ಹುತಾತ್ಮನಾದಾಗ ನನ್ನ ಹೀರೋ ಎನ್ನಿರಿ ಎಂದಿದ್ದ ಮಂಡ್ಯದ ವೀರಯೋಧ ಗುರು
Recommended Video
ಮೈಸೂರು, ಫೆಬ್ರವರಿ 15: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಬಲಿಯಾದ ಯೋಧ ಗುರು ತವರೂರು ಮಂಡ್ಯ ಜಿಲ್ಲೆ. ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಸಮೀಪದ ಗುಡಿಗೆರೆ ಗ್ರಾಮ. 33ರ ಹರೆಯದ ಎಚ್.ಗುರು ಸಿಆರ್ ಪಿಎಫ್ ನ 82ನೇ ಬೆಟಾಲಿಯನ್ ಯೋಧರಾಗಿ ಕಾರ್ಯನಿರ್ವಹಿಸಿದ ಧೀರ.
ಮೂಲತಃ ಗುಡಿಗೆರೆಯ ನಿವಾಸಿಗಳಾದ ಕೃಷಿಕ ಹೊನ್ನಯ್ಯ - ಚಿಕ್ಕ ತಾಯಮ್ಮ ದಂಪತಿಯ ಮೂವರು ಮಕ್ಕಳಲ್ಲಿ ಮೊದಲನೇ ಪುತ್ರ. ಕಳೆದ 7-8 ವರ್ಷಗಳ ಹಿಂದೆ ಮಿಲಿಟರಿ ಸೇರಿದ್ದ ಗುರು ಈ ಮೊದಲು ಜಾರ್ಖಂಡ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಅವರು ನನಗೆ ಬೇಕಮ್ಮಾ, ಯೋಧನ ಮಡದಿಯ ಹೃದಯ ಹಿಂಡುವ ಆಕ್ರಂದನ
ಗುರು ತನ್ನ ಪ್ರಾಥಮಿಕ ಶಾಲಾ ವ್ಯಾಸಂಗವನ್ನು ಮದ್ದೂರು ತಾಲ್ಲೂಕು ಭಾರತೀನಗರ ದಿವ್ಯಜ್ಯೋತಿ ಕಾನ್ವೆಂಟ್ ನಲ್ಲಿ ಹಾಗೂ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ಶ್ರೀರಂಗಪಟ್ಟಣದ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಎಸ್ಎಸ್ಎಲ್ ಸಿ ಆಧಾರದ ಮೇಲೆ ಸಿ.ಆರ್.ಪಿ.ಎಫ್. ಮೂಲಕ ಮಿಲಿಟರಿ ಸೇರಿದ್ದರು. ಗುರು ಅವರ ಎರಡನೇ ಸೋದರ ಮಧು ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದು, ಮತ್ತೊಬ್ಬ ಸೋದರ ಆನಂದ್ ಹೋಂ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮೊದಲಿನಿಂದಲೂ ದೇಶ ಸೇವೆ ಮಾಡಬೇಕೆಂಬ ತುಡಿತ ಹೊಂದಿದ್ದ ಗುರುವಿಗೆ ಸೈನಿಕರೇ ಹೀರೋಗಳಾಗಿದ್ದರು. ಮುಂದೆ ಓದಿ...
ದೇಶ ಸೇವೆ ಮಾಡಬೇಕೆಂಬ ತುಡಿತ
ಗುರು ಆ ಹೀರೋಗಳಂತೆ ದೇಶಕ್ಕೇನಾದರೂ ಸೇವೆ ಮಾಡಿಯೇ ತೀರಬೇಕೆಂಬ ಹಂಬಲ ಹೊಂದಿದ್ದರು. ಅಲ್ಲದೇ ಅನೇಕ ಬಾರಿ ಮನೆಯವರಿಗೆ ನಾನು ಹುತಾತ್ಮನಾದಾಗ ಮಾತ್ರ ನನ್ನ ಹೀರೋ ಎಂದು ಕರೆಯಿರಿ ಎಂದಿದ್ದನ್ನು ತಾಯಿ ಚಿಕ್ಕ ತಾಯಮ್ಮ ನೆನೆದು ಕಣ್ಣೀರಿಡುತ್ತಿದ್ದಾರೆ.
ಇತ್ತೀಚೆಗಷ್ಟೇ ಹೊಸ ಮನೆ ಕಟ್ಟಿದ್ದರು
ಗುರು ಬಹುದಿನಗಳ ಆಸೆಯಂತೆ ಮದ್ದೂರಿನ ಗೂಡಿಗೆರೆಯಲ್ಲಿಯೇ ಇತ್ತೀಚೆಗಷ್ಟೇ ಹೊಸ ಮನೆ ಕಟ್ಟಿದ್ದರು. ಗೃಹ ಪ್ರವೇಶವಾಗಿ ಸುಮಾರು ಒಂದು ವರ್ಷವಾಗಿತ್ತು. ಗೃಹ ಪ್ರವೇಶದ ನಂತರ ಸ್ವಂತ ಮಾವನ ಮಗಳಾದ, ಹಲಗೂರು ಬಳಿಯ ಸಾಸಲಾಪುರ ಗ್ರಾಮದವರಾದ ಕಲಾವತಿಯನ್ನು ವಿವಾಹವಾಗಿದ್ದರು. 2011ರಲ್ಲಿ ಸಿಆರ್ ಪಿಎಫ್ ಗೆ ಸೇರ್ಪಡೆಯಾಗಿದ್ದರು.
ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್ಪಿಎಫ್ ಯೋಧರ ಹೆಸರುಗಳು
ಶ್ರೀನಗರದಲ್ಲಿ ಸೇವೆ ಸಲ್ಲಿಸಲು ನಿಯೋಜನೆ
ಜಾರ್ಖಂಡ್ ನಲ್ಲಿ 94ನೇ ಬೆಟಾಲಿಯನ್ ನಲ್ಲಿದ್ದ ಗುರು, ಬಳಿಕ ಶ್ರೀನಗರದಲ್ಲಿ ಸೇವೆ ಸಲ್ಲಿಸಲು ನಿಯೋಜನೆಗೊಂಡಿದ್ದರು. ವರ್ಷದ ಹಿಂದಷ್ಟೇ ಜಮ್ಮು-ಕಾಶ್ಮೀರಕ್ಕೆ ಗುರು ನಿಯೋಜನೆಗೊಂಡು 82 ಬೆಟಾಲಿಯನ್ ನಲ್ಲಿ ಸಿಟಿ/ಜಿಡಿ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಮಂಡ್ಯಕ್ಕೆ ಗುರು ಅವರ ಪಾರ್ಥಿವ ಶರೀರ
ಇದೀಗ ಆವಂತಿಪುರದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಗುರು ವೀರ ಮರಣವನ್ನಪ್ಪಿದ್ದಾರೆ. ತನ್ನ ಆಸೆಯಂತೆ ಹೀರೋ ಆಗಿಯೇ ಉಳಿದು ಅಜರಾಮರವಾಗಿದ್ದಾರೆ. ಇತ್ತ ಮಂಡ್ಯ ಜಿಲ್ಲಾಡಳಿತ ಇಂದು ಮಧ್ಯಾಹ್ನ ವಿಮಾನದ ಮೂಲಕ ಮಂಡ್ಯಕ್ಕೆ ಗುರು ಅವರ ಪಾರ್ಥಿವ ಶರೀರವನ್ನು ತರುತ್ತಿದೆ. ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.