26ಕ್ಕೆ ಅಕ್ರಮ ಮರಳುಗಾರಿಕೆ ವಿರುದ್ಧ ಪ್ರತಿಭಟನೆ
ಮಂಗಳೂರು, ಸೆಪ್ಟೆಂಬರ್ 25: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಮಿತಿ ಮೀರುತ್ತಿದೆ. ಟ್ರಕ್ ಮಾಲೀಕರು, ಕೂಲಿಯಾಳುಗಳು, ಮನೆ ನಿರ್ಮಿಸಲು ಉದ್ದೇಶಿಸಿರುವ ಬಡವರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದು ದ.ಕ ಜಿಲ್ಲಾ ಕಟ್ಟಡ ಸಾಮಾಗ್ರಿ ಸರಬರಾಜುದಾರರ ಮತ್ತು ಸಾಗಣೆ ವಾಹನ ಮಾಲೀಕರ - ಚಾಲಕರ ಸಂಘದ ಗೌರವಾಧ್ಯಕ್ಷ ಕಿಶೋರ್ ಕುಮಾರ್ ಪುತ್ತೂರು ಹೇಳಿದರು.
ಹಿಂದಿನ ಜಿಲ್ಲಾಧಿಕಾರಿಯವರು ಆ.15ರಿಂದ ಮರಳುಗಾರಿಕೆಗೆ ಪರವಾನಗಿ ನೀಡುವುದಾಗಿ ಭರವಸೆ ನೀಡಿದ್ದರು. ಗಣಿ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲಾದ್ಯಂತ ಸೃಷ್ಟಿಯಾಗಿರುವ ಮರಳು ಅಭಾವದ ವಿರುದ್ದ ಮತ್ತು ಸಾಮಾಜಿಕ ನ್ಯಾಯದ ಆಧಾರದಲ್ಲಿ ಮರಳುಗಾರಿಕೆಗೆ ಅನುಮತಿ ನೀಡುವಂತೆ ಆಗ್ರಹಿಸಿ ಇದೇ 26 ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.[ಮನೆ ಕಟ್ಟಲು ಬಡವರ ಪರದಾಟ: ಎಗ್ಗಿಲ್ಲದೆ ಅಕ್ರಮ ಮರಳು ಮಾರಾಟ]
ಟ್ರಕ್ ಮಾಲೀಕರು, ಸಾರ್ವಜನಿಕರು, ಸಿವಿಲ್ ಗುತ್ತಿಗೆದಾರರು ಈ ಪ್ರತಿಭಟನೆಯಲ್ಲಿ ಭಾಗವಹಿಸುವರು ಎಂದು ತಿಳಿಸಿದ ಅವರು, ಅಧಿಕೃತವಾಗಿ ಧಕ್ಕೆ ಹೊಂದಿರುವವರಿಗೆ ಮರಳುಗಾರಿಕೆ ಪರವಾನಗಿ ಕೊಡದೆ, ಒತ್ತಡಕ್ಕೆ ಮಣಿದು 427 ಮರಳು ಸಾಗಣೆ ಪರವಾನಗಿ ಕೊಡಲಾಗಿದೆ. ಇದರಿಂದ ಕಾನೂನು ಬದ್ದವಾಗಿ ಮರಳುಗಾರಿಕೆ ಮಾಡುವವರಿಗೆ ಅನ್ಯಾಯವಾಗಿದೆ ಎಮ್ದು ಆಕ್ರೋಶ ವ್ಯಕ್ತಪಡಿಸಿದರು.
ಮರಳು ಮಾಫಿಯಾದ ವಿರುದ್ದ ಜಿಲ್ಲಾಡಳಿತ ಯಾವುದೇ ಕ್ರಮ ತೆಗೆದುಕೊಳ್ಳದೆ ರಾತ್ರಿ ವೇಳೆ ಬೆಂಗಳೂರು ಮತ್ತು ಹೊರ ರಾಜ್ಯಗಳಿಗೆ ಕಾಳಸಂತೆಯಲ್ಲಿ ಮರಳು ಮಾರಾಟ ಮಾಡಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರ ತಾಲೂಕಿನಲ್ಲಿಯೇ ಅತೀ ಹೆಚ್ಚು ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿದರು.[ದಕ್ಷಿಣ ಕನ್ನಡದಲ್ಲಿ ಮರಳು ಗಣಿಗಾರಿಕೆಗೆ ಅನುಮತಿ]
ದಿನಂಪ್ರತಿ ಕಾನೂನು ಬಾಹಿರವಾಗಿ ಮರಳು ಸಾಗಾಣಿಕೆ ನಡೆಯುತ್ತಿದ್ದು, ಇದಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೂ ಸಾಥ್ ನೀಡುತ್ತಿರುವ ಶಂಕೆ ಇದೆ. ರಾತ್ರಿ ಜೆಸಿಬಿ ಯಂತ್ರ ಬಳಸಿ ಮರಳು ತೆಗೆಯುತ್ತಿರುವ ಬಗ್ಗೆಯೂ ಯಾವುದೇ ತನಿಖೆ ನಡೆಯುತ್ತಿಲ್ಲ ಎಂದು ಸಂಘದ ಅಧ್ಯಕ್ಷ ರಂದೀಪ್ ಕಾಂಚನ್ ದೂರಿದರು.