ಗಂಡು ಸಲಿಂಗಕಾಮಿ ಎಂದು ವಧು ಆತ್ಮಹತ್ಯೆಗೆ ಶರಣಾದಳೇ?
ಮಂಗಳೂರು, ಫೆಬ್ರವರಿ. 13 : ಕಾಸರಗೋಡಿನ ಯುವಕನ ಜತೆ ಮದುವೆ ನಿಶ್ಚಯವಾಗಿದ್ದ ಮಂಗಳೂರಿನ ಯುವತಿಯೋರ್ವಳು ಮದುವೆಗೆ ಐದು ದಿನ ಇರುವಾಗಲೇ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಫೆಬ್ರವರಿ 8ರಂದು ಈ ಪ್ರಕರಣ ನಡೆದಿದ್ದು ಇದೀಗ ಯುವತಿಯ ಪೋಷಕರು ತಮ್ಮ ಮಗಳ ಆತ್ಮಹತ್ಯೆಗೆ ಮದುವೆ ನಿಶ್ಚಯವಾಗಿದ್ದ ಯುವಕನೇ ಕಾರಣ ಎಂದು ಕಂಕನಾಡಿ ಪೊಲೀಸ್ ರಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಯುವಕ ತಾನು ಸಲಿಂಗಕಾಮಿ ಎಂದು ನಂದಿನಿ ಬಳಿ ಫೆಬ್ರವರಿ 8ರಂದು ಹೇಳಿದ್ದು ತನಗೆ ಮದುವೆಯಾಗಲು ಇಷ್ಟವಿಲ್ಲ ಎಂದು ಹೇಳಿರುವುದೆ ನಂದಿತಾ ಆತ್ಮಹತ್ಯೆಗೆ ಕಾರಣ ಎಂದು ಯುವತಿಯ ಮನೆಯವರು ಆರೋಪಿಸಿದ್ದಾರೆ ಎನ್ನಲಾಗುತ್ತಿದೆ.
ಮಂಗಳೂರಿನ ನಾಗೋರಿಯ ಕೃಷ್ಣ ಎಂಬವರ ಮಗಳು ನಂದಿತಾ (26) ಎಂಬವರಿಗೆ ಕಾಸರಗೋಡಿನ ಚಂದ್ರಶೇಖರ ಎಂಬ ಯುವಕನೊಂದಿಗೆ ಮದುವೆ ನಿಶ್ಚಯವಾಗಿದ್ದು ಫೆಬ್ರವರಿ 13ರಂದು ಮದುವೆ ನಡೆಯಬೇಕಾಗಿತ್ತು.
ಆದರೆ, ಫೆಬ್ರವರಿ 8ರಂದು ಯುವತಿಯ ಮನೆಯವರು ಚಂದ್ರಶೇಖರ ಅವರ ಮನೆಗೆ ಮಾತುಕತೆಗಾಗಿ ತೆರಳಿದ್ದರು. ಈ ವೇಳೆ ಮನೆಯಲ್ಲಿ ಒಂಟಿಯಾಗಿದ್ದ ನಂದಿತಾ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದೀಗ ಯುವತಿಯ ಮನೆಯವರು ಮದುವೆಯಾಗಬೇಕಾಗಿದ್ದ ಯುವಕ ಚಂದ್ರಶೇಖರ್ ಮತ್ತು ನಂದಿತಾ ನಡುವೆ ನಡೆದ ಫೋನ್ ಮಾತುಕತೆಯಿಂದಲೇ ನಂದಿತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆರೋಪ ಮಾಡಿದ್ದಾರೆ.
ಈ ಆರೋಪವನ್ನು ತಳ್ಳಿ ಹಾಕಿರುವ ಯುವಕನ ಮನೆಯವರು ಸಾಕ್ಷ್ಯವಿದ್ದರೆ ತಿಳಿಸಿ ಎಂದಿದ್ದಾರೆ. ಈ ನಡುವೆ ಇಬ್ಬರ ಫೋನ್ ಸಂಭಾಷಣೆ ಸಂದೇಶಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.