ಮಂಗಳೂರು: ಯುವಕನನ್ನು ಮೃತ್ಯುವಿನಿಂದ ಪಾರು ಮಾಡಿದ ಜೆಕ್ಲೆನ್ ಡಿಸೋಜಾ
ಮಂಗಳೂರು, ಆಗಸ್ಟ್ 02: ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಭರ್ಜರಿಯಾಗಿದೆ. ನದಿಗಳು ಉಕ್ಕಿ ಹರಿಯುತ್ತಿವೆ. ಕಿಂಡಿ ಅಣೆಕಟ್ಟುಗಳು ತುಂಬಿ ತುಳುಕುತ್ತಿವೆ. ಅಣೆಕಟ್ಟುಗಳಲ್ಲಿ ಸಂಗ್ರಹವಾದ ಜಲರಾಶಿಯನ್ನು ಕಣ್ತುಂಬಿಕೊಳ್ಳಲು ಜನರು ಡ್ಯಾಮ್ ಗಳಿಗೆ ಭೇಟಿ ನೀಡುತ್ತಿದ್ದಾರೆ.
ಹೀಗೆ ಕಿರು ಕಿಂಡಿ ಅಣೆಕಟ್ಟು ನೋಡಲು ತೆರಳಿದ್ದ ಯುವಕನೊಬ್ಬನ ಹುಚ್ಚು ಸಾಹಸಕ್ಕೆ ಮೃತ್ಯು ಆಹ್ವಾನ ನೀಡಿತ್ತಾದರೂ ಸ್ಥಳೀಯರ ಸಮಯ ಪ್ರಜ್ಞೆಯಿಂದ ಬಚಾವಾಗಿದ್ದಾನೆ. ಮಂಗಳೂರು ಹೊರವಲಯದ ಮರವೂರು ಎಂಬಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬುಧವಾರ ಸಂಜೆ ಕುಡಿತದ ಅಮಲಿನಲ್ಲಿ ಹುಚ್ಚು ಸಾಹಸಕ್ಕೆ ಕೈಹಾಕಿದ ಯುವಕನ ಕಥೆಯಿದು.
110 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕಿಯ ರಕ್ಷಣೆ
ಬುಧವಾರ ಸಂಜೆ ಇಲ್ಲಿನ ಸ್ಥಳೀಯ ನಿವಾಸಿ ಶರತ್ ಕುಡಿತದ ಅಮಲಿನಲ್ಲಿ ಹತ್ತಿರದಲ್ಲೇ ಇರುವ ಮರವೂರು ಕಿರು ಡ್ಯಾಮ್ ವೀಕ್ಷಿಸಲು ಹೋಗಿದ್ದರು. ಡ್ಯಾಮ್ ನಲ್ಲಿ ಸಂಗ್ರಹವಾದ ಜಲರಾಶಿಯನ್ನು ಕಂಡು ಉತ್ತೇಜಿತನಾದ ಶರತ್ ಹುಚ್ಚು ಸಾಹಸಕ್ಕೆ ಕೈಹಾಕಿ ಡ್ಯಾಮ್ ನಲ್ಲಿ ಈಜಲು ನೀರಿಗೆ ಹಾರಿದ್ದಾನೆ.
ನೋಡನೋಡುತ್ತಿದ್ದಂತೆ ಶರತ್ ಕಿಂಡಿ ಅಣೆ ಕಟ್ಟಿನ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗುವ ಅಪಾಯಕ್ಕೆ ಸಿಲುಕಿದ್ದಾನೆ. ಇದನ್ನು ಕಂಡ ಸ್ಥಳೀಯ ಯುವಕರು ಶರತ್ ನ ರಕ್ಷಣೆಗಾಗಿ ಟ್ಯೂಬ್ ಹಾಗೂ ಹಗ್ಗದ ಮೂಲಕ ಮೇಲೆತ್ತುವ ಪ್ರಯತ್ನಕ್ಕೆ ಮುಂದಾಗಿದ್ದರು. ಆದರೆ ಕುಡಿತದ ಅಮಲಿನಲ್ಲಿದ್ದ ಶರತ್ ನ ರಕ್ಷಣೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಯುವಕ ಜೆಕ್ಲಿನ್ ಡಿಸೋಜಾ ನೀರಿಗೆ ಧುಮುಕಿ ಅಪಾಯದಲ್ಲಿದ್ದ ಶರತ್ ನನ್ನು ರಕ್ಷಿಸಿದ್ದಾನೆ.
ಇದೀಗ ಶರತ್ ರಕ್ಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವಕ ಜೆಕ್ಲೆನ್ ಡಿಸೋಜಾ ರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.