ಅತ್ಯಾಚಾರ ಆರೋಪಿ ಅಬೂಬಕರ್ ನನ್ನು ಬಂಧಿಸಿದ್ದು ತಪ್ಪಾ ಸಚಿವರೇ?
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕರ ನಡುವೆ ಸಾಮರಸ್ಯ ಕದಡಲು ಎರಡು ಕೋಮಿನವರ ಪಾಲು ಎಷ್ಟು ಇದೆಯೋ, ಇಲ್ಲಿನ ಜನರ ನೆಮ್ಮದಿ ಹಾಳುಮಾಡಲು ಸ್ಥಳೀಯ ಜನಪ್ರತಿನಿಧಿಗಳ ಮತ್ತು ಸಚಿವರ ಪಾಲು ಅಷ್ಟೇ ಇದೆ.
ಈ ಭಾಗದಲ್ಲಿ ನಡೆಯುವ ಯಾವುದೇ ಪ್ರತಿಭಟನೆ, ಹೋರಾಟ,ಹಿಂಸಾಚಾರ ಕೋಮುಬಣ್ಣಕ್ಕೆ ತಿರುಗುತ್ತಿರುವುದು ಬಹುದೊಡ್ಡ ದುರಂತ. ಯುಗಾದಿ, ರಂಜಾನಿಗೆ ಅವರವರ ಸಮುದಾಯದ ಮನೆಯಲ್ಲಿ ಅಲ್ಲಲ್ಲಿ ಹಬ್ಬ ಆಚರಿಸುತ್ತಿದ್ದ ಪದ್ದತಿಯೂ ಇತ್ತೀಚೆಗೆ ನಶಿಸಿ ಹೋಗುತ್ತಿದೆ.
ವಿಚಾರಕ್ಕೆ ಬರುವುದಾದರೆ, ಸುಮಾರು ಒಂದು ವರ್ಷದ ಹಿಂದೆ ಅತ್ಯಾಚಾರಕ್ಕೆ ಯತ್ನಿಸಿ ಪರಾರಿಯಾಗಿದ್ದ ಆರೋಪಿ ಅಬೂಬಕರ್ ಸಿದ್ದಿಕಿ ಎನ್ನುವವನನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದು ಈಗ ಭಾರೀ ಸುದ್ದಿಯಾಗಿದೆ.
ಇದಕ್ಕಿಂತ ಹೆಚ್ಚಾಗಿ ನಮ್ಮ ವ್ಯವಸ್ಥೆಯ ಬಗ್ಗೆ ಬೇಸರ ತರುವ ಸಂಗತಿಯೆಂದರೆ, ಆರೋಪಿಯನ್ನು ಬಂಧಿಸಿದ್ದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್, ಡೈನಾಮಿಕ್ ಅಧಿಕಾರಿ ಪ್ರಮೋದ್ ಕುಮಾರ್ ರನ್ನು ಬಲವಂತವಾಗಿ ರಜೆ ಮೇಲೆ ತೆರಳಲು ಆದೇಶ ನೀಡಿದ್ದು.
ಇನ್ಸ್ ಪೆಕ್ಟರ್ ಕೆಲಸಕ್ಕೆ ಬೆನ್ನುತಟ್ಟುವ ಬದಲು ಜಿಲ್ಲೆಯ ಸಚಿವ ಮತ್ತು ಪ್ರಭಾವಿ ಶಾಸಕರೊಬ್ಬರು ಎಸ್ಪಿ ಮುರುಗನ್ ಅವರಿಗೆ ಒತ್ತಡ ಹೇರಿ ಇನ್ಸ್ ಪೆಕ್ಟರ್ ನನ್ನು ಠಾಣೆಯಿಂದ ತಾತ್ಕಾಲಿಕವಾಗಿ ಎತ್ತಂಗಡಿ ಮಾಡಿಸಿದ್ದಾರೆ.
ಇದರ ವಿರುದ್ದ ಅಪರೂಪಕ್ಕೆ ಎನ್ನುವಂತೆ ಪೊಲೀಸರು ಪ್ರತಿಭಟನೆ ಆರಂಭಿಸಿದಾಗ, ಸ್ಥಳೀಯರೂ ಇವರಿಗೆ ಬೆಂಬಲ ನೀಡಿದ್ದಾರೆ. ಘಟನೆಯ ಬಗ್ಗೆ ಇನ್ನಷ್ಟು ಸ್ಲೈಡಿನಲ್ಲಿ..
ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿ
2014ರ ಡಿಸೆಂಬರ್ ನಲ್ಲಿ ಮಂಗಳೂರಿನ ಉಳಾಯಿಬೆಟ್ಟುವಿನಲ್ಲಿ ನಡೆದ ಗಲಭೆ ವೇಳೆ ಅಬೂಬಕರ್ ಸಿದ್ಧಿಕಿ ಎಂಬಾತ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಪರಾರಿಯಾಗಿದ್ದ. ಅಲ್ಲದೆ ಆತನ ವಿರುದ್ಧ ಕೊಲೆ ಯತ್ನದ ಪ್ರಕರಣವೂ ದಾಖಲಾಗಿತ್ತು.
