ಎತ್ತಿನಹೊಳೆ: ಪಶ್ಚಿಮ ಘಟ್ಟದ ರಕ್ಷಣೆಗಾಗಿ ಯುನೆಸ್ಕೋಗೆ ಆಗ್ರಹ
ಮಂಗಳೂರು, ಸೆಪ್ಟೆಂಬರ್ 3: ಪಶ್ಚಿಮ ಘಟ್ಟವು ಜಗತ್ತಿನ ಅಮೂಲ್ಯ ಸಂಪತ್ತು ಎಂಬ ಕಾರಣದಿಂದಾಗಿ ಇದರ ಕೆಲ ಭಾಗಗಳನ್ನು ಯುನೆಸ್ಕೋ ಸಂರಕ್ಷಿತ ಪ್ರದೇಶ ಎಂದು ಘೋಷಿಸಿದೆ. ಆದರೆ ಎತ್ತಿನಹೊಳೆ ಯೋಜನೆಯಿಂದ ಈ ಸಂರಕ್ಷಿತ ಪ್ರದೇಶದ ಸುರಕ್ಷತೆಗೆ ಹಾನಿಯಾಗುವುದರಿಂದ ಪಶ್ಚಿಮ ಘಟ್ಟದ ಸಮಗ್ರ ರಕ್ಷಣೆಗಾಗಿ ಜಗತ್ತಿನ 48 ರಾಷ್ಟ್ರಗಳು ಯುನೆಸ್ಕೋವನ್ನು ಆಗ್ರಹಿಸಲಿವೆ.
ಗಾಳಿಪಟ ಉತ್ಸವಕ್ಕೆ ಫ್ರಾನ್ಸ್ನ ಡೀಪಿ ನಗರಕ್ಕೆ ತೆರಳಲಿರುವ ಕಲಾವಿದ ದಿನೇಶ್ ಹೊಳ್ಳ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದರು. ಪುಷ್ಪಗಿರಿ ಯುನೆಸ್ಕೋದ ಸಂರಕ್ಷಿತ ಪ್ರದೇಶವಾಗಿ ಆಯ್ಕೆಯಾಗಿದ್ದು , ಅದರ ಸಮೀಪದ ಬೆಟ್ಟಕುಮರಿ, ಕೆಂಚನ ಕುಮೇರಿ, ಕಾಗಿನೆರೆ ಅರಣ್ಯ ಪ್ರದೇಶಕ್ಕೆ ಎತ್ತಿನಹೊಳೆ ಯೋಜನೆಯಿಂದ ಸಮಸ್ಯೆ ಆಗಲಿದೆ ಎಂದು ಹೇಳಿದರು.[ಎತ್ತಿನಹೊಳೆ ಯೋಜನೆಗೆ ವೇಗ ನೀಡಲಿದೆ ಸರ್ಕಾರ]
ಫ್ರಾನ್ಸ್ನ ಡೀಪಿ ನಗರದಲ್ಲಿ ನಡೆಯುವ ಉತ್ಸವಕ್ಕೆ 48 ದೇಶಗಳಿಂದ ಪ್ರತಿನಿಧಿಗಳು ಬರಲಿದ್ದು, ಎಲ್ಲರಿಗೂ ಪಶ್ಚಿಮಘಟ್ಟ ಉಳಿವಿನ ಬಗ್ಗೆ ಮಾಹಿತಿ ನೀಡಲಾಗುವುದು. ಈ ಕುರಿತ ವಿಡಿಯೋ ಪ್ರದರ್ಶನ ನಡೆಯಲಿದೆ.
