ಜಿಲ್ಲೆಗೆ 1200ರಿಂದ 1500 ವಿಸ್ತಾರಕರು: ಇದು ಬಿಜೆಪಿ ಯುದ್ಧ ತಂತ್ರ
ಮಂಗಳೂರು, ಮಾರ್ಚ್ 15 : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಣತಂತ್ರ ರೂಪಿಸಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಕೇಸರಿ ಪಾಳಯದಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ರಾಜ್ಯದಲ್ಲಿ ಅಧಿಕಾರವನ್ನು ಪಡೆಯಲೇಬೇಕು ಎಂದು ಹಠಕ್ಕೆ ಬಿದ್ದಿರುವ ಬಿಜೆಪಿಯು ಉತ್ತರ ಪ್ರದೇಶದ ಮಾದರಿಯಲ್ಲಿ ಚುನಾವಣೆ ತಂತ್ರವನ್ನು ರೂಪಿಸಿದೆ. ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಿಗೆ ವಿಸ್ತಾರಕ್ ರನ್ನು ನೇಮಿಸುವ ಮೂಲಕ ಚುನಾವಣೆ ಪ್ರಚಾರಕ್ಕೆ ತಂತ್ರ ರೂಪಿಸಿದೆ.
ವಿಸ್ತಾರಕ್ ಹುದ್ದೆಗೆ ನೇಮಕಗೊಂಡವರೆಲ್ಲರೂ ಹೊರ ರಾಜ್ಯದವರಾಗಿರುವುದು ಇಲ್ಲಿ ಗಮನಿಸಬೇಕಾದ ಸಂಗತಿ. ಹೊರ ರಾಜ್ಯದ ವಿಸ್ತಾರಕ್ ರಲ್ಲಿ ಉತ್ತರ ಪ್ರದೇಶ ಹಾಗೂ ಈಶಾನ್ಯ ರಾಜ್ಯಗಳ ಪ್ರತಿನಿಧಿಗಳು ಸೇರಿದ್ದಾರೆ. ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಇದೊಂದು ಪೂರ್ಣಾವಧಿ ಹುದ್ದೆಯಾಗಿದ್ದು, ವಿಸ್ತಾರಕ್ ಆಗಿ ನೇಮಕಗೊಂಡವರು ಪ್ರತಿ ವಿಧಾನಸಭಾ ಕ್ಷೇತ್ರ ಪೂರ್ತಿ ತಿರುಗಾಡಲಿದ್ದಾರೆ.
ಪಕ್ಷದ ಸ್ಥಿತಿಗತಿ, ಎದುರಾಳಿ ಪಕ್ಷದ ಪ್ರಾಬಲ್ಯ, ಅಲ್ಲದೇ ಪಕ್ಷದ ಬಗ್ಗೆ ಮತದಾರರಿಗೆ ಇರುವ ನಕಾರಾತ್ಮಕ ಹಾಗೂ ಸಕಾರಾತ್ಮಕ ಧೋರಣೆ, ಎದುರಾಳಿ ಪಕ್ಷದ ಹೆಚ್ಚುಗಾರಿಕೆ ಮುಂತಾದ ವಿಷಯಗಳ ಕುರಿತು ವಸ್ತು ಸ್ಥಿತಿ ವರದಿಯನ್ನು ಪಕ್ಷದ ಮುಖ್ಯಸ್ಥರಿಗೆ ಆಗಾಗ ನೀಡುತ್ತಾರೆ.
2017ರ ಜುಲೈ ತಿಂಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಬೂತ್ ವಿಸ್ತಾರಕ್ ರ ನೇಮಕ
ರಾಜ್ಯದಲ್ಲಿ ಬಿಜೆಪಿ ಬೂತ್ ವಿಸ್ತಾರಕ್ ರನ್ನು 2017ರ ಜುಲೈ ತಿಂಗಳಲ್ಲಿ ನೇಮಿಸಿತ್ತು. ಅವರಿಗೆ ಬೂತ್ ಮಟ್ಟದಲ್ಲಿ ತಿರುಗಾಡಿ ವರದಿ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಪ್ರತಿ ಜಿಲ್ಲೆಗೆ 1200ರಿಂದ 1500 ರವರೆಗೆ ವಿಸ್ತಾರಕರನ್ನು ನಿಯುಕ್ತಿಗೊಳಿಸಿ ಅಭಿಯಾನ ನಡೆಸಿತ್ತು.