ಆರೋಪಿ ಬಂಧನ
ಆರೋಪಿ ಅಬೂಬಕರ್ ನನ್ನು ಸುಮಾರು ಒಂದು ವರ್ಷದ ನಂತರ (ಡಿ 7) ಬಂಧಿಸಿ, ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್ ಮಂಗಳವಾರ ಆತನನ್ನು ಕೋರ್ಟಿಗೆ ಹಾಜರು ಪಡಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇದರಿಂದಾಗಿ ಜಿಲ್ಲೆಯ ಒಬ್ಬ ಸಚಿವ ಮತ್ತು ಶಾಸಕರು ಇನ್ಸ್ ಪೆಕ್ಟರ್ ವಿರುದ್ದ ತಿರುಗಿಬಿದ್ದರು ಎನ್ನಲಾಗುತ್ತಿದೆ. (ಚಿತ್ರದಲ್ಲಿ ಇನ್ಸ್ ಪೆಕ್ಟರ್ ಪ್ರಮೋದ್)
ಎಸ್ಪಿ ಅಣ್ಣಾಮಲೈಗೆ ಒತ್ತಡ
ಆರೋಪಿಯನ್ನು ಬಂಧಿಸಿದ ಹಿನ್ನೆಲೆಯಲ್ಲಿ ಇಬ್ಬರು ರಾಜಕೀಯ ನಾಯಕರು ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ಆಯುಕ್ತ ಮುರುಗನ್ ಅವರಿಗೆ ಕರೆ ಮಾಡಿ ಇನ್ಸ್ ಪೆಕ್ಟರ್ ನನ್ನು ವರ್ಗಾವಣೆ ಮಾಡುವಂತೆ ಒತ್ತಡ ಹಾಕಿದ್ದರು. ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದ ಎಸ್ಪಿ, ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್ ರನ್ನು ಬಲವಂತದ ರಜೆಯ ಮೇಲೆ ಕಳುಹಿಸಿದ್ದಾರೆ. ಇದು ಸ್ಥಳೀಯರ ಮತ್ತು ಪೊಲೀಸರ ಪ್ರತಿಭಟನೆಗೆ ದಾರಿಯಾಯಿತು.
ಪೊಲೀಸರೇ ತಿರುಗಿ ಬಿದ್ದರು
ಇನ್ಸ್ ಪೆಕ್ಟರ್ ರನ್ನು ರಜೆಯ ಮೇಲೆ ಕಳುಹಿಸಿದ್ದಕ್ಕೆ ಐವತ್ತಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಪ್ರತಿಭಟನೆ ನಡೆಸಲಾರಂಭಿಸಿದರು. ವಿಷಯ ತಿಳಿದ ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಪೊಲೀಸರ ಪ್ರತಿಭಟನೆಗೆ ಸಾಥ್ ನೀಡಿದರು. ಸ್ಥಳಕ್ಕಾಗಮಿಸಿದ ಡಿಸಿಪಿ ಶಾಂತರಾಜು, ಪೊಲೀಸ್ ಸಿಬ್ಬಂದಿ ಠಾಣೆಯೊಳಗೆ ಆಗಮಿಸಿ ಮಾತುಕತೆ ನಡೆಸುವಂತೆ ಕೇಳಿಕೊಂಡರೂ ಪಟ್ಟುಬಿಡದ ಪೊಲೀಸರು ತಮ್ಮ ಪ್ರತಿಭಟನೆ ಮುಂದುವರಿಸಿದರು.
ಆದೇಶ ವಾಪಸ್
ಪೊಲೀಸರ ಮತ್ತು ಸ್ಥಳೀಯರ ಪ್ರತಿಭಟನೆಗೆ ಮಣಿದ ಇಲಾಖೆ, ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್ ಅವರ ವಿರುದ್ದ ಆದೇಶ ಹಿಂತೆಗೆದುಕೊಂಡಿತು. ಇದಾದ ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎಸೈ ಪ್ರಮೋದ್ ಕುಮಾರ್ ಅವರನ್ನು ಪೋಲಿಸರು ಹೆಗಲಮೇಲೆ ಹೊತ್ತು ಸಂಭ್ರಮಿಸಿದರು.
ಮುರುಗನ್ ಹೇಳಿಕೆ
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಆಯುಕ್ತ ಮುರುಗನ್, ಇಲಾಖೆ ಪ್ರಮೋದ್ ಕುಮಾರ್ ಅವರನ್ನು ವರ್ಗಾವಣೆ ಮಾಡಿಲ್ಲ, ರಜೆಯ ಮೇಲೆ ಹೋಗಲು ಆದೇಶ ನೀಡಿಲ್ಲ. ನನ್ನ ಕಚೇರಿಯಿಂದ ಅಂತಹ ಯಾವುದೇ ಆದೇಶ ಹೋಗಿಲ್ಲ. ಅವರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ, ನೀವೇ ಪ್ರತಿಭಟನೆ ನಡೆಸಿದರೆ ಹೇಗೆ, ಪೊಲೀಸ್ ಸಿಬ್ಬಂದಿ ಮತ್ತು ಸಾರ್ವಜನಿಕರು ಪ್ರತಿಭಟನೆ ಕೈಬಿಡಬೇಕೆಂದು ಮನವಿ ಮಾಡಿದರು.
ಹಿಂದೂ ಜಾಗರಣ ವೇದಿಕೆ ಮತ್ತು ಡಿವೈಎಫ್ ಐ
ಪ್ರತಿಭಟನೆಯಲ್ಲಿ ಸ್ಥಳೀಯ ನಾಗರಿಕರ ಜೊತೆ ಹಿಂದೂ ಜಾಗರಣ ವೇದಿಕೆ, ಡಿವೈಎಫ್ ಐ ಮುಂತಾದ ಸಂಘಟನೆಗಳು ಕೂಡಾ ಭಾಗಿಯಾಗಿದ್ದವು. ಪ್ರತಿಭಟನಾಕಾರರು ಪಡೀಲ್- ನಂತೂರು ಮಾರ್ಗದಲ್ಲಿ ರಸ್ತೆತಡೆ ನಡೆಸಿದ್ದರಿಂದ ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.