ಕೆಆರ್ ಎಸ್, ಕಬಿನಿಯಿಂದ ಜು.28ಕ್ಕೆ ನಾಲೆಗಳಿಗೆ ನೀರು
ಮಂಡ್ಯ, ಜುಲೈ 18: ಕಬಿನಿ ಹಾಗೂ ಕೆಆರ್ ಎಸ್ ಜಲಾಶಯದಿಂದ ನಾಲೆಗಳಿಗೆ ಜುಲೈ 28ರಂದು ನೀರು ಹರಿಸಬೇಕು. ಹಾರಂಗಿ ಜಲಾಶಯದಿಂದಲೂ ಅದೇ ದಿನ ಇಲ್ಲವೇ ಆದಷ್ಟು ಶೀಘ್ರವಾಗಿ ನೀರು ಬಿಡಲು ಕ್ರಮ ಕೈಗೊಳ್ಳಿ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
Recommended Video
ಎಸ್.ಟಿ.ಸೋಮಶೇಖರ್ ಹಾಗೂ ಪೌರಾಡಳಿತ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಅಧ್ಯಕ್ಷತೆಯಲ್ಲಿ ಕೆಆರ್ ಎಸ್ ಬೃಂದಾವನ ಗಾರ್ಡನ್ ಕಾವೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ 2020ರ ಮುಂಗಾರು ಹಂಗಾಮಿನಲ್ಲಿ ಕೃಷ್ಣರಾಜಸಾಗರ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಒದಗಿಸುವ ಕುರಿತು ಮಾತನಾಡಿ, ಜುಲೈ 28ರಿಂದ ನೀರು ಬಿಡಲು ಸೂಚಿಸಿದ್ದು, ಎಲ್ಲ ಶಾಸಕರು ಒಪ್ಪಿಗೆ ಸೂಚಿದ್ದಾರೆ.
KRSನಿಂದ ತಮಿಳುನಾಡಿಗೆ ಹರಿದ ಕಾವೇರಿ, ರೈತರ ಆಕ್ರೋಶ
ಕೆಲವು ನಾಲೆಗಳ ದುರಸ್ತಿ ಇದ್ದು, ಇದನ್ನು ಶೀಘ್ರ ಮುಗಿಸಿ ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚಿಸಲಾಯಿತು. ಇನ್ನು ಸವಡೆಗಳಿಗೆ 6 ತಿಂಗಳಿನಿಂದ ವೇತನ ನೀಡದಿರುವ ಬಗ್ಗೆ ಸಭೆಯಲ್ಲಿ ಶಾಸಕರು ಗಮನಕ್ಕೆ ತಂದಿದ್ದು, ಶೀಘ್ರದಲ್ಲೇ ವೇತನ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸವಡೆಗಳಿಗೆ ಈ ಹಿಂದೆ ಇರುವ ಬಾಕಿ ವೇತನವು ಇನ್ನು 2-3 ವಾರಗಳಲ್ಲಿ ಪಾವತಿಯಾಗಬೇಕು. ಜೊತೆಗೆ ಮುಂದೆ ಬರುವ ಹೊಸ ಏಜೆನ್ಸಿಯಿಂದ ಅವರನ್ನು ಪುನರ್ ನೇಮಕ ಮಾಡಿಕೊಂಡು ಸರಿಯಾದ ಸಮಯಕ್ಕೆ ವೇತನ ಹಾಗೂ ಪಿಎಫ್, ಇಎಸ್ಐ ಸೌಲಭ್ಯಗಳು ಪಾವತಿಯಾಗುವಂತೆ ನೋಡಿಕೊಳ್ಳಬೇಕು ಎಂಬ ಸಲಹೆಗಳು ವ್ಯಕ್ತವಾದವು.
ಸಭೆಯಲ್ಲಿ, ಕಬಿನಿಯಲ್ಲಿ 15 ಟಿಎಂಸಿ ನೀರನ್ನು ಬಳಕೆ ಮಾಡಬಹುದಾಗಿದ್ದು, ಕೆರೆಗಳಿಗೆ ತುಂಬಿಸಲು 2 ರಿಂದ 2.5 ನೀರನ್ನು ಕೊಡಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಸಿ.ಎಸ್.ಪುಟ್ಟರಾಜು, ನಾಗೇಂದ್ರ, ಅಶ್ವಿನ್ ಕುಮಾರ್, ಡಾ.ಎಸ್.ಯತೀಂದ್ರ ಸೇರಿದಂತೆ ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರ, ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಜಿಪಂ ಸಿಇಒಗಳು ಇತರರು ಇದ್ದರು.
ಮಂಡ್ಯ ಜಿಲ್ಲೆಯ ಕೆಆರ್ ಎಸ್ ಗೆ ಭೇಟಿ ನೀಡಿದ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಪೌರಾಡಳಿತ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಅವರು ಕಾವೇರಿ ಮಾತೆ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು.