25 ವರ್ಷದ ನಂತರ ಆತನನ್ನು ಕಂಡದ್ದು ಅದೇ ಮೊದಲು ಹಾಗೂ ಕೊನೆ
ಮಂಗಳೂರು, ಸೆ.21: ವಿಟ್ಲ ಸಮೀಪದ ಬುಳೇರಿಕಟ್ಟೆಯಲ್ಲಿ 25 ವರ್ಷದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಈಗ 'ಫೇಸ್ಬುಕ್'ನಿಂದಾಗಿ ಪತ್ತೆಯಾಗಿದ್ದಾರೆ. ವಿಪರ್ಯಾಸ ಅಂದರೆ ಕುಟುಂಬಸ್ಥರು ಆ ವ್ಯಕ್ತಿಯನ್ನು ಮೊದಲು ಕಂಡದ್ದು ಅವರ ಪ್ರಜ್ಞಾಹೀನ ಸ್ಥಿತಿಯಲ್ಲಿ. ಕ್ಷಣಾರ್ಧದಲ್ಲಿ ಆತ ತೀರಿಯೇಹೋದರು!
'ಬೆಂಗಳೂರು ಸಿಟಿ ಪೊಲೀಸ್' ಫೇಸ್ಬುಕ್ ಪುಟದಲ್ಲಿ ಸೆ.16ರಂದು ಪಾನ್ಕಾರ್ಡ್ ಇಮೇಜ್ನೊಂದಿಗೆ ಒಂದು ಪೋಸ್ಟ್ ಹಾಕಲಾಗಿತ್ತು. ಈ ಚಿತ್ರದಲ್ಲಿ ಕಾಣುವ ಜಯರಾಮ ಭಟ್ ಎಂಬುವವರು ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಬೆಂಗಳೂರು ಹನುಮಂತ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದಾರೆ, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ವಾರಸುದಾರರು ಇದ್ದಲ್ಲಿ ಸಂಪರ್ಕಿಸಬಹುದು ಎಂದು ಮನವಿ ಮಾಡಲಾಗಿತ್ತು.[ಅಮ್ಮನ ಕೊಲೆಗೆ ಸಾಕ್ಷ್ಯವಾದ ಆ ಮಗುವಿನ ವಯಸ್ಸು 5 ವರ್ಷ]
ಈ ಸಂದೇಶ ವಾಟ್ಸಾಪ್ನಲ್ಲೂ ಹರಿದಾಡಿತು, ಬೆಂಗಳೂರಿನ ಸಾಫ್ಟ್ವೇರ್ ಉದ್ಯೋಗಿ ಗಣೇಶ್ ಕಂಬಾರ್ ಅವರ ಕಣ್ಣಿಗೂ ಈ ಚಿತ್ರ ಬಿತ್ತು. ಅಷ್ಟಕ್ಕೂ ಗಣೇಶ್ ಕಂಬಾರ್ ವಿಟ್ಲ ಸಮೀಪದ ಬಲ್ನಾಡು ಗ್ರಾಮದ ಬುಳೇರಿಕಟ್ಟೆ ನಿವಾಸಿ. ಗಣೇಶ್ ಕಂಬಾರ್ 10ನೇ ತರಗತಿ ಮುಗಿಸಿ ಪಿಯುಸಿ ಸೇರುವುದರಲ್ಲಿದ್ದರು. ಆಗ ಮೊದಲ ಸಲಕ್ಕೆ ಪ್ಯಾಂಟ್ ಹಾಕಬೇಕಿತ್ತು. ಗಣೇಶ್ಗೆ ಅದೇ ಮೊದಲ ಬಾರಿ ಪ್ಯಾಂಟ್ ಹೊಲಿದುಕೊಟ್ಟಿದ್ದವರು ಟೈಲರ್ ಜಯರಾಮ ಭಟ್.
