ಕೆಆರ್ ಎಸ್ ನಿಂದ ನಾಲೆಗಳಿಗೆ ನೀರು: ಸಿದ್ದರಾಮಯ್ಯ
ಮಂಡ್ಯ, ಸೆಪ್ಟೆಂಬರ್ 08: ಕೆಆರ್ ಎಸ್ ನಿಂದ ನಾಲೆಗಳಿಗೆ ನೀರು ಬಿಡಲಾಗುವುದು, ತಕ್ಷಣದಲ್ಲೇ ಕಟ್ಟು ನೀರು ಬಿಡುವ ಕುರಿತು ತೀರ್ಮಾನಿಸುತ್ತೇವೆ. ಐಸಿಸಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶುಕ್ರವಾರ ಮಂಡ್ಯ ಜಿಲ್ಲೆಯ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಚಾಲನೆ ನೀಡಿದರು ಆಗಮಿಸಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು. ಮಹದಾಯಿ ವಿವಾದ ಬಗೆ ಹರಿಸಲು ಕೇಂದ್ರದ ಮಧ್ಯಸ್ಥಿಕೆ ಅಗತ್ಯವಾಗಿದೆ, ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಅನುಮತಿ ಸಿಕ್ಕ ತಕ್ಷಣ ಕೆಲಸ ಪ್ರಾರಂಭಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಪುರಸ್ಕೃತ ಅಮೃತ್ ಯೋಜನೆಯಡಿ ಮಂಡ್ಯ ನಗರ ನೀರು ಸರಬರಾಜು ಯೋಜನೆಯ 3ನೇ ಹಂತ, ಒಳ ಚರಂಡಿ ವ್ಯವಸ್ಥೆ ಪುನರುಜ್ಜೀವನ ಹಾಗೂ ಉದ್ಯಾನವನ ಅಭಿವೃದ್ದಿ ಯೋಜನೆಗಳಿಗೆ ಮುಖ್ಯಮಂತ್ರಿಗಳು ಶಂಕು ಸ್ಥಾಪನೆ ನೆರವೇರಿಸಿ ಆಶ್ರಯ ಯೋಜನೆಯ ಸಾಲ ಮನ್ನಾ ಭಾಗ್ಯ ಪತ್ರವನ್ನು ಫಲಾನುಭವಿಗಳಿಗೆ ವಿತರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಮೆಗಾ ಡೈರಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಎ ಮಂಜು, ಎಂ ಕೃಷ್ಣಪ್ಪ, ಹೆಚ್ ಎಂ ರೇವಣ್ಣ ಉಪಸ್ಥಿತರಿದ್ದರು.