ಅನಿತಾಕುಮಾರಸ್ವಾಮಿ ಹೊಳೆ ಆಂಜನೇಯನ ದೇಗುಲಕ್ಕೆ ಭೇಟಿ ನೀಡಿದ್ದೇಕೆ?
ಮಂಡ್ಯ, ಫೆಬ್ರವರಿ 28: ತಮ್ಮ ಸುಪುತ್ರ ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯದತ್ತ ಚಿಂತಿತರಾಗಿರುವ ಅನಿತಾಕುಮಾರಸ್ವಾಮಿ ಅವರು ಹೊಳೆ ಆಂಜನೇಯಸ್ವಾಮಿಯ ಮೊರೆ ಹೋದರೆ? ಎಂಬ ಸಂಶಯ ಹುಟ್ಟಿಕೊಂಡಿದೆ. ಹಾಗೆ ನೋಡಿದರೆ ಮಂಡ್ಯ ಲೋಕಸಭೆಗೆ ಯಾರು ಸ್ಪರ್ಧಿಸಬೇಕು ಎಂಬುದು ಇನ್ನೂ ತೀರ್ಮಾನವಾಗಿಲ್ಲ.
ಈ ಹಿಂದೆಯೇ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಕುರಿತಂತೆ ಜೆಡಿಎಸ್ ವರಿಷ್ಟರು ತೀರ್ಮಾನ ಮಾಡಿದ್ದರು. ಹೀಗಾಗಿಯೇ ಕ್ಷೇತ್ರದ ತುಂಬಾ ನಿಖಿಲ್ ಕುಮಾರಸ್ವಾಮಿ ಓಡಾಟವನ್ನು ಕೂಡ ಮಾಡಿದ್ದರು. ಆದರೆ ಆ ನಂತರದ ಬೆಳವಣಿಗೆ ಜೆಡಿಎಸ್ ವರಿಷ್ಠರನ್ನು ಕಂಗಾಲು ಮಾಡಿದೆ.
ಮತಹಾಕಿದ ಮಂಡ್ಯ ಜಿಲ್ಲೆ ಮತದಾರರ ಋಣ ತೀರಿಸಿದ ಕುಮಾರಸ್ವಾಮಿ
ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ನ ಭದ್ರಕೋಟೆಯಾಗಿರುವುದರಿಂದ ಸುಲಭ ಗೆಲುವು ಸಾಧ್ಯ ಎಂಬುದು ಲೆಕ್ಕಾಚಾರವಾಗಿತ್ತು. ಹೀಗಿರುವಾಗಲೇ ಮೊದಲಿಗೆ ಅಪಸ್ವರ ತೆಗೆದಿದ್ದು, ಕಾಂಗ್ರೆಸ್ನ ಮುಖಂಡ ಮಾಜಿ ಸಚಿವ ಎ.ಮಂಜು. ಮೊದಲಿಗೆ ಮಂಡ್ಯದಿಂದ ಸ್ಪರ್ಧಿಸಲು ಸುಮಲತಾ ಅಥವಾ ಅಭಿಷೇಕ್ ಗೆ ಅವಕಾಶ ಮಾಡಿಕೊಡಿ ಎಂದು ಹೇಳಿಕೆ ನೀಡಿದ್ದರು.
ಇದಕ್ಕೆ ಅಂಬರೀಶ್ ಅಭಿಮಾನಿಗಳು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಬೆಂಬಲ ನೀಡಿದ್ದರು. ದಿನ ಕಳೆದಂತೆ ಸುಮಲತಾ ಅವರ ಮೇಲೆ ಅಭಿಮಾನಿಗಳ ಒತ್ತಾಯ ಹೆಚ್ಚಾಯಿತು. ತಾನು ರಾಜಕೀಯಕ್ಕೆ ಬರುವ ಇಂಗಿತವನ್ನು ಅವರು ವ್ಯಕ್ತಪಡಿಸಿಯೇ ಬಿಟ್ಟರು. ಇದು ಮಂಡ್ಯ ಮಾತ್ರವಲ್ಲ, ರಾಜ್ಯದಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಮುಂದೆ ಓದಿ....
ಇನ್ನೂ ಕೂಡ ಒಮ್ಮತ ಕಂಡು ಬಂದಿಲ್ಲ
ಈಗಲೂ ಸುಮಲತಾ ಅವರು ಪಟ್ಟು ಸಡಿಲಿಸದೆ ಇರುವುದರಿಂದ ಮೈತ್ರಿ ನಡುವೆ ಇನ್ನೂ ಕೂಡ ಒಮ್ಮತ ಮೂಡಿದಂತೆ ಕಂಡು ಬಂದಿಲ್ಲ. ಇಲ್ಲಿಂದಲೇ ನಿಖಿಲ್ ಕುಮಾರ್ ಸ್ವಾಮಿ ಅವರು ತಮ್ಮ ರಾಜಕೀಯ ಭವಿಷ್ಯ ಆರಂಭಿಸುವ ಆಲೋಚನೆಯಲ್ಲಿದ್ದು, ಅದು ಕಾರ್ಯರೂಪಕ್ಕೆ ಬರುತ್ತಾ ಎಂಬುದು ಇನ್ನೂ ಕೂಡ ತೂಗು ಉಯ್ಯಾಲೆಯಲ್ಲಿದೆ.
