ರಾಜೀನಾಮೆ ಬಳಿಕ ಆದಿಚುಂಚನಗಿರಿಗೆ ವಿಶ್ವನಾಥ್ ಹೋಗಿದ್ದೇಕೆ?
ಮೈಸೂರು, ಜೂನ್ 25: ಮಾಜಿ ಸಂಸದ ವಿಶ್ವನಾಥ್ ಆದಿಚುಂಚನಗಿರಿಯ ಕಾಲಭೈರವೇಶ್ವರನ ಸನ್ನಿಧಿಗೆ ತೆರಳಿ ಅಮಾವಾಸ್ಯೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಾಮಾನ್ಯವಾಗಿ ದೇವಾಲಯಗಳಿಂದ ದೂರ ಇರುವ ಅವರು ಇದೀಗ ದೇವರ ಮೊರೆ ಹೋಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಹೀಗಾಗಿ ಆದಿಚುಂಚನಗಿರಿಗೆ ಹೋಗಿದ್ದೇಕೆ ಎಂಬ ಪ್ರಶ್ನೆ ಕಾಡತೊಡಗಿದೆ.
ಕಾಂಗ್ರೆಸ್ ಪಕ್ಷದೊಂದಿಗೆ ಇದ್ದ ನಾಲ್ಕು ದಶಕಗಳ ಸಂಬಂಧವನ್ನು ಕಡಿದುಕೊಂಡು ಹೊರ ಬಂದಿರುವ ಹಿರಿಯ ನಾಯಕ, ಮಾಜಿ ಸಂಸದ ಎಚ್.ವಿಶ್ವನಾಥ್ ಅವರು ಜೆಡಿಎಸ್ನ ತೆನೆ ಹೊರುವುದು ಖಚಿತವಾಗಿದ್ದರೂ ಅಧಿಕೃತವಾಗಿ ಸೇರ್ಪಡೆಯಾಗಲು ಮೀನಾಮೇಷ ಎಣಿಸುತ್ತಿರುವುದು ಕಂಡು ಬಂದಿದೆ. ಬಹುಶಃ ಒಳ್ಳೆಯ ಕಾಲಕ್ಕಾಗಿ ಕಾಯುತ್ತಿದ್ದಾರೆಯೋ ಏನೋ ಗೊತ್ತಿಲ್ಲ.
ಕಾಂಗ್ರೆಸ್ ಗೆ ಅಧಿಕೃತವಾಗಿ ರಾಜೀನಾಮೆ ನೀಡಿದ ಎಚ್ ವಿಶ್ವನಾಥ್
ಇದೀಗ ಆಷಾಡ ಆರಂಭವಾಗಿದೆ. ಇದು ಕಳೆದ ಬಳಿಕ ಅಧಿಕೃತವಾಗಿ ತಮ್ಮ ಸಹಸ್ರಾರು ಬೆಂಬಲಿಗರೊಂದಿಗೆ ಬೃಹತ್ ಸಮಾವೇಶದಲ್ಲಿ ಜೆಡಿಎಸ್ಗೆ ಸೇರ್ಪಡೆಯಾಗುವುದು ವಿಶ್ವನಾಥ್ ಪ್ಲಾನ್. ಈ ಮೂಲಕ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಶಾಸಕರಿಗೆ ಬಿಗ್ ಶಾಕ್ ನೀಡಲು ತಯಾರಿ ಈಗಿನಿಂದಲೇ ಆರಂಭವಾಗಿದೆ.