ಪಕ್ಷದ ಸ್ಥಿತಿ-ಗತಿ ವರದಿ ಈಗಾಗಲೇ ಪೂರ್ಣ
ಈ ಅಭಿಯಾನದ ಭಾಗವಾಗಿ ಕಾಲೇಜುಗಳಿಗೆ ಭೇಟಿ ನೀಡಿ, ವಿಧ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದು, ಮಾಜಿ ಯೋಧರ ಮನೆಗೆ ಭೇಟಿ ನೀಡುವುದು ಸೇರಿದಂತೆ ಮನೆ ಮನೆ ಭೇಟಿ ಕಾರ್ಯಕ್ರಮಗಳನ್ನು ಬಿಜೆಪಿ ಹಮ್ಮಿಕೊಂಡಿತ್ತು. ಅಲ್ಲದೆ ಪಕ್ಷದ ಸ್ಥಳೀಯ ಕಾರ್ಯಕರ್ತರು ಹಾಗೂ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಪಕ್ಷದ ಸ್ಥಿತಿಗತಿ ವರದಿಯನ್ನು ವಿಸ್ತಾರಕರು ಈಗಾಗಲೇ ಪೂರ್ಣಗೊಳಿಸಿದ್ದಾರೆ.
ಮೂರು ಹಂತಗಳಲ್ಲಿ ವಿಸ್ತಾರಕ್ ಕೆಲಸ
ಪ್ರತಿ ಬೂತ್ ವಿಸ್ತಾರಕರು ಈ ಎಲ್ಲಾ ವರದಿಯನ್ನು ಸೇರಿಸಿ ಕ್ಷೇತ್ರ ವಿಸ್ತಾರಕರಿಗೆ ಒಪ್ಪಿಸಿದ್ದು, ಈ ಕ್ಷೇತ್ರ ವಿಸ್ತಾರಕರು ವರದಿಯನ್ನು ಪಕ್ಷದ ವರಿಷ್ಠರಿಗೆ ಸಲ್ಲಿಸಲಿದ್ದಾರೆ. ಈ ವಿಸ್ತಾರಕ್ ರ ಕೆಲಸ ಮೂರು ಹಂತದಲ್ಲಿ ನಡೆಯುತ್ತಿದೆ. ಮೊದಲ ಹಂತದ ಬೂತ್ ಮಟ್ಟದ ವಿಸ್ತಾರಕ್ ಕಾರ್ಯ ಈಗಾಗಲೇ ಮುಗಿದಿದೆ.
ಕೇರಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಂದ್ರನ್ ನೇಮಕ
ಎರಡನೇ ಹಂತದ ಕ್ಷೇತ್ರ ಮಟ್ಟದ ವಿಸ್ತಾರಕ್ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಇದೇ ವೇಳೆ ಮೂರನೇ ಹಂತದ ಜಿಲ್ಲಾಮಟ್ಟದ ವಿಸ್ತಾರಕ್ ಕಾರ್ಯ ಕೂಡ ಶುರುವಾಗಿದೆ. ಕ್ಷೇತ್ರ ವಿಸ್ತಾರಕರು ನೀಡುವ ವರದಿಯನ್ನು ಜಿಲ್ಲಾ ಮಟ್ಟದ ವಿಸ್ತಾರಕರು ಪರಿಶೀಲಿಸಿ, ಅದನ್ನು ಪಕ್ಷದ ವರಿಷ್ಠರಿಗೆ ಸಲ್ಲಿಸಲಿದ್ದಾರೆ. ರಾಜ್ಯದಲ್ಲಿ ಪ್ರತಿಯೊಂದು ಜಿಲ್ಲೆಗೂ ವಿಸ್ತಾರಕರನ್ನು ಬಿಜೆಪಿ ನೇಮಿಸಿದೆ. ದಕ್ಷಿಣಕನ್ನಡ ಜಿಲ್ಲೆಗೆ ಕೇರಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಂದ್ರನ್ ಅವರನ್ನು ನೇಮಿಸಲಾಗಿದೆ.