13 ಅಡಿ ಕಾಳಿಂಗ ಸರ್ಪವನ್ನು ಚಾರ್ಮಾಡಿ ಘಾಟ್ ಗೆ ಬಿಟ್ಟ ಸ್ನೇಕ್ ಜಾಯ್
ಮಂಗಳೂರು, ಜೂನ್ 18 : ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದಲ್ಲಿ ರಸ್ತೆ ಪಕ್ಕದ ಬೇಲಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಹದಿಮೂರು ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞರು ರಕ್ಷಿಸಿದ್ದಾರೆ. ಕಾಳಿಂಗ ಸರ್ಪವು ಸವಣಾಲು- ಅಯಿಲಹದಿಮೆ ರಸ್ತೆಯಲ್ಲಿ ಬೇಲಿಯಿಂದ ಹೊರಬರಲು ಹೆಣಗುತ್ತಿದ್ದ ಕಾಳಿಂಗ ಸರ್ಪವನ್ನು ಗ್ರಾಮಸ್ಥರು ನೋಡಿದ್ದಾರೆ.
ಆ ಕೂಡಲೇ ಉರಗ ತಜ್ಞ ಜಾಯ್ ಮಸ್ಕರೇನಸ್ (ಸ್ನೇಕ್ ಜಾಯ್ ಅಂತಲೇ ಹೆಸರುವಾಸಿ)ಗೆ ವಿಷಯ ತಲುಪಿಸಿದ್ದಾರೆ. ಹಾವು ಹಿಡಿಯುವ ಕೋಲು ಹಾಗೂ ಚೀಲದೊಂದಿಗೆ ಜಾಯ್ ಸ್ಥಳಕ್ಕೆ ತಲುಪಿದ್ದಾರೆ. ಅಪಾಯಕಾರಿ ವಿಷಜಂತುವಾದ ಕಾಳಿಂಗ ಸರ್ಪವನ್ನು ಬೇಲಿಯಿಂದ ಮೊದಲಿಗೆ ಬಿಡಿಸಬೇಕಿತ್ತು. ಆ ಕೆಲಸವನ್ನು ಜಾಯ್ ಯಶಸ್ವಿಯಾಗಿ ಮಾಡಿದರು.
ಆ ನಂತರ ತುಂಬ ಚಾಕಚಕ್ಯತೆಯಿಂದ ಅದನ್ನು ಚೀಲದೊಳಗೆ ತುಂಬಿಕೊಂಡರು. ಆ ನಂತರ ಚಾರ್ಮಾಡಿ ಘಾಟ್ ನ ಅರಣ್ಯ ಪ್ರದೇಶದೊಳಗೆ ಬಿಟ್ಟರು. ಇಷ್ಟು ಕೆಲಸ ಈ ವರದಿ ಮಾಡಿದಷ್ಟು ಸಲೀಸಂತೂ ಖಂಡಿತಾ ಅಲ್ಲ. ಆದರೆ ಸ್ನೇಕ್ ಜಾಯ್ ಪಾಲಿಗೆ ಸಮಾಜ ಸೇವೆ ಹಾಗೂ ಪ್ರತಿ ನಿತ್ಯವೂ ಎದುರಿಸುವ ಸವಾಲು. ಇಷ್ಟೆಲ್ಲ ಆಗಿದ್ದು ಜೂನ್ ಹದಿನೆಂಟನೇ ತಾರೀಕಿನ ಸೋಮವಾರ.