50 ಕೋಟಿ ಲಂಚ ಪಡೆದ ಕೈ ಸಚಿವರ ಹೆಸರು ತಿಳಿಸಿ: ಪೂಜಾರಿ
ಎತ್ತಿನಹೊಳೆ ಯೋಜನೆಯಲ್ಲಿ ಕಾಂಗ್ರೆಸ್ ಸಚಿವರ ವಿರುದ್ಧ ಲಂಚದ ಆರೋಪ ಕೇಳಿಬರುತ್ತಿದೆ. ಅದರ ಬಗ್ಗೆ ಪೂರ್ತಿ ವಿವರ ನೀಡಿ ಎಂದು ಮಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದಾರೆ
ಮಂಗಳೂರು, ನವೆಂಬರ್ 29: ನಗರದಲ್ಲಿ ಮಂಗಳವಾರ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿ, ರಾಜ್ಯದ ಮೂವರು ಮಂತ್ರಿಗಳ ಮೇಲೆ ಎತ್ತಿನಹೊಳೆ ಯೋಜನೆಯಲ್ಲಿ 50 ಕೋಟಿ ರುಪಾಯಿ ಲಂಚ ಸ್ವೀಕರಿಸಿದ ಆರೋಪ ಕೇಳಿಬರುತ್ತಿದೆ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಮೂವರು ಸಚಿವರು 50 ಕೋಟಿ ರುಪಾಯಿ ಲಂಚ ತೆಗೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದರೂ ಸಿದ್ದರಾಮಯ್ಯ ಅವರು ಗುಪ್ತಚರ ಇಲಾಖೆಯಿಂದ ಯಾವುದೇ ಮಾಹಿತಿ ಸಂಗ್ರಹಿಸಿಲ್ಲ. ಈ ಲಂಚಕೋರರ ಹೆಸರನ್ನು ಬಹಿರಂಗವಾಗಿ ತಿಳಿಸಬೇಕು. ಒಂದು ವೇಳೆ ಮುಖ್ಯಮಂತ್ರಿಗಳು ಹೆಸರು ತಿಳಿಸಲು ವಿಫಲರಾದಲ್ಲಿ ಅವರೂ ಹಣದಲಿ ಪಾಲುದಾರರು ಎಂಬ ಶಂಕೆ ಮೂಡುತ್ತದೆ ಎಂದರು.['ದಿನೇಶ್ ಅಮಿನ್ ಮಟ್ಟುವಿನಿಂದಲೇ ಸಿಎಂ ಸಿದ್ದರಾಮಯ್ಯ ಸಮಾಧಿ']
ಎತ್ತಿನಹೊಳೆ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿ ಸ್ಥಾನದಲ್ಲಿರುವ ಸಚಿವರನ್ನು ತಕ್ಷಣವೇ ವಜಾಗೊಳಿಸಬೇಕು. ಅಷ್ಟೇ ಅಲ್ಲ, ಮುಖ್ಯಮಂತ್ರಿಗಳೇನಾದರೂ ನೈತಿಕತೆ ಮತ್ತು ಸ್ವಲ್ಪ ಗೌರವ ಹೊಂದಿದ್ದರೆ ತಕ್ಷಣವೇ ಆರೋಪಿ ಸಚಿವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸೋಮವಾರ ನಡೆದ ಆಕ್ರೋಶ ದಿನಾಚರಣೆಗೆ ನಗರದಾದ್ಯಂತ ನೀರಸ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, 'ಜನರು ಮುಖ್ಯಮಂತ್ರಿ ಅವರ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಈ ಕಾರಣದಿಂದಲೇ ನಿನ್ನೆ ಪ್ರತಿಭಟನೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಿದ್ದರಾಮಯ್ಯ ಅವರು ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡಲಿಲ್ಲ ಎಂದು ಆರೋಪಿಸಿದರು.[ಸಿದ್ದರಾಮಯ್ಯ ರಾಜೀನಾಮೆ ನೀಡ್ಲಿ, ಪರಂ ಸಿಎಂ ಆಗಲಿ: ಪೂಜಾರಿ]
ಸಚಿವ ತನ್ವೀರ್ ಸೇಠ್ ಅಶ್ಲೀಲ ವೀಡಿಯೊ ವೀಕ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವರ ಪದಚ್ಯುತಿಗೊಳಿಸಲು ಧೈರ್ಯವಿಲ್ಲ ಎಂದು ಟೀಕಿಸಿದರು.