ಕಾಡಾನೆ ಓಡಿಸುವಾಗ ಫೈರಿಂಗ್ ನಲ್ಲಿ ವನ್ಯಜೀವಿ ಸಿಬ್ಬಂದಿಗೆ ಗುಂಡು; ಸಾವು
ಮಂಡ್ಯ, ಆಗಸ್ಟ್ 07: ಊರಿನೊಳಗೆ ಲಗ್ಗೆ ಇಡುತ್ತಿದ್ದ ಕಾಡಾನೆಗಳನ್ನು ಓಡಿಸಲು ಬೆದರು ಗುಂಡು ಹಾರಿಸಿದಾಗ ವನ್ಯಜೀವಿ ವಿಭಾಗದ ಸಿಬ್ಬಂದಿಯೊಬ್ಬರು ಬಲಿಯಾಗಿರುವ ಘಟನೆ ಮಂಡ್ಯ ತಾಲ್ಲೂಕಿನ ಕಿರುಗಾವಲು ಹೋಬಳಿಯ ಕೊದೇನಕೊಪ್ಪಲು ಗ್ರಾಮದ ಬಳಿ ಗುರುವಾರ ಸಂಜೆ ನಡೆದಿದೆ.
Recommended Video
ವನ್ಯಜೀವಿ ವಿಭಾಗದ ಸಿಬ್ಬಂದಿ ಶಿವನಂಜಯ್ಯ (45) ಮೃತರಾಗಿದ್ದು, ಗುರುವಾರ ಬೆಳಿಗ್ಗೆ ಕಿರುಗಾವಲು ಹೋಬಳಿಯ ಕೆಲ ಗ್ರಾಮಗಳಿಗೆ ಕಾಡಾನೆಗಳು ದಾಳಿ ಇಟ್ಟು ನಷ್ಟ ಉಂಟು ಮಾಡಿದ್ದವು. ಇವುಗಳನ್ನು ಓಡಿಸಲು ಅರಣ್ಯಾಧಿಕಾರಿಗಳು ಬೆಳಿಗ್ಗೆಯಿಂದಲೂ ಪ್ರಯತ್ನಿಸಿದ್ದರು. ಸಂಜೆಯಾಗುತ್ತಿದ್ದಂತೆ ಪುನಃ ಆನೆಗಳು ಕೊದೇನಕೊಪ್ಪಲು ಗ್ರಾಮದ ಬಳಿ ಕಾಣಿಸಿಕೊಂಡಿವೆ.
ಕೋವಿಡ್ ನಿಂದ ಗುಣಮುಖರಾಗಿ ಕೆರೆ ಕಾಮೇಗೌಡರು ಡಿಸ್ಚಾರ್ಜ್
ಆಗ ಅರಣ್ಯಾಧಿಕಾರಿಗಳು ಅವುಗಳನ್ನು ಓಡಿಸಲು ಫೈರಿಂಗ್ ಮಾಡಿದ್ದಾರೆ. ಆದರೆ ಕತ್ತಲಾಗಿದ್ದರಿಂದ ಗೊತ್ತಾಗದೆ ಅಲ್ಲಿಯೇ ಇದ್ದ ವೈಲ್ಡ್ಲೈಫ್ ನ ಸಿಬ್ಬಂದಿ ಶಿವನಂಜಯ್ಯಗೆ ಗುಂಡು ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಧನರಾಜ್, ಪಿಎಸ್ಐ ಮಂಜು, ತಾಲ್ಲೂಕು ಅರಣ್ಯಾಧಿಕಾರಿ ಆಸೀಫ್ ಅಹಮದ್ ಸೇರಿದಂತೆ ಇನ್ನಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ದೇಹವನ್ನು ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.