2 ಕಾಲು ಜೋಡಿಸಿ ಮರು ಜೀವ ಕೊಟ್ಟ ಮಂಗಳೂರು ವೈದ್ಯರು!
ಮಂಗಳೂರು, ಡಿಸೆಂಬರ್ 15 : ಎರಡೂ ಕಾಲುಗಳು ತುಂಡಾಗಿದ್ದ ಪುಟ್ಟ ಕಂದಮ್ಮನ ಕಾಲುಗಳನ್ನು ಮರು ಜೋಡಿಸುವಲ್ಲಿ ಮಂಗಳೂರಿನ ವೈದ್ಯರು ಯಶಸ್ವಿಯಾಗಿದ್ದಾರೆ. ವಿಶ್ವದ 14 ನೇ ಅತೀ ವಿರಳ ಘಟನೆ ಇದಾಗಿದೆ.
2017ರ ಏಪ್ರಿಲ್ 29 ರಂದು ಕೇರಳದ ಪಯ್ಯನೂರಿನಲ್ಲಿ ನಡೆದ ರೈಲು ಅಫಘಾತದಲ್ಲಿ ಎರಡೂವರೆ ವರ್ಷದ ಮಗು ಮಹಮ್ಮದ್ ಸಾಲೆಯ ಕಾಲುಗಳೆರಡೂ ತುಂಡಾಗಿ ಬೇರ್ಪಟ್ಟಿತ್ತು. ಘಟನೆಯಲ್ಲಿ ಮಗುವಿನ ತಾಯಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.
ತನ್ನ ಕಿಡ್ನಿಯನ್ನೇ ನೀಡಿ ತಮ್ಮನ ಪ್ರಾಣಕ್ಕೆ ರಕ್ಷೆಯಾದ ಅಕ್ಕ
ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಮಗುವನ್ನು ರೈಲ್ವೆ ಪೊಲೀಸರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಹೆಚ್ಚಿನ ಚಿಕಿತ್ಸೆಗೆ ಪಯ್ಯನೂರಿನ ಆಸ್ಪತ್ರೆಯಿಂದ ಮಂಗಳೂರಿನ ಎಜೆ ಆಸ್ಪತ್ರೆ ಗೆ ಬೇರ್ಪಟ್ಟ ಎರಡೂ ಕಾಲನ್ನು ಥರ್ಮಾಕೋಲ್ ನ ಐಸ್ ಬಾಕ್ಸ್ ನಲ್ಲಿಟ್ಟು ತಂದಿದ್ದರು.
ಎಜೆ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಡೀನ್ ಡಾ.ದಿನೇಶ್ ಕದಂ ನೇತೃತ್ವದಲ್ಲಿ ತಜ್ಞ ವೈದ್ಯರ ತಂಡ ಸತತ 7 ಗಂಟೆಗಳ ಕಾಲ ಮಗುವಿನ ಕಾಲು ಜೋಡಣೆಯ ಮೈಕ್ರೋ ವ್ಯಾಸ್ಕ್ಯುಲರ್ ಪ್ಲಾಸ್ಟಿಕ್ ಸರ್ಜರಿ ಶಸ್ತ್ರ ಚಿಕಿತ್ಸೆ ನಡೆಸಿದ್ದು ಮಗುವಿನ ಕಾಲನ್ನು ಜೋಡಣೆ ಮಾಡಲಾಗಿದೆ.
ಈ 2 ಸಾವು ನಿಮ್ಮ ಕಣ್ಣಲ್ಲಿ ನೀರು ತರಿಸದೆ ಇರದು
ಸಂಪೂರ್ಣವಾಗಿ ಬೇರ್ಪಟ್ಟ ಕಾಲುಗಳು ಮತ್ತು ಮಂಡಿ ಮೇಲ್ಭಾಗದಲ್ಲಿ ಕತ್ತರಿಸಿದ ಕಾಲಿನ ಮರು ಜೋಡಣೆ ಯಶಸ್ವಿಯಾಗಿ ನಡೆಸಿದ್ದು ದೇಶದಲ್ಲಿಯೇ ಪ್ರಥಮವಾಗಿದೆ.
ಈವರೆಗೆ ಜಗತ್ತಿನಾದ್ಯಂತ 13 ಜನರಲ್ಲಿ ಮಾತ್ರ ಈ ಎರಡು ಕಾಲುಗಳ ಬೇರ್ಪಟ್ಟ ಮರು ಜೋಡಣೆಯ ಮೈಕ್ರೋ ವ್ಯಾಸ್ಕ್ಯುಲರ್ ಚಿಕಿತ್ಸೆ ಯಶಸ್ವಿಯಾಗಿದ್ದು, ಇದು 14ನೇ ಪ್ರಕರಣವಾಗಿದೆ.
ಮೊಣಕಾಲಿನ ಮೇಲ್ಭಾಗದಿಂದ ಕತ್ತರಿಸಿದ ಕಾಲನ್ನು ಯಶಸ್ವಿಯಾಗಿ ಮರು ಜೋಡಿಸಿರುವುದು ಈ ವಯಸ್ಸಿನ ಮಗುವಿನಲ್ಲಿ ಪ್ರಥಮವಾಗಿದೆ. ಶಸ್ತ್ರ ಚಿಕಿತ್ಸೆ ನಡೆದು ಏಳು ತಿಂಗಳು ಕಳೆದಿದ್ದು, ಮಗು ಈಗ ನಡೆಯಲು ಶಕ್ತವಾಗಿದೆ.