ಚಿತ್ರದುರ್ಗ ಮೂಲದ ವಿದ್ಯಾರ್ಥಿನಿ ಆಳ್ವಾಸ್ ಕಾಲೇಜಿನಲ್ಲಿ ಆತ್ಮಹತ್ಯೆ
ಮಂಗಳೂರು, ಜನವರಿ 26: ಐದನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಯೊಬ್ಬಳುಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯನ್ನು ಚಿತ್ರದುರ್ಗದ ಮೂಲದ ರಚನಾ ಎಂದು ಗುರುತಿಸಲಾಗಿದೆ.
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿ ರಚನಾ, ಗುರುವಾರ ಕಾಲೇಜಿಗೆ ಸ್ಟಡಿ ಹಾಲಿಡೇಸ್ ಇರುವುದರಿಂದ ಲೈಬ್ರರಿಗೆ ಬಂದಿದ್ದಳು. ಬಳಿಕ ಕಾಲೇಜಿನ 5 ನೇ ಮಹಡಿಗೆ ತೆರಳಿದ ರಚನಾ ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ.
ಈ ಹಿಂದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ರಚನಾ ಕೌನ್ಸಿಲಿಂಗ್ ಪಡೆದಿದ್ದಳು ಎನ್ನಲಾಗಿದೆ. ಪ್ರಥಮ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದಿದ್ದ ರಚನಾ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕಾಗಿ ಖಿನ್ನತೆಗೆ ಒಳಗಾಗಿದ್ದಳು ಎಂದು ಹೇಳಲಾಗಿದೆ.
ರಚನಾ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದು ಆಳ್ವಾಸ್ ಕಾಲೇಜಿನಲ್ಲಿ ನಡೆಯುತ್ತಿರುವ ಮೊದಲ ಆತ್ಮಹತ್ಯೆಯೇನಲ್ಲ. ಈ ಹಿಂದೆ ಕ್ರೀಡಾ ವಿದ್ಯಾರ್ಥಿನಿ ಕಾವ್ಯಶ್ರೀ ಆತ್ಮಹತ್ಯೆ ರಾಜ್ಯದಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ಕೆಲವು ದಿನಗಳ ಹಿಂದೆ ಆಳ್ವಾಸ್ ಕ್ಯಾಂಪಸ್ ನ ನಂದಿನಿ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ತೇಜಸ್(16) ತನ್ನ ಜನ್ಮ ದಿನದಂದೇ (ಜನವರಿ 8) ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ. ಇದೀಗ ರಚನಾ ಆತ್ಮಹತ್ಯೆ ಮಾಡಿಕೊಂಡಿದ್ದು ಕಾಲೇಜಿನ ಸಾವಿನ ಸರಣಿ ನಿಲ್ಲುತ್ತಿಲ್ಲ.