ಒಂದು ಕ್ಷಣ ಅನುಮಾನಗೊಂಡ ಗಣೇಶ್, ತಕ್ಷಣ ತನ್ನ ಸ್ನೇಹಿತನ ಜೊತೆ ಹನುಮಂತ ನಗರ ಪೊಲೀಸರನ್ನು ಸಂಪರ್ಕಿಸಿದರು. ಬಳಿಕ ಆಸ್ಪತ್ರೆಗೆ ಧಾವಿಸಿದಾಗ ಅಲ್ಲಿ ಪ್ರಜ್ಞಾಹೀನರಾಗಿ ಮಲಗಿದ್ದವರು ಹುಟ್ಟೂರಿನ ಟೈಲರ್ ವೈ.ಜಯರಾಮ ಭಟ್ ಎಂಬುದನ್ನು ಖಚಿತಪಡಿಸಿಕೊಂಡರು.[ಬೆಳಗೆರೆ ಅವರ 'ಸಮಾಧಾನ'ದ ಒಂದು ಪತ್ರ: ದುರುಳ ತಂದೆಗೆ ಮರುಳಾದ ಮಕ್ಕಳು]
ಜಯರಾಮ ಭಟ್ ಆಸ್ಪತ್ರೆಯಲ್ಲಿರುವುದನ್ನು ಕಿರಿಯ ಸಹೋದರ ಚಂದ್ರಶೇಖರ ಭಟ್ರಿಗೆ ಗಣೇಶ್ ಕಂಬಾರ್ ಫೋನ್ ಮೂಲಕ ತಿಳಿಸಿದರು. ಕಳೆದ ಶನಿವಾರ ಬೆಂಗಳೂರಿಗೆ ತೆರಳಿದ ಚಂದ್ರಶೇಖರ ಭಟ್ 28 ವರ್ಷಗಳ ಹಿಂದೆ ಕಾಣೆಯಾಗಿದ್ದ ತನ್ನ ಸಹೋದರ ಜಯರಾಮ ಭಟ್ರನ್ನು ಆಸ್ಪತ್ರೆಯಲ್ಲಿ ಕಂಡರೂ ಮಾತನಾಡಲು ಸಾಧ್ಯವಾಗಲಿಲ್ಲ.
ಯಾಕೆಂದರೆ, ಜಯರಾಮ ಭಟ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕುಟುಂಬದ ಸದಸ್ಯ ಕಾಣಲು ಸಿಕ್ಕರೂ ಆ ಖುಷಿ ಹೆಚ್ಚು ಹೊತ್ತು ಇರಲಿಲ್ಲ. ಅಂದರೆ, ಜಯರಾಮ ಭಟ್ ಇಹಲೋಕ ತ್ಯಜಿಸಿದ್ದರು. ಒಟ್ಟಿನಲ್ಲಿ ಯುವಕನಾಗಿದ್ದಾಗ ಮನೆಬಿಟ್ಟು ಹೋಗಿದ್ದ ಜಯರಾಮ ಭಟ್ 25 ವರ್ಷಗಳ ನಂತರ ಮನೆಯವರಿಗೆ ಕಾಣಲು ಸಿಕ್ಕರೂ ಆ ಸಂಭ್ರಮ ವಿಷಾದದಲ್ಲಿ ಅಂತ್ಯ ಕಂಡಿತು.[ನಾಯಿಗಾಗಿ ಮದುವೆ ಮುರಿದುಕೊಂಡ ಬೆಂಗಳೂರು ಹುಡುಗಿ]
ಜಯರಾಮ ಭಟ್ ಕಿಸೆಯಲ್ಲಿ ಪಾನ್ಕಾರ್ಡ್ ಬಿಟ್ಟು ಬೇರೇನೂ ಇರಲಿಲ್ಲ. ಅದನ್ನು 'ಬೆಂಗಳೂರು ಸಿಟಿ ಪೊಲೀಸ್'ನ 'ಫೇಸ್ಬುಕ್' ಪುಟದಲ್ಲಿ ಹಾಕಿದ ಕಾರಣ 25 ವರ್ಷಗಳ ನಂತರವಾದರೂ ಆ ಕುಟುಂಬಕ್ಕೆ ಜಯರಾಮಭಟ್ ನನ್ನು ನೋಡುವ ಅವಕಾಶ ಸಿಕ್ಕಿತು. ಹನುಮಂತನಗರ ಪೊಲೀಸ್ ಇನ್ಸ್ಪೆಕ್ಟರ್ ದಿಲೀಪ್ ಕುಮಾರ್ ಹಾಗೂ ತಂಡಕ್ಕೆ ಸಲಾಮ್ ಹೇಳೋಣ.