ಮಂಗಳೂರಿನಲ್ಲಿ ಹಿಂದೂ ಮುಖಂಡನ ಮೇಲೆ ದಾಳಿ ಪ್ರಕರಣ: ಮೂವರು ಆರೋಪಿಗಳ ಬಂಧನ
ಮಂಗಳೂರು, ಅಕ್ಟೋಬರ್. 04:ಮಂಗಳೂರು ಹೊರವಲಯದಲ್ಲಿ ಹಿಂದೂ ಸಂಘಟನೆಯ ಮುಖಂಡನ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮಂದಿ ಆರೋಪಿಗಳನ್ನು ಮಂಗಳೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಕೈಕಂಬದ ಸೂರಲ್ಪಾಡಿ ಎಂಬಲ್ಲಿ ಸೆಪ್ಟೆಂಬರ್ 24 ರಂದು ರಾತ್ರಿ 8 ಗಂಟೆಗೆ ವಿಶ್ವಹಿಂದೂ ಪರಿಷತ್ ಮುಖಂಡ ಪೊಳಲಿ ನಿವಾಸಿ ಹರೀಶ್ ಶೆಟ್ಟಿ (38) ಎಂಬುವವರ ಮೇಲೆ ದುಷ್ಕರ್ಮಿಗಳ ತಂಡ ದಾಳಿ ನಡೆಸಿ ಪರಾರಿಯಾಗಿತ್ತು.
ಮೂಡಬಿದ್ರೆಯಲ್ಲಿ ದುಷ್ಕರ್ಮಿಗಳು ನಡೆಸಿದ ದಾಳಿ ಸಿಸಿಟಿವಿಯಲ್ಲಿ ಸೆರೆ
ಘಟನೆಯಲ್ಲಿ ಹರೀಶ್ ಶೆಟ್ಟಿ ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹರೀಶ್ ಶೆಟ್ಟಿ ಕೈಕಂಬದಲ್ಲಿ ಖಾಸಗಿ ಬಸ್ ಟೈಂ ಕೀಪರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ರಾತ್ರಿ 8 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಹರೀಶ ರಸ್ತೆ ಬದಿ ನಿಂತಿದ್ದ ಸಂದರ್ಭದಲ್ಲಿ 2 ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರ ಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದರು.
ಈ ಪ್ರಕರಣದ ಕುರಿತು ತನಿಖೆ ನಡೆಸಿದ ಪಣಂಬೂರು ಠಾಣೆಯ ರೌಡಿ ನಿಗ್ರಹ ದಳದ ಪೊಲೀಸರು ಮೂರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಬಂಟ್ವಾಳ ದ ಕಲಾಯಿ ನಿವಾಸಿ ಮಹಮ್ಮದ್ ಶರೀಫ್ ಯಾನೆ ಕಲಾಯಿ ಶರೀಫ್(24), ಬಜಪೆ ನಿವಾಸಿಗಳಾದ ಮಹಮ್ಮದ್ ಶಿಫಾಜ್( 21) ಹಾಗೂ ಮಹಮ್ಮದ್ ಆರೀಫ್ ಎಂದು ಗುರುತಿಸಲಾಗಿದೆ.
ಬೆಳ್ಳಂಬೆಳಗ್ಗೆ ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣ ಆರೋಪಿ ಮೇಲೆ ದಾಳಿ
ಸೆಪ್ಟೆಂಬರ್ 24 ರ ಮುಂಜಾನೆ ಮೂಡಬಿದರೆಯ ಗಂಟಲ್ ಕಟ್ಟೆ ಎಂಬಲ್ಲಿ ಪ್ರಶಾಂತ ಪೂಜಾರಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಮ್ತಿಯಾಜ್ ಎಂಬಾತನ ಮೇಲೆ ದುಷ್ಕರ್ಮಿಗಳ ತಂಡ ದಾಳಿ ನಡೆಸಿದ್ದರು. ಘಟನೆಯಲ್ಲಿ ಇಮ್ತಿಯಾಜ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಮಂಗಳೂರಲ್ಲಿ ಮತ್ತೆ ಹರಿದ ನೆತ್ತರು:ಹಿಂದೂ ಸಂಘಟನೆ ಮುಖಂಡನ ಮೇಲೆ ದಾಳಿ
ಇಮ್ತಿಯಾಜ್ ಮೇಲಿನ ಹಲ್ಲೆಗೆ ಪ್ರತೀಕಾರವಾಗಿಯೇ ಹರೀಶ್ ಶೆಟ್ಟಿ ಅವರ ಮೇಲೆ ತಲವಾರು ದಾಳಿ ನಡೆಸಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಇನ್ನೊಂದು ಗಮನಿಸಬೇಕಾದ ಅಂಶ ಎಂದರೆ ಬಂಧಿತ ಆರೋಪಿಗಳ ಪೈಕಿ ಕಲಾಯಿ ಶರೀಫ 2017 ರ ಜೂನ್ 21 ರಂದು ಬಂಟ್ವಾಳದಲ್ಲಿ ಹತ್ಯೆಗೀಡಾಗಿದ್ದ ಆಶ್ರಫ್ ಕಲಾಯಿ ಅವರ ಸಹೋದರ.