚೇತನಾ ಪ್ರಶಸ್ತಿ
ಬೆಂಗಳೂರು ಮೂಲದ ಯೂತ್ ಫಾರ್ ಸೇವಾ ಎನ್.ಜಿ.ಓ ಸಂಘಟನೆ ಧನಾತ್ಮಕ ಪತ್ರಿಕೋದ್ಯಮ, ಪರಿಣಾಮಕಾರಿ ಬರಹ ಮತ್ತು ಕ್ರಿಯಾತ್ಮಕ ಬರಹದ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಶ್ರೀಗೌರಿ ಜೋಶಿಗೆ ಯುವ ಚೇತನಾ ಪ್ರಶಸ್ತಿ ದೊರೆತಿದೆ.
ಮಂಗಳೂರು, ಮಾರ್ಚ್. 17 : ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ದ್ವಿತೀಯ ಎಂ.ಸಿ.ಜೆ ವಿದ್ಯಾರ್ಥಿನಿ ಶ್ರೀಗೌರಿ ಎಸ್ ಜೋಶಿ ಅವರು ಯುವ ಚೇತನಾ -2017 ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬೆಂಗಳೂರು ಮೂಲದ ಯೂತ್ ಫಾರ್ ಸೇವಾ ಎನ್.ಜಿ.ಓ ಸಂಘಟನೆ ಬದಲಾವಣೆಯ ಸೈನಿಕರು ಎಂಬ ಧ್ಯೇಯ ವಾಕ್ಯದಡಿಯಲ್ಲಿ ಧನಾತ್ಮಕ ಪತ್ರಿಕೋದ್ಯಮ, ಪರಿಣಾಮಕಾರಿ ಬರಹ ಮತ್ತು ಕ್ರಿಯಾತ್ಮಕ ಬರಹ ವಿಭಾಗದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಶ್ರೀಗೌರಿ ಅವರು ಧನಾತ್ಮಕ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡರು[ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟ: ಆಳ್ವಾಸ್ ಗೆ ಪ್ರಶಸ್ತಿ]
ಮಾರ್ಚ್ 26ರಂದು ನವದೆಹಲಿಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಮೊದಲ ಹಂತದ ದೂರವಾಣಿ ಸಂದರ್ಶನದ ನಂತರ ಮುಖಾಮುಖಿ ಸಂದರ್ಶನ ಹಾಗೂ ಸ್ಕೈಪ್ ಸಂದರ್ಶನದ ಸಾಮರ್ಥ್ಯದ ಆಧಾರದ ಮೇಲೆ ಶ್ರೀಗೌರಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ದಕ್ಷಿಣ ಭಾರತದಿಂದ 30 ವಿದ್ಯಾರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದ್ದು, ಕೊನೆಯ ಹಂತದ ಪರೀಕ್ಷೆಯಲ್ಲಿ ಶ್ರೀಗೌರಿ ಆಯ್ಕೆಯಾಗಿದ್ದಾರೆ. ಶ್ರೀಗೌರಿ ಅವರ ಈ ಸಾಧನೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ವಿಭಾಗದ ಮುಖ್ಯಸ್ಥೆ ಡಾ. ಮೌಲ್ಯ ಜೀವನ್ರಾಮ್ ಅಭಿನಂದನೆಗಳನ್ನು ತಿಳಿಸಿದ್ದಾರೆ.