ಉಳ್ಳಾಲದ ಬ್ಯೂಟಿಷಿಯನ್ ಮಧುಶ್ರೀ ನೇಣಿಗೆ ಕಾರಣವೇನು?
ಮಂಗಳೂರು, ಜನವರಿ 9 : ಬ್ಯೂಟಿಷಿಯನ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತಾರುನ ಸಂತೋಷನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಆನಂದ ಪೂಜಾರಿ ಎಂಬುವರ ಪುತ್ರಿ ಮಧುಶ್ರೀ (21) ಆತ್ಮಹತ್ಯೆ ಮಾಡಿಕೊಂಡ ಯುವತಿ. ಶನಿವಾರ ಸಂಜೆ ತಂದೆ ಕೆಲಸಕ್ಕೆ ತೆರಳಿದ್ದು, ತಾಯಿ ಅಂಗಡಿಗೆ ಹೋದ ಸಂದರ್ಭದಲ್ಲಿ ಮನೆಯೊಳಗೆ ಚೂಡಿದಾರಿನ ಶಾಲನ್ನು ಪಕ್ಕಾಸಿಗೆ ಸಿಕ್ಕಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹೆತ್ತವರಿಗೆ ಮಧುಶ್ರೀ ಓರ್ವಳೇ ಪುತ್ರಿ. ಮಂಗಳೂರಿನ ಬ್ಯೂಟಿಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ಈ ಯುವತಿ ಒಂದು ತಿಂಗಳಿನಿಂದ ಕೆಲಸಕ್ಕೂ ತೆರಳದೆ ಮನೆಯಲ್ಲೇ ಉಳಿದುಕೊಂಡಿದ್ದಳು.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕೈಯಲ್ಲಿ ಸೂರಜ್ ಎಂಬಾತನ ಹೆಸರನ್ನು ಬರೆದುಕೊಂಡಿದ್ದಾಳೆ. ಇದರಿಂದ ಈ ಪ್ರಕರಣ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆದರೆ, ಹೆತ್ತವರು ಮಾನಸಿಕ ಖಿನ್ನತೆಗೆ ಒಳಗಾಗಿ ಸಾವನ್ನಪ್ಪಿರುವುದಾಗಿ ದೂರಿಕೊಂಡಿದ್ದಾರೆ.
ಈ ಬಗ್ಗೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೊಬೈಲ್ ಕರೆ ಹಾಗೂ ಕೈಯಲ್ಲಿ ಬರೆದಿರುವ ಹೆಸರಿನ ಕುರಿತು ತನಿಖೆ ಆರಂಭಿಸಿದ್ದಾರೆ.