ಮಂಡೆಕೋಲು ಗ್ರಾ.ಪಂ. ಕಚೇರಿಗೆ ಬಂದ ಹತ್ತು ಅಡಿ ಉದ್ದದ ಕಾಳಿಂಗ ಸರ್ಪ
ಮಂಗಳೂರು, ಸೆಪ್ಟೆಂಬರ್ 4 : ಪಶ್ಚಿಮ ಘಟ್ಟದಲ್ಲಿ ಕಾಡು ಕಡಿಮೆಯಾಗಿ ವನ್ಯ ಪ್ರಾಣಿಗಳ ಅವಾಸಸ್ಥಾನದ ಪರಿಧಿ ಸಂಕುಚಿತಗೊಂಡಿದೆ. ಅವುಗಳು ಆಹಾರ, ಆಸರೆ ಹುಡುಕಿ ನಾಡಿನತ್ತ ಬರುತ್ತಿರುವ ಹಲವಾರು ಪ್ರಸಂಗಗಳನ್ನು ನಾವು ಕಂಡಿದ್ದೇವೆ.
ಆದರೆ, ತನ್ನ ವಾಸ ಸ್ಥಾನ ಹುಡುಕಿ ಕೊಡಿ, ಇಲ್ಲ ನಿಮ್ಮ ಕಚೇರಿಯನ್ನೇ ನನಗೆ ಬಿಟ್ಟು ಕೊಡಿ ಎಂಬಂತೆ ಬೃಹತ್ ಕಾಳಿಂಗ ಸರ್ಪ ನೇರವಾಗಿ ಗ್ರಾಮ ಪಂಚಾಯತಿ ಕಚೇರಿಗೇ ನುಗ್ಗಿದೆ. ಇಂತಹ ಪ್ರಸಂಗ ಬೆಳಕಿಗೆ ಬಂದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ.
ಕೋಬ್ರಾಗೆ ನೀರು: ವೈರಲ್ ವೀಡಿಯೊ ಹಿಂದಿನ ಅಸಲಿ ಕತೆಯೇನು?
ಗ್ರಾಮ ಪಂಚಾಯತಿ ಕಚೇರಿಯೊಳಗೆ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ನಡೆದಿದೆ. ಮಂಡೆಕೋಲು ಗ್ರಾಮ ಪಂಚಾಯಿತಿ ಕಟ್ಟಡದ ತಳಮಹಡಿಯ ಸಭಾಂಗಣದೊಳಗೆ ಸುಮಾರು ಹತ್ತು ಅಡಿ ಉದ್ದದ ಕಾಳಿಂಗ ಸರ್ಪವೊಂದು ಏಕಾಏಕಿ ನುಗ್ಗಿದೆ. ಇದರಿಂದಾಗಿ ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಸ್ಥಳೀಯರು ಆತಂಕಪಟ್ಟಿದ್ದಾರೆ.
ಕಚೇರಿಯಲ್ಲಿ ವಾಸ್ತವ್ಯ ಹೂಡಿದ್ದ ಕಾಳಿಂಗನನ್ನು ಅಲ್ಲಿಂದ ಓಡಿಸಲು ಗ್ರಾಮ ಪಂಚಾಯತಿ ಸಿಬ್ಬಂದಿ ಮಾಡಿದ ಪ್ರಯತ್ನ ವ್ಯರ್ಥವಾಗಿದೆ. ಆಮೇಲೆ ಸ್ಥಳೀಯ ಉರಗ ತಜ್ಞರಿಗೆ ಮಾಹಿತಿ ನೀಡಲಾಗಿದೆ. ಉರಗ ತಜ್ಞ ಶ್ಯಾಮ್ ಭಟ್ ಹಾಗೂ ನಿವೃತ್ತ ಅರಣ್ಯಾಧಿಕಾರಿ ಶಿವರಾಮ್ ಸ್ಥಳಕ್ಕೆ ಬಂದು, ಭಾರೀ ಶ್ರಮ ವಹಿಸಿ ಕಾಳಿಂಗನನ್ನು ಸ್ಥಳೀಯರ ನೆರವಿಂದ ಹಿಡಿಯುವಲ್ಲಿ ಸಫಲರಾದರು.
ಆ ನಂತರ ಕಾಳಿಂಗ ಸರ್ಪವನ್ನ ಮಂಗಳೂರಿನಲ್ಲಿ ಪಿಲಿಕುಳ ನಿಸರ್ಗಧಾಮಕ್ಕೆ ಹಸ್ತಾಂತರಿಸಲಾಗಿದೆ.