ಲೋಕಸಭಾ ಚುನಾವಣೆ: ಮಂಡ್ಯದತ್ತ ರಾಜ್ಯದ ಜನರ ಚಿತ್ತ..!
ಮೈಸೂರು, ಜನವರಿ 13: ರಾಜ್ಯದ ಜನರ ಚಿತ್ತ ಮಂಡ್ಯದತ್ತ ನೆಟ್ಟಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಯೋಚಿಸುತ್ತಿದ್ದರೆ ಮತ್ತೊಂದೆಡೆ ಅಂಬರೀಶ್ ಪುತ್ರ ಅಭಿಷೇಕ್ ಚುನಾವಣಾ ಕಣಕ್ಕಿಳಿಯುವ ಮೂಲಕ ರಾಜಕೀಯ ಪ್ರವೇಶಿಸುತ್ತಾರಾ ಎಂಬ ಕುತೂಹಲ ಎಲ್ಲರನ್ನು ಕಾಡತೊಡಗಿದೆ.
ಹಾಗೆ ನೋಡಿದರೆ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ನಿಧಾನವಾಗಿ ರಾಜಕೀಯದಲ್ಲಿ ಸಂಚಲನ ಆರಂಭವಾಗಿದೆ. ಒಂದಷ್ಟು ನಾಯಕರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆಯಾದರೂ ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಇರುವ ಕಾರಣ ಹೊಂದಾಣಿಕೆ ಮೂಲಕ ಟಿಕೆಟ್ ಹಂಚಿಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿದ್ದು, ಬಹಳಷ್ಟು ನಾಯಕರಿಗೆ ನಿರಾಸೆಯಾಗುವ ಸಾಧ್ಯತೆ ಹೆಚ್ಚಿದೆ.
ಅಭಿಷೇಕ್ ನಿರ್ಧಾರದ ಮೇಲೆ ನಿಂತಿದೆ ನಿಖಿಲ್ ರಾಜಕೀಯ ಭವಿಷ್ಯ..!
ಯಾವ್ಯಾವ ಜಿಲ್ಲೆಯಲ್ಲಿ ಯಾವ್ಯಾವ ಪಕ್ಷದ ಪ್ರಾಬಲ್ಯವಿದೆಯೋ ಅದರ ಮೇಲೆ ಅಲ್ಲಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲು ಎರಡು ಪಕ್ಷಗಳ ನಾಯಕರು ನಿರ್ಧರಿಸಿದ್ದಾರೆಯಾದರೂ ಅದು ತುಂಬಾ ಸುಲಭವಾಗಿ ಸಾಗುತ್ತದೆ ಎನ್ನಲಾಗುವುದಿಲ್ಲ. ಒಂದಷ್ಟು ಮಂದಿ ಅತೃಪ್ತರು ಬಂಡಾಯ ಎದ್ದರೂ ಅಚ್ಚರಿ ಪಡಬೇಕಾಗಿಲ್ಲ.
ಉದಾಹರಣೆಗೆ ಮಂಡ್ಯ ಜಿಲ್ಲೆ ಸಂಪೂರ್ಣ ಜೆಡಿಎಸ್ ಮಯವಾಗಿದೆ. ಏಳು ಶಾಸಕರು. ಒಬ್ಬರು ಸಂಸದರು ಹೀಗೆ ಎಲ್ಲರೂ ಜೆಡಿಎಸ್ ನವರೇ ಆಗಿದ್ದಾರೆ. ಇಲ್ಲಿ ಜೆಡಿಎಸ್ ನಿಂದ ಯಾರೇ ಸ್ಪರ್ಧಿಸಿದರೂ ಅವರು ಗೆಲ್ಲುತ್ತಾರೆ ಎಂಬ ಲೆಕ್ಕಚಾರವಿದೆ. ಇದನ್ನು ಮನಗಂಡೇ ಜೆಡಿಎಸ್ ವರಿಷ್ಠ ದೇವೇಗೌಡರು ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡುವ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ. ಮುಂದೆ ಓದಿ..