ಈಗಾಗಲೇ ತಮ್ಮ ಬೆಂಬಲಿಗರೊಂದಿಗೆ ಮಾತುಕತೆ ನಡೆಸಿರುವ ಪರಿಣಾಮ ಕಾಂಗ್ರೆಸ್ನ ಕೆಲವು ನಾಯಕರು ವಿಶ್ವನಾಥ್ ಅವರ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ. ಬಹಳಷ್ಟು ಮಂದಿ ರಾಜೀನಾಮೆ ನೀಡಿ ಬರಲು ತಯಾರಾಗಿದ್ದಾರೆ. ಕೊಡಗಿನಲ್ಲಿ ಒಂದಷ್ಟು ಮಂದಿ ವಿಶ್ವನಾಥ್ ಅವರಿಗೆ ಕೈ ಜೋಡಿಸಲು ತುದಿಗಾಲಲ್ಲಿ ನಿಂತಿದ್ದು, ಅಲ್ಲಿನ ಜಿಲ್ಲಾ ಕಾಂಗ್ರೆಸ್ನಲ್ಲಿ ಒಳಜಗಳಗಳು ಬೀದಿಗೆ ಬರತೊಡಗಿವೆ.
ರಾಜ್ಯದಲ್ಲಿರುವುದು ಕಾಂಗ್ರೆಸ್ - ಎಸ್ (ಸಿದ್ದು) ಪಕ್ಷ: ವಿಶ್ವನಾಥ್
ಮೈಸೂರಿನಲ್ಲಿ ಮೇಲ್ನೋಟಕ್ಕೆ ಹೆಚ್ಚಿನ ಮುಖಂಡರು ಯಾರೂ ಕೂಡ ಎಚ್.ವಿಶ್ವನಾಥ್ ಅವರೊಂದಿಗೆ ಇದ್ದೇವೆ ಎಂದು ತೋರ್ಪಡಿಸುತ್ತಿಲ್ಲವಾದರೂ ಇನ್ನು ಕೆಲವೇ ದಿನಗಳಲ್ಲಿ ಇಲ್ಲಿಯೂ ಒಂದಷ್ಟು ಬದಲಾವಣೆಗಳಾದರೆ ಅದರಲ್ಲಿ ಅಚ್ಚರಿ ಪಡುವಂತಹದ್ದೇನಿಲ್ಲ. ಇದೆಲ್ಲದರ ನಡುವೆ ಆಶ್ಚರ್ಯ ತರುವ ವಿಷಯ ಏನೆಂದರೆ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ಬಳಿಕ ಎಚ್.ವಿಶ್ವನಾಥ್ ಅವರು ಕೂಡ ಆದಿಚುಂಚನಗಿರಿಗೆ ಭೇಟಿ ನೀಡಿ ಕಾಲಭೈರವೇಶ್ವರ ಸ್ವಾಮಿಗೆ ನಮೋ ಎಂದಿದ್ದಾರೆ. ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಆದರೂ ತಾನು ಜೆಡಿಎಸ್ಗೆ ಸೇರ್ಪಡೆಯಾಗುತ್ತೇನೆ ಎಂಬುದನ್ನು ಬಹಿರಂಗಪಡಿಸದ ವಿಶ್ವನಾಥ್, ಇದು ಸೌಜನ್ಯದ ಭೇಟಿಯಷ್ಟೇ. ನನ್ನ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಪಡೆದು ಯಾವ ಪಕ್ಷ ಸೇರಬೇಕೆನ್ನುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂಬುದಾಗಿ ಅಡ್ಡಗೋಡೆ ನಡುವೆ ದೀಪವಿಟ್ಟಂತೆ ಮಾತನಾಡಿದ್ದಾರೆ.
ಆರಂಭದಿಂದಲೂ ತಮ್ಮ ನಡೆಯಲ್ಲಿ ಒಂದಷ್ಟು ಗೌಪ್ಯತೆ ಕಾಪಾಡಿಕೊಂಡು ಬರುತ್ತಿರುವ ಅವರ ಕೆಲವು ನಡವಳಿಕೆಗಳು ಗೊಂದಲಕ್ಕೆ ತಳ್ಳುತ್ತಿದ್ದು, ಬೆಂಬಲಿಗರು ಮತ್ತು ಜನತೆಯಲ್ಲಿರುವ ಗೊಂದಲಗಳಿಗೆ ಹೇಗೆ ತೆರೆ ಎಳೆಯುತ್ತಾರೆ ಎಂಬುದನ್ನು ಕಾದು ನೋಡುವುದು ಅನಿವಾರ್ಯವಾಗಿದೆ.