ಸುಳ್ಯ : ಕಾರು ಅಡ್ಡಗಟ್ಟಿ 5 ಲಕ್ಷ ದೋಚಿದ ಬಂದೂಕುಧಾರಿಗಳು
ಸುಳ್ಯ, ಜನವರಿ. 23 : ಅಡಿಕೆ ವ್ಯಾಪಾರಿಯ ಕಾರನ್ನು ದುಷ್ಕರ್ಮಿಗಳು ಅಡ್ಡಿಗಟ್ಟಿ ಪಿಸ್ತೂಲ್, ತಲವಾರು ತೋರಿಸಿ ಕಾರಲ್ಲಿದ್ದ 5 ಲಕ್ಷ ರೂ ನಗದು ಹಾಗೂ ಮೊಬೈಲ್ಗಳನ್ನು ದೋಚಿ ಪರಾರಿಯಾದ ಘಟನೆ ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಗುತ್ತಿಗಾರಿನ ಅಡಿಕೆ ವ್ಯಾಪಾರಿ ಅಬ್ದುಲ್ ಖಾದರ್ ಎಂಬವರು ಸೋಮವಾರ ಬೆಳಿಗ್ಗೆ ಸುಳ್ಯ ತಾಲೂಕಿನ ಬೆಳ್ಳಾರೆಯಿಂದ ಗುತ್ತಿಗಾರಿಗೆ ಬರುತ್ತಿದ್ದಾಗ ಐವರ್ನಾಡಿನಲ್ಲಿ ಅವರ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಪಿಸ್ತೂಲ್, ತಲವಾರು ತೋರಿಸಿ ಕಾರಲ್ಲಿದ್ದ 5 ಲಕ್ಷ ರೂ ನಗದು ಹಾಗೂ ಮೊಬೈಲ್ಗಳನ್ನು ದೋಚಿ ಪರಾರಿಯಾಗಿದ್ದಾರೆ.
ಅಬ್ದುಲ್ ಖಾದರ್ ರವರು ತನ್ನ ಮಿತ್ರ ಶಫೀಕ್ ಮತ್ತು ಕೆಲಸದ ಇಬ್ಬರೊಂದಿಗೆ ಬೆಳ್ಳಾರೆಯಿಂದ ಗುತ್ತಿಗಾರಿಗೆ ತನ್ನ ಕಾರಲ್ಲಿ ಹೊರಟಿದ್ದರು. ಕಾರು ಐವರ್ನಾಡು ತಲುಪುವ ವೇಳೆ ಹಿಂದಿನಿಂದ ಹಿಂಬಾಲಿಸಿಕೊಂಡು ಬಂದ ಕಾರೊಂದು ಇವರ ಕಾರಿನ ಮುಂದೆ ಹೋಗಿ ಅಡ್ಡ ನಿಂತಿತ್ತು.
ಕಾರಿನಿಂದ ಇಳಿದ ನಾಲ್ವರು ಪಿಸ್ತೂಲ್ ಮತ್ತು ತಲವಾರು ತೋರಿಸಿ ಕಾರಲ್ಲಿದ್ದ ನಗದು, ಚೆಕ್ ಬುಕ್, ನಾಲ್ವರ ಮೊಬೈಲ್ಗಳನ್ನು ಕಿತ್ತುಕೊಂಡು ಹಿಂತುರುಗಿ ಬೆಳ್ಳಾರೆ ಕಡೆಗೆ ಹೋದರೆನ್ನಲಾಗಿದೆ. ವಿಷಯ ತಿಳಿದ ಸುಳ್ಯ ಪೋಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.