ಸಿಎಂ ಸಮ್ಮುಖದಲ್ಲೇ ಅಭಯಚಂದ್ರ ಜೈನ್ - ಐವನ್ ಡಿಸೋಜಾ ಜಟಾಪಟಿ
ಮಂಗಳೂರು, ಅಕ್ಟೋಬರ್ 22: ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರಲ್ಲೇ ಶಾಸಕರಿಬ್ಬರು ಜಟಾಪಟಿಗೆ ತಳ್ಳಾಡಿ ಸುದ್ದಿಯಾಗಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಸಿಎಂಗೆ ಸ್ವಾಗತ ಕೋರಲು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಕೂಡ ಬಂದಿದ್ದರು. ಆದರೆ ಮುಖ್ಯಮಂತ್ರಿಗಳ ಸಮೀಪ ಬರದಂತೆ ಐವನ್ ಡಿಸೋಜಾರನ್ನು ಅಭಯಚಂದ್ರ ಜೈನ್ ಕೈಯಲ್ಲಿ ದೂಡಿ ತಡೆದಿದ್ದಾರೆ. ಈ ಎಲ್ಲಾ ದೃಶ್ಯಗಳು ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು ವಿವಾದಕ್ಕೆ ಕಾರಣವಾಗಿದೆ.
ವಿಮಾನ ನಿಲ್ದಾಣದಲ್ಲಿ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಮಂಗಳೂರು ಮೇಯರ್ ಕವಿತಾ ಸನಿಲ್ ಸೇರಿದಂತೆ ಗಣ್ಯರು ಸ್ವಾಗತಿಸಿದರು. ನಂತರ ಬಂಟ್ವಾಳಕ್ಕೆ ತೆರಳಿದರು.
ಮುರಿದು ಬಿದ್ದ ಮಿನಿ ವಿಧಾನಸೌಧದ ಬಾಗಿಲು
ಬಂಟ್ವಾಳದಲ್ಲಿ 252 ಕೋಟಿ ರೂ. ವೆಚ್ಚ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.
ಹೊಸ ಮಿನಿ ವಿಧಾನಸೌಧದವನ್ನು ಮುಖ್ಯಮಂತ್ರಿಗಳು ಬಂಟ್ವಾಳದಲ್ಲಿ ಉದ್ಘಾಟನೆ ಮಾಡಿದರು. ಈ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರ ತಳ್ಳಾಟದಿಂದ ಹೊಸ ಕಟ್ಟಡದ ಬಾಗಿಲು ಮುರಿದು ಬಿತ್ತು. ಎಸ್ಪಿ ಸುಧೀರ್ ಕುಮಾರ್ ರೆಡ್ಡಿಯವರನ್ನೂ ಕಾರ್ಯಕರ್ತರು ತಳ್ಳಾಡಿದ್ದರಿಂದ ಪೊಲೀಸರು ಕಾರ್ಯಕರ್ತರಿಗೆ ಲಾಠಿ ರುಚಿ ತೋರಿಸಿದರು.
ಸಂಜೆ ಮುಖ್ಯಮಂತ್ರಿ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ.
ಟಿಪ್ಪು ಜಯಂತಿ ಮಾಡಿಯೇ ಮಾಡ್ತೀವಿ
ಟಿಪ್ಪು ಜಯಂತಿ ವಿಚಾರದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, "ಟಿಪ್ಪು ಜಯಂತಿ ಮಾಡಿಯೇ ಮಾಡುತ್ತೇವೆ. ಟಿಪ್ಪು ಜಯಂತಿ ರಾಜ್ಯ ಸರಕಾರದ ಕಾರ್ಯಕ್ರಮ. ಬಿಜೆಪಿಯವರು ಸುಮ್ಮನೆ ರಾಜಕಾರಣ ಮಾಡುತ್ತಿದ್ದಾರೆ," ಎಂದು ವಾಗ್ದಾಳಿ ನಡೆಸಿದರು.
ಇನ್ನು, "ಟಿಪ್ಪು ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರದ ಪ್ರಕಾರ ಅನಂತ್ ಕುಮಾರ್ ಹೆಗಡೆ ಹೆಸರು ಹಾಕಿಯೇ ಹಾಕುತ್ತೇವೆ. ಕಾರ್ಯಕ್ರಮಕ್ಕೆ ಬರುವುದು ಬಿಡುವುದು ಅವರಿಗೆ ಬಿಟ್ಟದ್ದು," ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಕಲ್ಲಿದ್ದಲು ಹಗರಣದ ಆರೋಪ ಸುಳ್ಳು
ಸಚಿವ ಡಿ.ಕೆ ಶಿವಕುಮಾರ್ ಮೇಲಿನ ಕಲ್ಲಿದ್ದಲು ಹಗರಣ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಈ ಆರೋಪ ದುರುದ್ದೇಶ ಪೂರಿತವಾಗಿದೆ. ಬಿಜೆಪಿಯವರು ಆಧಾರ ರಹಿತ ಆರೋಪ ಮಾಡಿದ್ದಾರೆ. ಆರೋಪದ ಬಗ್ಗೆ ಡಿ.ಕೆ.ಶಿವಕುಮಾರ್ ಈಗಾಗಲೆ ಸ್ಪಷ್ಟನೆ ಕೊಟ್ಟಿದ್ದಾರೆ. ಇವೆಲ್ಲಾ ಚುನಾವಣೆ ದೃಷ್ಟಿಯಿಂದ ಮಾಡಿದ ಆರೋಪಗಳು," ಎಂದು ಹೇಳಿದ್ದಾರೆ.