ಎಷ್ಟರ ಮಟ್ಟಿಗೆ ಫಲಕೊಡುತ್ತದೆ?
ಕೆಲವು ರಾಜಕೀಯ ಮೂಲಗಳ ಪ್ರಕಾರ ಸುಮಲತಾ ಅವರಿಗೆ ಮಂಡ್ಯ ಬದಲಾಗಿ ಬೇರೆ ಕ್ಷೇತ್ರದಿಂದ ಟಿಕೆಟ್ ನೀಡಿ ಮಂಡ್ಯ ಕ್ಷೇತ್ರವನ್ನು ನಿಖಿಲ್ ಕುಮಾರಸ್ವಾಮಿ ಅವರಿಗೆ ಕಾದಿರಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಫಲಕೊಡುತ್ತದೆಯೋ ಎಂಬುದು ಕೂಡ ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ.
ಸುಮಲತಾ ಅಂಬರೀಶ್ ಅವರ ಮನವೊಲಿಸುತ್ತೇವೆ: ಡಿಕೆ.ಶಿವಕುಮಾರ್
ಆಂಜನೇಯಸ್ವಾಮಿ ದೇಗುಲದಲ್ಲಿ ಪೂಜೆ
ಹೇಗಾದರೂ ಮಾಡಿ ಸುಮಲತಾ ಅವರ ಮನವೊಲಿಸಿಕೊಂಡು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಪ್ರಯತ್ನಗಳು ಪ್ರಗತಿಯಲ್ಲಿರುವಾಗಲೇ ರಾಮನಗರ ಶಾಸಕಿ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ನಿ ಅನಿತಾಕುಮಾರಸ್ವಾಮಿ ಅವರು ಮದ್ದೂರು ಪಟ್ಟಣದ ಇತಿಹಾಸ ಪ್ರಸಿದ್ಧ ಹೊಳೆ ಆಂಜನೇಯಸ್ವಾಮಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ್ದು, ಈ ವಿಶೇಷ ಪೂಜೆ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಭವಿಷ್ಯದಲ್ಲಿ ಮತ್ತು ರಾಜಕೀಯ ರಂಗದಲ್ಲಿ ಯಶಸ್ಸು ಸಿಗಲಿ ಎಂದು ಪ್ರಾರ್ಥಿಸಿ ಮಾಡಿದ್ದಾಗಿ ಹೇಳಲಾಗುತ್ತಿದೆ.
ಕುತೂಹಲ ಹುಟ್ಟು ಹಾಕಿದೆ
ಮಂಗಳವಾರ (ಫೆ.26) ಬೆಳಗ್ಗೆ ಮದ್ದೂರು ದೇವಾಲಯಕ್ಕೆ ತೆರಳಿದ ಅವರು, ಒಂದು ಕಾಲು ರೂ. ಹಿಡಿದು ಕೊಂಡು ಗರ್ಭಗುಡಿಯಲ್ಲಿ 5 ಸುತ್ತು ಪ್ರದಕ್ಷಿಣೆ ಹಾಕಿ ತಮ್ಮ ಹರಕೆ ಈಡೇರುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಇನ್ನು 4 ವಾರಗಳು ದೇಗುಲಕ್ಕೆ ಬಂದು ವಿಶೇಷ ಪೂಜೆ ಮಾಡಿಸಲಿದ್ದಾರೆ ಎನ್ನಲಾಗಿದೆ. ಮದ್ದೂರು ಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ಒಂದುಕಾಲು ರೂ.ನಾಣ್ಯವನ್ನು ಹಿಡಿದು ಹರಕೆ ಕಟ್ಟಿಕೊಂಡರೆ ಅಂದುಕೊಂಡದ್ದು ನೆರವೇರುತ್ತೆ ಎಂಬ ಪ್ರತೀತಿಯಿದೆ. ಹೀಗಾಗಿ ಅನಿತಾಕುಮಾರಸ್ವಾಮಿ ಅವರ ದೇವಾಲಯದ ಭೇಟಿ ಮತ್ತು ವಿಶೇಷಪೂಜೆ ಕುತೂಹಲವನ್ನು ಹುಟ್ಟು ಹಾಕಿದೆ.