ಕಾಂಗ್ರೆಸ್ ಅಸ್ಥಿತ್ವ ಕಳೆದುಕೊಳ್ಳಬಹುದು ಎಂಬ ಭಯ
ಮೊದಲಿಗೆ ಮಂಡ್ಯದಿಂದ ದೇವೇಗೌಡರು ಸ್ಪರ್ಧಿಸುತ್ತಾರೆ ಎಂಬ ಸುದ್ದಿಯಿತ್ತು. ಹೀಗಾಗಿ ಹಿರಿಯ ನಾಯಕರು ಎಂಬ ಕಾರಣಕ್ಕೆ ಮಂಡ್ಯದ ಕೆಲವು ಕಾಂಗ್ರೆಸ್ ನಾಯಕರು ಮೌನಕ್ಕೆ ಶರಣಾಗಿದ್ದರು. ಆದರೆ ಅದು ಬದಲಾಗಿ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ನೀಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರತೊಡಗಿತೋ ಕಾಂಗ್ರೆಸ್ ನಾಯಕರಲ್ಲಿಯೂ ಅಸಮಾಧಾನ ಆರಂಭವಾಗಿದೆ. ಜತೆಗೆ ಮುಂದೊಂದು ದಿನ ಜಿಲ್ಲೆಯಲ್ಲಿ ಕಾಂಗ್ರೆಸ್ ಅಸ್ಥಿತ್ವ ಕಳೆದುಕೊಳ್ಳಬಹುದು ಎಂಬ ಭಯವೂ ಆರಂಭವಾಗಿದೆ.
ಕಾಂಗ್ರೆಸ್ ಮಂಡ್ಯದಲ್ಲಿ ಉಳಿಯುವಂತೆ ಮಾಡಲಿ
ಇವತ್ತೇನಾದರೂ ಮಂಡ್ಯದಲ್ಲಿ ಕಾಂಗ್ರೆಸ್ ನ ಅಸ್ಥಿತ್ವ ಉಳಿಸುವ ನಾಯಕ ಇದ್ದರೆ ಅದು ಅಂಬರೀಶ್ ಅವರ ಪುತ್ರ ಅಭಿಷೇಕ್ ಮಾತ್ರ. ಅಂಬರೀಶ್ ಅವರಿಗೆ ಯಾವ ರೀತಿಯ ಪ್ರೀತಿಯನ್ನು ತೋರಿಸುತ್ತಿದ್ದರೋ ಅದೇ ಪ್ರೀತಿಯನ್ನು ಜನ ಅಭಿಷೇಕ್ ಅವರ ಮೇಲೆ ತೋರಿಸುತ್ತಿದ್ದಾರೆ. ಜತೆಗೆ ಅಭಿಷೇಕ್ ಜನರ ಅಭಿಮಾನವನ್ನು ಗಳಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಹೀಗಿರುವಾಗ ಅಭಿಷೇಕ್ ಅವರು ಸ್ಪರ್ಧಿಸಲಿ ಆ ಮೂಲಕ ಕಾಂಗ್ರೆಸ್ ಮಂಡ್ಯದಲ್ಲಿ ಉಳಿಯುವಂತೆ ಮಾಡಲಿ ಎಂಬುದು ಇಲ್ಲಿ ಬಹಳಷ್ಟು ಮುಖಂಡರ ಅಭಿಪ್ರಾಯವಾಗಿದೆ.
ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಬೇಡ, ಅಂಬರೀಶ್ ಮಗ ಸ್ಪರ್ಧಿಸಲಿ: ಬೇಡಿಕೆ
ಅಭಿಷೇಕ್ ಚುನಾವಣಾ ಕಣಕ್ಕಿಳಿಯಲಿ
ಈ ನಡುವೆ ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಚ್.ಬಿ. ಅರವಿಂದ್ ಕುಮಾರ್ ಮಂಡ್ಯ ಲೋಕಸಭಾ ಕ್ಷೇತ್ರದಿಂದ ದಿ. ಅಂಬರೀಶ್ ಅವರ ಪುತ್ರ ಅಭಿಷೇಕ್ ಅವರನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಕಣಕ್ಕಿಳಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಹೊರ ಜಿಲ್ಲೆಯ ಅಭ್ಯರ್ಥಿಗಳು ಸ್ಪರ್ಧಿಸುವುದಕ್ಕೆ ನಮ್ಮ ವಿರೋಧವಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕರ್ಮಭೂಮಿ ಹಾಸನ ಜಿಲ್ಲೆಯಲ್ಲಿ ಬೇಕಿದ್ದರೆ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲಿ, ಜಿಲ್ಲೆಯಿಂದ ಸ್ಪರ್ಧಿಸಿ ಸಚಿವರಾಗಿ, ಕಾಂಗ್ರೆಸ್ ಪಕ್ಷ ಮುನ್ನಡೆಸಿದ ನಟ ಅಂಬರೀಷ್ ಅವರ ಪುತ್ರ ಅಭಿಷೇಕ್ ಅವರನ್ನು ಚುನಾವಣಾ ಕಣಕ್ಕಿಳಿಸಿ ಎಂದು ಆಗ್ರಹಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿಯೇ ಕಣಕ್ಕಿಳಿಯಲಿ
ಅಲ್ಲದೇ ಅಭಿಷೇಕ್ ಅವರು ಚುನಾವಣೆಗೆ ಸ್ಪರ್ಧಿಸುವ ಇಂಗಿತ ಹೊಂದಿದ್ದಾರೆಯೇ ಇಲ್ಲವೇ ಎಂಬುದನ್ನು ಪಕ್ಷದ ವರಿಷ್ಠರು ಮಾತುಕತೆ ನಡೆಸಿ ನಿರ್ಧಾರ ಪ್ರಕಟಿಸಲಿ. ಒಂದು ವೇಳೆ ಅಭಿಷೇಕ್ ಅವರ ಬದಲು ಸ್ಥಳೀಯ ನಾಯಕರಿಗೆ ಮೈತ್ರಿ ಪಕ್ಷ ಟಿಕೆಟ್ ನೀಡಿದರೆ ನಮ್ಮ ಬೆಂಬಲವಿದ್ದು, ಅದನ್ನು ಹೊರತುಪಡಿಸಿ ಬೇರೆಯವರು ಸ್ಪರ್ಧಿಸಿದರೆ ಅದನ್ನು ವಿರೋಧಿಸುವುದಾಗಿ ಹೇಳಿದ್ದಾರೆ. ಒಂದೆಡೆ ಜೆಡಿಎಸ್ ನ ಒಂದಷ್ಟು ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿಯೇ ಕಣಕ್ಕಿಳಿಯಲಿ ಎನ್ನುತ್ತಿದ್ದರೆ, ಕಾಂಗ್ರೆಸ್ ನ ಕಾರ್ಯಕರ್ತರು ಅಭಿಷೇಕ್ ಅವರನ್ನು ಕಣಕ್ಕಿಳಿಯುವಂತೆ ಒತ್ತಾಯಿಸುತ್ತಿದ್ದಾರೆ. ಎರಡು ಪಕ್ಷದ ಮುಖಂಡರು ಕೊನೆಯದಾಗಿ ಯಾವ ತೀರ್ಮಾನಕ್ಕೆ ಬರುತ್ತಾರೆ ಎಂಬುದರ ಮೇಲೆ ಮಂಡ್ಯದಲ್ಲಿ ಲೋಕಸಭಾ ಅಭ್ಯರ್ಥಿ ಯಾರು ಎಂಬುದು ನಿರ್ಧಾರವಾಗಲಿದೆ. ಆದರೆ ಇದೆಲ್ಲವೂ ಸಲೀಸಾಗಿ ನಡೆಯುತ್ತಾ ಎಂಬುದೇ ಪ್ರಶ್ನೆಯಾಗಿ ಕಾಡುತ್ತಿದೆ.