ಪಶ್ಚಿಮ ಘಟ್ಟ ರಕ್ಷಣೆಗೆ ಬೆಂಬಲ ನೀಡುವಂತೆ ಉತ್ಸವಕ್ಕೆ ಬರುವ ಇತರ ದೇಶಗಳ ಪ್ರತಿನಿಧಿಗಳು ಮನವಿ ಸಿದ್ಧಪಡಿಸಿ ಸಹಿ ಹಾಕಲಿದ್ದಾರೆ. ಬಳಿಕ ಆ ಮನವಿಯನ್ನು ಡೀಪಿ ನಗರದ ಮೇಯರ್ ಮೂಲಕ ಯುನೆಸ್ಕೋಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.[ಎತ್ತಿನಹೊಳೆ: ಚೆನ್ನೈ ಹಸಿರುಪೀಠಕ್ಕೆ ವರ್ಗಾವಣೆಗೆ ನಿರಾಕರಣೆ]
ಯುನೆಸ್ಕೋದ ಸಹಾಯಕ ಪ್ರಧಾನ ನಿರ್ದೇಶಕರಿಗೆ ಬರೆದ ಪತ್ರದಲ್ಲಿ, 'ಪಶ್ಚಿಮ ಘಟ್ಟವೂ ಜಗತ್ತಿನ 34 ಜೀವ ವೈವಿಧ್ಯ ತಾಣಗಳಲ್ಲಿ ಒಂದಾಗಿದೆ. ಇಲ್ಲಿರುವ 4000 ಹೂವಿನ ತಳಿಗಳನ್ನು ಗುರುತಿಸಲಾಗಿದ್ದು, ಆ ಪೈಕಿ ಶೇ 38 ರಷ್ಟು ತಳಿಗಳು ಪಶ್ಚಿಮ ಘಟ್ಟದಲ್ಲಿ ಮಾತ್ರ ಬೆಳೆಯಬಲ್ಲವು. 330 ಚಿಟ್ಟೆಗಳಲ್ಲಿ ಶೇ 11ರಷ್ಟು ಚಿಟ್ಟೆಗಳು ಈ ಪ್ರದೇಶಕ್ಕೆ ಮಾತ್ರ ಸೀಮಿತ.
'ಸಸ್ತನಿಗಳು, ಮೀನು, ಕಪ್ಪೆ ಮುಂತಾದ ಜೀವಿಗಳು ಪಶ್ಚಿಮ ಘಟ್ಟದಲ್ಲಿ ಮಾತ್ರ ಜೀವಿಸುವ ಪ್ರಭೇದಗಳು ಇಲ್ಲಿವೆ. ಆದ್ದರಿಂದ ಈ ಪ್ರದೇಶದಲ್ಲಿ ಯರ್ರಾಬಿರ್ರಿ ಕಾಮಗಾರಿ ನಡೆಸಿದರೆ ಈ ಎಲ್ಲ ಜೀವಿಗಳು ಅಳಿಯುತ್ತವೆ. ಈ ಸೂಕ್ಷ್ಮ ಜೈವಿಕ ತಾಣ ಅಳಿದು ಹೋದರೆ ಮನುಷ್ಯರಿಂದ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಆದರೆ ಇದೀಗ ಕರ್ನಾಟಕ ಸರ್ಕಾರ ಎತ್ತಿನಹೊಳೆ ಕಾಮಗಾರಿಯನ್ನು ಪಶ್ಚಿಮ ಘಟ್ಟದ ಸೂಕ್ಷ್ಮ ಜೀವ ವೈವಿಧ್ಯ ಪ್ರದೇಶದೊಳಗೆ ನಡೆಸುತ್ತಿದೆ' ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.[ಎತ್ತಿನಹೊಳೆ ಯೋಜನೆ ಸಮಾಲೋಚನೆ : ಪೇಜಾವರ ಶ್ರೀ]
ಸಂರಕ್ಷಿತ ಪುಷ್ಪಗಿರಿ ಅರಣ್ಯ ಪ್ರದೇಶದಿಂದ ಕೇವಲ 10 ಮೀಟರ್ ವೈಮಾನಿಕ ಅಂತರದಲ್ಲಿ ಎತ್ತಿನಹೊಳೆ ಕಾಮಗಾರಿ ನಡೆಯುತ್ತಿದೆ. ಮಧುಮಲೈ, ಮುತ್ತೋಡಿ ಆನೆ ಕಾರಿಡಾರ್ ಗೆ ಅತ್ಯಂತ ಸಮೀಪದಲ್ಲಿದೆ. ಅದರಿಂದ ಪಶ್ಚಿಮ ಘಟ್ಟದ ಸಮಗ್ರ ಸಂರಕ್ಷಣೆಗೆ ಕ್ರಮ ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಮನವಿ ವಿವರಿಸಿದೆ.
ಪಶ್ಚಿಮ ಘಟ್ಟವನ್ನು ವಿಶ್ವ ಪಾರಂಪರಿಕ ತಾಣಕ್ಕೆ ಸೇರಿಸುವಂತೆ 2012ರಲ್ಲಿಯೇ ಯುನೆಸ್ಕೋ ಸಲಹೆ ಮಾಡಿತ್ತು. ಒಂದು ವೇಳೆ ಸರ್ಕಾರ ಆ ದಿನಗಳಲ್ಲಿ ಕ್ರಮ ತೆಗೆದುಕೊಂಡಿದ್ದಲ್ಲಿ, ಎತ್ತಿನಹೊಳೆ ಕಾಮಗಾರಿ ನಡೆಯುತ್ತಿರಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.